ಸರ್ಕಾರಿ ರಜೆ ಇಲ್ಲದಿದ್ದರೂ ಸ್ವಯಂ ರಜೆ ಘೋಷಿಸಿಕೊಂಡಿರುವ ಕೊಪ್ಪಳ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಸಂಭವಿಸಿದೆ.
ಶುಕ್ರವಾರ ಹೋಳಿ ಹುಣ್ಣಿಮೆ ಪ್ರಯುಕ್ತ ಜಿಲ್ಲಾಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಬಹುತೇಕ ನೌಕರರು ಕಚೇರಿಗೆ ಬರದೇ ಇದ್ದಿದ್ಧರಿಂದ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಎದುರಾಯಿತು.
ಕೊಪ್ಪಳ ಜಿಲ್ಲಾಡಳಿತ ನೌಕರರ ಅನಧಿಕೃತ ಗೈರಿನಿಂದ ಶುಕ್ರವಾರ ಜಿಲ್ಲಾಡಳಿತ ಕಚೇರಿ ಬಿಕೋ ಎನ್ನುತ್ತಿತ್ತು. ಎಲ್ಲ ಇಲಾಖೆಯ ಕಚೇರಿಗಳು ಸರ್ಕಾರಿ ರಜೆಯ ವಾತಾವರಣ ಕಂಡುಬಂದಿತು. ವೈಯಕ್ತಿಕ ಕೆಲಸಗಳ ನಿಮಿತ್ತ ಜಿಲ್ಲಾಡಳಿತ ಭವನಕ್ಕೆ ಬಂದಂತಹ ಸಾರ್ವಜನಿಕರು ನೌಕರರ ಅನಧಿಕೃತ ಗೈರುಹಾಜರಿ ಆಗಿರುವುದನ್ನು ಕಂಡು, ಸರ್ಕಾರಿ ನೌಕರರಿಗೆ ಹೇಳೋರಿಲ್ಲ, ಕೇಳೋರಿಲ್ಲವೆಂದು ಛೀಮಾರಿ ಹಾಕಿದರು.

“ಹೋಳಿ ಹುಣ್ಣಿಮೆ ದಿನ ಯಾವುದೇ ಸರ್ಕಾರಿ ರಜೆ ಇರುವುದಿಲ್ಲ. ಆದರೂ, ಜಿಲ್ಲಾಡಳಿತ ಭವನದ ಎಲ್ಲ ಇಲಾಖೆ ಹಾಗೂ ಎಲ್ಲ ವಿಭಾಗಳ ನೌಕರರು ಅನಧಿಕೃತ ಗೈರುಹಾಜರಾಗುವ ಮೂಲಕ ರಜೆಯ ವಾತವರಣ ನಿರ್ಮಾಣ ಮಾಡಿದ್ದರು. ಪ್ರಥಮ ದರ್ಜೆ ನೌಕರರು ಹಾಗೂ ಇತರೆ ಅಧಿಕಾರಿಗಳು ರಜೆ ಹಾಕದೇ ಗೈರು ಹಾಜರಿಯಾಗಿದ್ದರು. ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳಿಂದ ಅನಧಿಕೃತ ಗೈರಾಗುವ ಮೂಲಕ ಸರ್ಕಾರಿ ನೌಕರರು ಮಾಡಿದ್ದೇ ಕಾನೂನು, ಹೇಳಿದ್ದೇ ಶಾಸನ, ‘ತಾವು ಕಚೇರಿಗೆ ಬಂದರೇನು, ಬರದಿದ್ದರೇನು? ಎಂಬಂತೆ ಕೆಲವು ಅಧಿಕಾರಿಗಳ ವರ್ತನೆ ಕಂಡುಬಂದಿತು. ಜಿಲ್ಲಾಧಿಕಾರಿಗಳಿಗೆ ಇದು ಗೊತ್ತಿದ್ದರೂ ಗೊತ್ತಿಲ್ಲದವರಂತೆ ಜಿಲ್ಲಾಧಿಕಾರಿಗಳು ಕಣ್ಣುಮುಚ್ಚಿ ಕುಳಿತ್ತಿದ್ದಾರೆಂಬುದು ಮೇಲ್ನೋಟಕ್ಕೆ ಕಾಣುತ್ತಿದೆ” ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.

“ಕೊಪ್ಪಳ ಜಿಲ್ಲೆಯ ಸಾರ್ವಜನಿಕ ತೆರಿಗೆಯಿಂದ ಕೆಲಸ ಮಾಡುತ್ತಿರುವ ಜಿಲ್ಲಾಡಳಿತ ಭವನದ ವಿವಿಧ ಇಲಾಖೆಯ ಸಿಬ್ಬಂದಿಯು ಕೊಪ್ಪಳ ಜಿಲ್ಲಾ ಸಾರ್ವಜನಿಕರ ತೆರಿಗೆಯ ಹಣದಲ್ಲಿ ವೇತನ ಪಡೆಯುತ್ತಾರೆ. ಇವರ ಒಂದು ದಿನದ ವೇತನವನ್ನು ಕಡಿತ ಮಾಡಬೇಕು. ಜಿಲ್ಲಾಧಿಕಾರಿಗಳು ಈ ಎಲ್ಲ ಇಲಾಖೆಯ ಅಧಿಕಾರಿಗಳ ಹಾಗೂ ನೌಕರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ, ಕೊಪ್ಪಳ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ನೌಕರರ ಅನಧಿಕೃತ ಗೈರು ಹಾಜರಿ ಕುರಿತು ಲೋಕಾಯುಕ್ತರಿಗೆ ಹಾಗೂ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರಲಾಗುವುದು” ಎಂದು ಶರಣು ಪಾಟೀಲ್ ಎಚ್ಚರಿಕೆ ನೀಡಿದರು.
“ಜಿಲ್ಲಾಡಳಿತ ಭವನ ಕಚೇರಿಯ ಅಧಿಕಾರಿಗಳು ಹಾಗೂ ನೌಕರರು ಅನಧಿಕೃತ ಗೈರಾಗಿದ್ದರ ಕುರಿತು ಮಾಹಿತಿ ಕೇಳಲು ಹೋದರೆ, ಅಲ್ಲಿ ಉತ್ತರ ಹೇಳಲು ಸಂಬಂಧಿಸಿದ ಉನ್ನತ ಅಧಿಕಾರಿಗಳೇ ಇರಲಿಲ್ಲ. ತಮ್ಮ ಕೆಲಸದ ನಿಮಿತ್ತ ಜಿಲ್ಲಾಡಳಿತ ಭವನಕ್ಕೆ ಬಂದ ಸಾರ್ವಜನಿಕರ ಯಾವುದೇ ರೀತಿಯ ಕೆಲಸ-ಕಾರ್ಯಗಳಾಗಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇಒ, ಜಿಲ್ಲಾಧಿಕಾರಿ, ಉಪ ನಿರ್ದೇಶಕರುಗಳು, ಜಂಟಿ ನಿರ್ದೇಶಕರು, ಸಹಾಯಕ ಆಯುಕ್ತರು, ತಹಶೀಲ್ದಾರರು ಸೇರಿದಂತೆ ಕಚೇರಿಗಳಲ್ಲಿ ಯಾವ ಅಧಿಕಾರಿಯೂ ಇರಲಿಲ್ಲ. ಕಚೇರಿಯಲ್ಲಿ ರಜೆ ಚೀಟಿ ನೀಡದೆ ಎರಡು ದಿನದಿಂದ ಅನೇಕ ಉನ್ನತ ಹಾಗೂ ಕಿರಿಯ ನೌಕರರೂ ಮಾಯವಾಗಿದ್ದಾರೆ. ಅಲ್ಲದೇ ನೌಕರರು ಇಲ್ಲದೇ ಬಿಕೋ ಎನ್ನುತ್ತಿರುವ ವಿವಿಧ ಇಲಾಖೆಯ ಕಚೇರಿಗಳಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿದ್ದವು, ಫ್ಯಾನ್ಗಳು ತಿರುಗುತ್ತಿದ್ದವು. ಕಚೇರಿಯಲ್ಲಿ ಇದ್ದ ಅಲ್ಲೊಬ್ಬ ಇಲ್ಲೊಬ್ಬ ನೌಕರರನ್ನು ಈ ಬಗ್ಗೆ ಕೇಳಿದರೆ ಉಡಾಫೆ ಉತ್ತರ ಕೊಡುತ್ತಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪಿಎಸ್ಐ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ; ಕ್ರಮಕ್ಕೆ ಆಗ್ರಹ
“ಹೋಳಿ ಹುಣ್ಣಿಮೆ ಇರುವುದರಿಂದ ಬಹಳ ಸಿಬ್ಬಂದಿ ಬಂದಿಲ್ಲವೆಂದು ಸಮಜಾಯಿಷಿ ಕೊಟ್ಟುಕೊಳ್ಳುತ್ತಾರೆ. ಕಚೇರಿಗಳಲ್ಲಿ ಯಾರೂ ಇಲ್ಲದಿದ್ದರೂ ಕೂಡಾ ಈ ರೀತಿಯ ವಿದ್ಯುತ್ ದೀಪಗಳನ್ನು ಹಾಗೂ ಫ್ಯಾನ್ಗಳನ್ನು ಉರಿಸಿದರೆ ವಿದ್ಯುತ್ ಬಿಲ್ ಕಟ್ಟುವವರು ಯಾರು? ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ವ್ಯರ್ಥಮಾಡುವ ಮೂಲಕ ಸರ್ಕಾರಿ ನೌಕರರು ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆ” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.