ಎಸ್ಸಿಪಿ ಹಾಗೂ ಟಿಎಸ್ಪಿ ಮೀಸಲು ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಅತ್ಯವಶ್ಯಕವಾಗಿ ಬಳಸಿದಲ್ಲಿ ವರ್ಷದಲ್ಲೇ ಫುಲ್ ಫಿಲ್ ಮಾಡಿ ಪರಿಶಿಷ್ಟರ ಶ್ರೇಯೋಭಿವೃದ್ಧಿಗೆ ಮಾತ್ರ ಬಳಸಬೇಕಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ದಲಿತರ ಹಣ ಬಳಕೆ ಬಗ್ಗೆ ಸಮರ್ಥಿಸಿಕೊಂಡರು.
ತಾಲ್ಲೂಕಿನ ಕಡಬ ಗ್ರಾಮ ಪಂಚಾಯಿತಿಯ ನೂತನ ಕಟ್ಟಡಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು 2013 ರಲ್ಲಿ ಸಿದ್ದರಾಮಯ್ಯ ಅವರೇ ಮೀಸಲು ಹಣ ಬಳಸದಂತೆ ಕಾನೂನು ಜಾರಿ ಮಾಡಿದ್ದರು. ತುರ್ತು ಬಳಸಿದರೂ ವರ್ಷದಲ್ಲಿ ಹಣ ಭರಿಸಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆ ಮಾಡಿ ಪೊಲೀಸ್ ಕೇಸು ಕೂಡಾ ದಾಖಲು ಮಾಡಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಾಂವಿಧಾನಾತ್ಮಕ ಹುದ್ದೆ ಅಲ್ಲ ಎಂಬ ವಿರೋಧ ಪಕ್ಷದ ಟೀಕೆಗೆ ಪ್ರತಿಕ್ರಿಯಿಸಿದ ಅವರು ಜನಾಂಗಕ್ಕೊಂದು ನಿಗಮ ರಚನೆ ಮಾಡಲಾಗಿತ್ತು. ನಿಗಮ ಮಂಡಳಿ ರಚಿಸಿ ಮೂಲ ವೆಚ್ಚಗಳನ್ನು ಸರ್ಕಾರವೇ ಭರಿಸಿವೆ. ಯಾವುದೂ ಸಂವಿಧಾನ ಪ್ರಕಾರವಿಲ್ಲ. ಆದರೂ ಆಯಾ ಸರ್ಕಾರ ನಿಗಮ, ಸಮಿತಿ ರಚಿಸಿ ನಡೆಸುವುದು ವಾಡಿಕೆಯಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಬಗ್ಗೆ ಸಮರ್ಥಿಸಿಕೊಂಡು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿ ಸದನದ ಆರಂಭದಲ್ಲಿ ಔತಣ ಕೂಟ ನಡೆಸಿಕೊಂಡು ಬಂದಿದ್ದಾರೆ. ಹಾಗೆಯೇ ಈ ಬಾರಿಯೂ ಆಯೋಜನೆ ಮಾಡಿದ್ದು ವಿರೋಧ ಪಕ್ಷಕ್ಕೆ ಆಹಾರವಾಗಿದೆ ಅಷ್ಟೇ. ಪ್ರಜಾಪ್ರಭುತ್ವ ಅವರವರ ಹೇಳಿಕೆ ನೀಡಲು ಸ್ವತಂತ್ರರು ಎಂದು ಛೇಡಿಸಿದರು.
ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗಳು ಕಳಪೆ ಬಗ್ಗೆ ದೂರು ಬಂದ ತಕ್ಷಣವೇ ಪಿಡಿಓಗಳ ಸಭೆ ಕರೆದು ಕಾಮಗಾರಿಯು ಪೂರ್ಣ ಗೊಂಡಿರುವ ಬಗ್ಗೆ, ಗುಣಮಟ್ಟದ ಬಗ್ಗೆ ಕೂಲಂಕಷ ಪರಿಶೀಲನೆ ಮಾಡಿ ಹಸ್ತಾಂತರ ಪಡೆಯಬೇಕು. ದೂರು ಇರುವ ಕೆಲಸವನ್ನು ಸರಿಪಡಿಸಿ ಪಂಚಾಯಿತಿಗೆ ನೀಡಬೇಕು. ಜೊತೆಗೆ ಒಂದು ವರ್ಷ ಕಳೆದರೂ ಕೆಲಸ ಆರಂಭಿಸಿದ ಗುತ್ತಿಗೆ ರದ್ದು ಮಾಡಿ ಮರು ಟೆಂಡರ್ ಮಾಡಲು ಸೂಚಿಸಲಾಗಿದೆ ಎಂದ ಅವರು ಸಿಸಿ ರಸ್ತೆಗಳ ಕಾಮಗಾರಿಗಳು ನಿರಂತರ ನಡೆಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಎಲ್ಲೂ ಕಾಣದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಟಾಸ್ಕ್ ಫೋರ್ಸ್ ಸಮಿತಿಯು ನೀರಿನ ತುರ್ತು ಅರಿತು ತೀವ್ರ ನಿಗಾವಹಿಸಿದೆ. ಸಹಾಯವಾಣಿ ಕೇಂದ್ರ ತೆರೆದಿದೆ. ಸಮಸ್ಯೆ ಕಂಡಲ್ಲಿ ತುರ್ತು ಕ್ರಮಕ್ಕೆ ಪಿಡಿಓಗಳಿಗೆ ಸೂಚಿಸಿದ್ದು, ನೀರಿಗೆ ಮೊದಲ ಆದ್ಯತೆ ನೀಡಲು ತಿಳಿಯಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಡಬ ಗ್ರಾಪಂ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷೆ ಕಲ್ಪನಾ, ಸದಸ್ಯರಾದ ಕಾಡಶೆಟ್ಟಿಹಳ್ಳಿ ಸತೀಶ್, ಸಿ.ಕೆ.ಗೌಡ, ವೆಂಕಟರಂಗಯ್ಯ, ಕವಿತಾ, ಪೂರ್ಣಲಕ್ಷ್ಮೀ, ಶಿಲ್ಪಾ, ಲೋಕೇಶ್, ಪೂರ್ಣಿಮಾ, ನಾಗರತ್ನಮ್ಮ, ಪುಟ್ಟತಾಯಮ್ಮ, ಭರತ್ ಗೌಡ, ಗಿರೀಶ್, ರಂಗನಾಥ್, ತಾಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ, ಮುಖಂಡರಾದ ಧರ್ಮೇಗೌಡ, ರಾಜೇಶ್, ದರ್ಶನ್, ಉಮೇಶ್ ಇತರರು ಇದ್ದರು.
