- ಗ್ರಾಮೀಣ ಬ್ಯಾಂಕ್ ಕೃಷಿ ಸಾಲ ವಸೂಲಾತಿ ಪದ್ಧತಿಗೆ ವಿರೋಧ
- ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವ
ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಡಳಿತ ಮಂಡಳಿಯು ರೈತರಿಗೆ ನೀಡಿದ ಕೃಷಿ ಸಾಲದ ವಸೂಲಾತಿ ಪದ್ಧತಿಯನ್ನು ವಿರೋಧಿಸಿ ಮಾ. 29ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಿಳಿಸಿದೆ.
ಸಂಘಟನೆಯು ಮಾ.6 ರಿಂದ ರಾಜ್ಯದಾದ್ಯಂತ ಚೈತನ್ಯ ಯಾತ್ರೆಯನ್ನು ಹಮ್ಮಿಕೊಂಡಿತ್ತು. ಇದರ ಸಮಾರೋಪದ ಅಂಗವಾಗಿ ಮಾ.29 ರಂದು ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಆರ್ ಮಾದವರೆಡ್ಡಿ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಳೆದ ಮೂರು ವರ್ಷಗಳಿಂದ ರಾಜ್ಯದಲ್ಲಿ ಪ್ರಕೃತಿ ವಿಕೋಪದಿಂದಾಗಿ ಬೆಳೆನಾಶವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕೋವಿಡ್-19 ಬಂದಾಗಿನಿಂದ ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ದರ ಸಿಗದೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲವರು ಇದನ್ನು ಎದುರಿಸಲಾಗದೇ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ರೈತರ ಆತ್ಮಹತ್ಯೆ ತಪ್ಪಿಸಲು ಎಸ್ಬಿಐ ಬ್ಯಾಂಕ್ ರೈತರ ಸಾಲದ ಅಸಲಿನ ಶೇ.10 ರಷ್ಟು ಪಾವತಿಸಿಕೊಂಡು, ಉಳಿದ ಸಾಲವನ್ನು ಮನ್ನಾ ಮಾಡಿದೆ. ಆದರೆ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಯಾವುದೇ ರಿಯಾಯತಿ ನೀಡದೇ, ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? : ರಾಯಚೂರು |ಭೂಮಿ ಮಂಜೂರಾತಿ, ಹಕ್ಕುಪತ್ರ ವಿತರಣೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ
“ಸುಸ್ತಿದಾರರ ಸಾಲದ ಅಸಲಿನ ಶೇ.30ರಷ್ಟು ಪಾವತಿಸಲು ರೈತರು ಒಪ್ಪಿಕೊಂಡು ಶೇ.40ರಷ್ಟು ಪಾವತಿಸಲು ಮನವೊಲಿಸುತ್ತೇವೆ. ಆದರೆ, ಬ್ಯಾಂಕ್ ಅಧಿಕಾರಿಗಳು ಉಳಿದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು” ಎಂದು ಒತ್ತಾಯಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಾಲ ವಸೂಲಾತಿ ಪದ್ಧತಿಯ ಬಗ್ಗೆ ರಾಜ್ಯದ ರೈತರಿಗೆ ಅರಿವು ಮೂಡಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಚೈತನ್ಯ ಯಾತ್ರೆ ಆರಂಭಿಸಿದ್ದು ಮಾ.30ಕ್ಕೆ 100 ದಿನ ಪೂರೈಸಲಿದೆ” ಎಂದು ತಿಳಿಸಿದರು.
“ಮಾ. 29ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಕಾಲ್ನಡಿಗೆ ಜಾಥಾದ ಮೂಲಕ ಆರ್ಬಿಐ ಮತ್ತು ಕೆನರಾ ಬ್ಯಾಂಕ್ ಕಚೇರಿಗೆ ಮನವಿ ಸಲ್ಲಿಸಲಾಗುವುದು” ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡ ಮಾರೆಪ್ಪ ಹರವಿ, ವಿಶ್ವನಾಥ, ಸುರೇಂದ್ರ, ಪ್ರಭಾಕರ ರೆಡ್ಡಿ, ಉಮಾಪತಿ ಗೌಡ ಸೇರಿದಂತೆ ಹಲವರು ಹಾಜರಿದ್ದರು.