ಆರೆಸ್ಸೆಸ್ ನವರಿಗೆ ಬಡ ಮಕ್ಕಳ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ರಾಜ್ಯದ ಮೂಲೆ ಮೂಲೆಯಿಂದ ಬಡ ಮಕ್ಕಳನ್ನು ಆರಿಸಿ ಶಿಕ್ಷಣ ಕೊಡಿಸುವ ಜವಾಬ್ದಾರಿ ಹೊರಬಹುದು. ಅದು ಬಿಟ್ಟು ದೂರದ ಮೇಘಾಲಯ, ನೇಪಾಳದ ಮಕ್ಕಳನ್ನು ಯಾಕೆ ಕರೆತಂದು ಗೋಕುಲ ಶಾಲೆಗೆ ಸೇರಿಸಿದರು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.
ಮಂಡ್ಯ ಜಿಲ್ಲೆಯ ಮಳವಳ್ಳಿಯ ಮಾರ್ವಾಡಿ ಸಂಘಟನೆಗಳು ಶುಕ್ರವಾರ ಹೋಳಿ ಹಬ್ಬ ಆಚರಿಸಿ ಅಲ್ಲಿ ಮಿಕ್ಕಿದ ಊಟವನ್ನು ಸಂಜೆ ಟಿ ಕಾಗೇಪುರ ಗೋಕುಲ ವಿದ್ಯಾಸಂಸ್ಥೆಯ ವಸತಿನಿಲಯಕ್ಕೆ ನೀಡಿದ್ದಾರೆ. ಅದನ್ನು ತಿಂದ ನಂತರ 30 ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಏಳನೇ ತರಗತಿಯ ವಿದ್ಯಾರ್ಥಿ ಭಾನುವಾರ ಮೃತಪಟ್ಟಿದ್ದಾನೆ. ಮೃತ ವಿದ್ಯಾರ್ಥಿ ಮೇಘಾಲಯ ಮೂಲದವನು. ಐದು ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಈ ಶಾಲೆಯಲ್ಲಿ 27 ಮಂದಿ ಮೇಘಾಲಯ ಮತ್ತು ನೇಪಾಳ ಮೂಲದವರು ಇದ್ದಾರೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಎಲ್ಲಿಯ ಮೇಘಾಲಯ ಎಲ್ಲಿಯ ಮಳವಳ್ಳಿ! ಮೇಘಾಲಯದ ಅಷ್ಟು ಮಕ್ಕಳನ್ನು ಯಾರು ಕರೆತಂದರು? ಯಾವ ಉದ್ದೇಶಕ್ಕೆ ಅವರೆಲ್ಲ ಮಳವಳ್ಳಿಯ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ? ಕೂಲಿಕಾರರ ಮಕ್ಕಳಾದರೆ ಸರ್ಕಾರಿ ಶಾಲೆಗೆ ಯಾಕೆ ಸೇರಿಲ್ಲ? ಇಂತಹ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ.
ಆ ಶಾಲೆ ಯಾರಿಗೆ ಸೇರಿದ್ದು, ಮುಖ್ಯಸ್ಥರ ಹಿನ್ನೆಲೆಯೇನು ಎಂದು ತಿಳಿಯುವ ಪ್ರಯತ್ನ ಈ ದಿನ. ಕಾಮ್ ಮಾಡಿತು. ಮಂಡ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಕ ವೀರಪ್ಪ ಅವರನ್ನು ಮಾತನಾಡಿಸಿದಾಗ, “ಈ ಶಾಲೆ ಲಂಕೇಶ್ ಎಂಬವರಿಗೆ ಸೇರಿದೆ. ಸೀತಾರಾಂ ಎಂಬ ವ್ಯಕ್ತಿ ಮೇಘಾಲಯದ ಮಕ್ಕಳನ್ನು ಕರೆತಂದು ಈ ಶಾಲೆಗೆ ಸೇರಿಸಿದ್ದಾರೆ ಎಂಬುದು ಗೊತ್ತಾಗಿದೆ” ಎಂದು ಮಾಹಿತಿ ನೀಡಿದರು.
ಈ ಸೀತಾರಾಂ ಯಾರು ಎಂದು ಅವರ ಮೂಲ ಹುಡುಕುವ ಪ್ರಯತ್ನ ಮಾಡಿದಾಗ, ಅವರು ಮಂಗಳೂರು ಮೂಲದವರು. ಸದ್ಯ ಮೇಘಾಲಯದಲ್ಲಿ ಆರೆಸ್ಸೆಸ್ಸಿನ ಪ್ರಚಾರಕ ಎಂಬುದು ತಿಳಿದುಬಂತು. ಆರೆಸ್ಸೆಸ್ ನವರಿಗೆ ಬಡ ಮಕ್ಕಳ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ, ರಾಜ್ಯದ ಮೂಲೆ ಮೂಲೆಯಿಂದ ಬಡ ಕುಟುಂಬಗಳ ಮಕ್ಕಳು ಆರಿಸಿ ತಂದು ಶಿಕ್ಷಣ ಕೊಡಿಸಬಹುದಿತ್ತು. ಅದು ಬಿಟ್ಟು ಮೇಘಾಲಯ, ನೇಪಾಳದ ಮಕ್ಕಳನ್ನು ಯಾಕೆ ಕರೆತಂದು ಗೋಕುಲ ಶಾಲೆಗೆ ಸೇರಿಸಿದರು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಕ್ರೈಸ್ತರ ಸಂಖ್ಯೆ ಹೆಚ್ಚು ಇರುವ ಅಸ್ಸಾಂ, ಮಣಿಪುರ, ಮೇಘಾಲಯ ರಾಜ್ಯಗಳಿಗೆ ಕರ್ನಾಟಕ, ಕೇರಳದಿಂದ ಕೆಲವರನ್ನು ಆಯ್ದು ಪ್ರಚಾರಕರನ್ನಾಗಿ ಕಳಿಸಿಕೊಡಲಾಗುತ್ತದೆ. ಅಂಥವರಲ್ಲಿ ಸೀತಾರಾಂ ಒಬ್ಬರು ಎಂದು ಆರೆಸ್ಸೆಸ್ನ ಮಾಜಿ ಕಾರ್ಯಕರ್ತರೊಬ್ಬರು ತಿಳಿಸಿದರು.
ಆರೆಸ್ಸೆಸ್ ನವರು ದೇಶದಾದ್ಯಂತ ಇಂತಹ ಸಾವಿರಾರು ಶಾಲೆಗಳನ್ನು ತೆರೆದು ಗುಡ್ಡಗಾಡು ಮಕ್ಕಳಿಗೆ ಉಚಿತ ಶಿಕ್ಷಣ ಕೊಡಿಸುವ ಆಮಿಷ ಒಡ್ಡಿ, ಪುಟ್ಟ ಮಕ್ಕಳನ್ನು ಇಲ್ಲಿಗೆ ಕರೆತಂದು ಆರೆಸ್ಸೆಸ್ನ ಸಿದ್ಧಾಂತವನ್ನು ಅವರ ತಲೆಗೆ ತುಂಬಲಾಗುತ್ತದೆ. ನಂತರ ಅವರನ್ನು ಸಂಘದ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಹತ್ತನೇ ತರಗತಿಯವರೆಗೆ ಶಿಕ್ಷಣ ನೀಡಿ ನಂತರ ಅವರೆಲ್ಲ ಎಲ್ಲಿಗೆ ಹೋಗುತ್ತಾರೆ ಎಂಬುದು ಮಾತ್ರ ನಿಗೂಢ. ಅವರೆಲ್ಲ ತಮ್ಮ ಊರುಗಳಿಗೆ ತೆರಳಿ ಪ್ರಚಾರಕರಾಗಿ ಕೆಲಸ ಮಾಡುತ್ತಾರೆ. ಮಕ್ಕಳನ್ನು ಮತ್ತು ಅವರ ಪೋಷಕರನ್ನು ಸೆಳೆಯಲು ಶಾಲೆ ಒಂದು ಸಾಧನ. ಉಚಿತ ಶಿಕ್ಷಣ ಕೊಡಿಸುವ ಆಮಿಷಕ್ಕೆ ಬಲಿಯಾಗಿ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಗೆ ಹೆತ್ತವರು ತಮ್ಮ ಮಕ್ಕಳನ್ನು ಕಳಿಸಿಕೊಡುತ್ತಾರೆ ಎಂದು ಅವರು ಈದಿನಕ್ಕೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಹೇಳಿದ್ದೇನು?
ಶಾಲೆಯ ಬಗ್ಗೆ ಮಾಹಿತಿ ಪಡೆಯಲು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರನ್ನು ಸಂಪರ್ಕಿಸಲಾಯಿತು. “ಗೋಕುಲ ವಿದ್ಯಾಸಂಸ್ಥೆ 1989ರಲ್ಲಿ ನೋಂದಣಿಯಾಗಿದೆ. ಏಳು ಜನ ಟ್ರಸ್ಟಿಗಳು ಇದ್ದಾರೆ. ಪ್ರತಿ ವರ್ಷವೂ ಪರವಾನಗಿ ನವೀಕರಣ ಮಾಡಿದ್ದಾರೆ. ಒಟ್ಟು 250 ವಿದ್ಯಾರ್ಥಿಗಳು ಇದ್ದಾರೆ. ಮೇಘಾಲಯದ ವಿದ್ಯಾರ್ಥಿಗಳನ್ನು ಅವರ ಪೋಷಕರೇ ದಾಖಲಿಸಿದ್ದಾರೆ ಎಂದು ಶಾಲೆಯವರು ಹೇಳಿದ್ದಾರೆ. ಎಲ್ಲ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಅವರು ಬಂದ ನಂತರವಷ್ಟೇ ಉಳಿದ ವಿವರಗಳು ಸಿಗಲಿವೆ” ಎಂದು ಹೇಳಿದರು.
ಮಳವಳ್ಳಿಯ ಸ್ಥಳೀಯ ಕೃಷ್ಣ ಎಂ ವಿ ಅವರು ಮಾತಿಗೆ ಸಿಕ್ಕರು. “ಈ ಶಾಲೆ ಇರುವುದು ಮಳವಳ್ಳಿಯ ಹೊರವಲಯ ಟಿ ಕಾಗೇಪುರದಲ್ಲಿ. ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದ ಚಂದ್ರ ಆಚಾರಿ ಎಂಬವರು ಈ ಶಾಲೆಯನ್ನು ಶುರು ಮಾಡಿದ್ರು. ಅವರ ನಿಧನದ ನಂತರ ಪುತ್ರ ಲಂಕೇಶ್ ಅವರು ನಡೆಸುತ್ತಿದ್ದಾರೆ. ಅವರಿಗೆ ಎರಡು ಶಾಲೆಗಳಿವೆ. ಒಂದು ಅನುದಾನಿತ ಶಾಲೆ ಎಂದು ಮಾಹಿತಿ ನೀಡಿದರು. ಬೇರೆ ರಾಜ್ಯದ ಮಕ್ಕಳು ಮಾತ್ರ ಹಾಸ್ಟೆಲ್ನಲ್ಲಿ ತಂಗುತ್ತಾರೆ. ಅವರಿಗೆ ಹೋಟೆಲು ಮತ್ತು ಕಲ್ಯಾಣ ಮಂಟಪಗಳಲ್ಲಿ ಉಳಿದ ಆಹಾರವನ್ನು ತರಿಸಿ ಕೊಡಲಾಗುತ್ತಿತ್ತು” ಎಂದು ಸ್ಥಳೀಯರು ಹೇಳುತ್ತಿರುವುದಾಗಿ ಅವರು ತಿಳಿಸಿದರು.
ನಿನ್ನೆ ಮೃತಪಟ್ಟ ಬಾಲಕನ ಮೃತದೇಹವನ್ನು ಮೇಘಾಲಯಕ್ಕೆ ವಿಮಾನದಲ್ಲಿ ಕೊಂಡೊಯ್ಯಲಾಗಿದೆ ಎಂದು ಮತ್ತೊಬ್ಬರು ಮಾಹಿತಿ ನೀಡಿದರು. ಅಷ್ಟು ಬೇಗ ಬಾಲಕನ ಪೋಷಕರು ಬಂದು ಮೃತದೇಹವನ್ನು ಕೊಂಡೊಯ್ದರೇ? ಅಥವಾ ಕೊಂಡೊಯ್ದವರು ಯಾರು ಎಂಬುದು ಪ್ರಶ್ನಾರ್ಹ.
ಹೀಗೆ ಬೇರೆ ರಾಜ್ಯಗಳಿಂದ ಮಕ್ಕಳನ್ನು ಕರೆತಂದು ಶಿಕ್ಷಣ ನೀಡುವ ನೆಪದಲ್ಲಿ ತಮ್ಮ ಸಿದ್ಧಾಂತವನ್ನು ತುಂಬುವ, ಅವರನ್ನು ತಮ್ಮ ಸ್ವಾರ್ಥ ಕಾರ್ಯಕ್ಕೆ ಬಳಸಿಕೊಳ್ಳುವುದನ್ನು ದಂಧೆ ಎಂದೇ ಕರೆಯಬೇಕಾಗುತ್ತದೆ. ಈ ಬಗ್ಗೆ ಸರ್ಕಾರ ನಿಗಾ ಇಡುವುದು ಉತ್ತಮ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.
ವಾಸ್ತವಗಳನ್ನು ತೆರೆದಿಡುವ ವರದಿ