“ಗ್ರಾಮೀಣ ಪ್ರದೇಶವನ್ನು ಸ್ವಚ್ಛವಾಗಿಡುವಲ್ಲಿ ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರ ಪಾತ್ರ ಬಹುಮುಖ್ಯವಾದುದು. ಇಂತಹ ಶ್ರಮಿಕರು ಇಂದು ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದೇ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಈ ಮಹಿಳಾ ಕಾರ್ಮಿಕರನ್ನು ವೇತನ ಭದ್ರತೆ ಸೌಲಭ್ಯ ಒದಗಿಸಿ, ರಾಜ್ಯ ಸರಕಾರ ಖಾಯಂಗೊಳಿಸಬೇಕು” ಎಂದು ಎಂ.ಬಿ ನಾಡಗೌಡ ಒತ್ತಾಯಿಸಿದರು.
ಹಾವೇರಿ ಪಟ್ಟಣದ ಜಿಲ್ಲಾ ಪಂಚಾಯತ ಕಛೇರಿ ಎದುರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘಟನೆ ನೇತೃತ್ವದಲ್ಲಿ ಸ್ವಚ್ಛವಾಹಿನಿ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
“ಹಳ್ಳಿಗಳ ಸ್ವಚ್ಚತೆಯ ಜವಾಬ್ದಾರಿ ನಿಭಾಯಿಸುತ್ತಿರುವ ಸ್ವಚ್ಛವಾಹಿನಿ ನೌಕರರಿಗೆ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ರಾಜ್ಯ ಸರ್ಕಾರದಿಂದ ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಕೊಡುತ್ತಿಲ್ಲ. ಸ್ವಚ್ಛವಾಹಿನಿ ವಾಹನಗಳಿಗೆ ವಿಮೆ ನವೀಕರಣ ಮಾಡುತ್ತಿಲ್ಲ. ‘ಬೇಟಿ ಬಚಾವೋ ಬೇಟಿ ಪಡಾವೋ’ ಎನ್ನುವ ಸರ್ಕಾರಗಳು ಜೀವದ ಹಂಗು ತೊರೆದು ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿಯುತ್ತಿರುವ ಮಹಿಳಾ ನೌಕರರ ವೇತನವನ್ನು ಬಾಕಿ ಉಳಿಸಿಕೊಂಡಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
“ಸರಕಾರ ಕೂಡಲೇ ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ತಿಂಗಳು 5ನೇ ತಾರೀಖಿಗೆ ವೇತನ ನೀಡಬೇಕು. ಬಾಕೀ ವೇತನನ್ನು ಪಾವತಿಸಲು ತಕ್ಷಣ ಕ್ರಮ ಕೈಗೊಳ್ಳಲು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಿಗೂ ಸೂಕ್ತ ನಿರ್ದೇಶನ ನೀಡಬೇಕು” ಎಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಅನ್ನದಾನಪ್ಪ ಕೆ. ಹೆಬಸೂರು ಮಾತನಾಡಿ, “ಸ್ವಚ್ಛವಾಹಿನಿ ಗಾಡಿಗಳಿಗೆ ವಿಮೆ ನವೀಕರಣ ಮಾಡಿಕೊಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ಸ್ವಚ್ಛತಾ ಸಿಬ್ಬಂಧಿಗಳಿಗೆ ರಕ್ಷಣಾ ಸಲಕರಣೆಗಳನ್ನು ಒದಗಿಸಬೇಕು. ಸ್ವಚ್ಛವಾಹಿನಿ ಮಹಿಳಾ ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ವಿಮೆ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
ಡಿ ವೈ ಎಫ್ ಐ ರಾಜ್ಯ ಪ್ರದಾನ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ತರಬೇತಿ ಪಡೆದ ಮಹಿಳಾ ಡ್ರೈವರ್ ಗಳಿಗೆ ಮಾತ್ರ ಆಟೋಗಳನ್ನ ಕೊಡಲು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯತಿಗಳಲ್ಲಿ ಕೆಟ್ಟು ನಿಂತಿರುವ ಆಟೋಗಳ ದುರಸ್ತಿಯನ್ನ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು. ಸ್ವಚ್ಚವಾಹಿನಿ ನೌಕರರನ್ನು ಪ್ರತಿ ವರ್ಷ ನವೀಕರಿಸುವ ಬದಲಾಗಿ ಒಮ್ಮೆ ಕೆಲಸಕ್ಕೆ ಸೇರಿಸಿಕೊಂಡವರನ್ನು ಕೆಲಸದಲ್ಲಿ ಖಾಯಂ ಆಗಿ ಮುಂದುವರೆಸಬೇಕು. ಸ್ವಚ್ಛವಾಹಿನಿ ನೌಕರರನ್ನು ಗ್ರಾಮ ಪಂಚಾಯತಿ ನೌಕರರೆಂದು ಪರಿಗಣಿಸಿ ಗ್ರಾಮ ಪಂಚಾಯತಿ ನೌಕರರಿಗೆ ನೀಡುವ ಸೌಲಭ್ಯಗಳನ್ನು ಜಾರಿಗೊಳಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಬಾರ್ ಸಿಬ್ಬಂದಿ ಮೇಲೆ ಯುವ ಕಾಂಗ್ರೆಸ್ ಅಧ್ಯಕ್ಷನಿಂದ ಹಲ್ಲೆ
ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಜಗದೀಶ ಕೋಟಿ, ಸುಭಾಸ್ ಸೊಟ್ಟೆಪ್ಪನವರ, ದೀಪಾ ಛಲವಾದಿ, ಜ್ಯೋತಿ ಮಾಸುರು, ವೀಣಾ ಮತ್ತೂರು, ಪ್ರೇಮಾ ಅಂಗಡಿ, ವೈಶಾಲಿ ಮೇವುಂಡಿ, ಸರೋಜಾ ಎಸ್, ಗೌರಮ್ಮ ಭಜಂತ್ರಿ ಸೇರಿದಂತೆ ವಿವಿಧ ತಾಲೂಕಿನ ಸ್ವಚ್ಛವಾಹಿನಿ ನೌಕರರು ಪಾಲ್ಗೊಂಡಿದ್ದರು.
