ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಅಪರಿಚಿತ ಶವದ ದಫನ ಕಾರ್ಯವು ರವಿವಾರ ಬೀಡಿನಗುಡ್ಡೆಯಲ್ಲಿರುವ ನಗರಸಭೆಯ ದಫನಭೂಮಿಯಲ್ಲಿ ಗೌರವಯುತವಾಗಿ ನಡೆಸಲಾಯಿತು.
ಮಾರ್ಚ್ 5 ರಂದು ಕಾಪುವಿನ ಪಾದಚಾರಿ ರಸ್ತೆಯಲ್ಲಿ ಪ್ರಜ್ಞಾಹಿನ ಸ್ಥಿತಿಯಲ್ಲಿ ಕಂಡುಬಂದಿದ್ದ ಅಪರಿಚಿತ ವೃದ್ಧರನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದ್ದರು. ಶವವನ್ನು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವ ರಕ್ಷಣಾ ಘಟಕದಲ್ಲಿ ರಕ್ಷಿಸಿಡಲಾಗಿತ್ತು. ವಾರಸುದಾರು ಪತ್ತೆಗೊಳಿಸಲು ಮಾಧ್ಯಮದಲ್ಲಿ ಸಂದೇಶವನ್ನು ಬಿತ್ತರಿಸಲಾಗಿತ್ತು. ಕಾಲಮಿತಿ ಕಳೆದರೂ ವಾರಸುದಾರರು ಸಂಪರ್ಕಿಸದೆ ಇರುವುದರಿಂದ ಕಾನೂನಿನಂತೆ ದಫನ ನಡೆಸಲಾಯಿತು.
ಶವದ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಲು, ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟಿನ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಕಾಪು ಪೋಲಿಸ್ ಠಾಣೆಗೆ ನೆರವಾದರು. ಹೆಡ್ ಕಾನ್ಸಟೇಬಲ್ ಮರಿಗೌಡ, ಶಿವ ನಾಯ್ಕ್ ಕಾನೂನು ಪ್ರಕ್ರಿಯೆ ನಡೆಸಿದರು. ಹರೀಶ್ ಪೂಜಾರಿ, ವಿಕಾಸ್ ಶೆಟ್ಟಿ, ಫ್ಲವರ್ ವಿಷ್ಣು, ಹಾಗೂ ನಗರಸಭೆ ಸಹಕರಿಸಿತು.
