ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕೃಷ್ಣಾನದಿ ತೀರದಲ್ಲಿನ ಫಲವತ್ತಾದ ಎರೆ ಮಣ್ಣನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಪ್ರಕರಣ ಸಂಬಂಧ ಅನೇಕ ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಯುವಜನ ಸೇನೆ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನಾ ಧರಣಿ ನಡೆಸಿದವು.
ಯುವಜನ ಸೇನೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, “ಕೃಷ್ಣಾ ನದಿ ದಡದಲ್ಲಿರುವ ಗ್ರಾಮದಲ್ಲಿ ಕೆಲವರು ಹಗಲು ರಾತ್ರಿ ಎನ್ನದೆ ಜೆಸಿಬಿ ಹಿಟಾಚಿಯಂತಹ ಬೃಹತ್ ಯಂತ್ರಗಳಿಂದ 50ಕ್ಕೂ ಹೆಚ್ಚು ಟಿಪ್ಪರ್ಗಳನ್ನು ಮತ್ತು ಅಷ್ಟೇ ಸಂಖ್ಯೆಯಲ್ಲಿ ಟ್ಯಾಕ್ಟರ್ಗಳಿಂದ ಫಲವತ್ತಾದ ಮಣ್ಣು ಮತ್ತು ಮೆಕ್ಕಲು ಮಣನ್ನು ಆಕ್ರಮವಾಗಿ ಒಂದು ಟ್ರಿಪ್ಪಿಗೆ ತಲಾ 500ರಂತೆ ಮಾರಾಟ ಮಾಡುವುದನ್ನು ಖಂಡಿಸಿ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಲಾಗಿದೆ. ಅಕ್ರಮವನ್ನು ತಡೆಗಟ್ಟಬೇಕಾದ ಇಲಾಖೆಯ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಸಂಶಯಕ್ಕೆ ಎಡೆ ಮಾಡಿ ಕೊಡುತ್ತಿದೆ. ನದಿ ಪಾತ್ರದ ಜನರ ಬದುಕಿನೊಂದಿಗೆ ಆಟವಾಡುತ್ತಿರುವ ದಂಧಾಕೋರರಿಗೆ ಸ್ಥಳೀಯ ಆಡಳಿತದ ಭಯವಿಲ್ಲ. ಅಕ್ರಮ ಮಣ್ಣು ಸಾಗಾಟದ ಹಿಂದೆ ರಾಜಕೀಯ ವ್ಯಕ್ತಿಗಳ ಕಾಣದ ಕೈಯಿದೆ ಎಂದು ಜನರು ಮಾತನಾಡುತ್ತಿದ್ದಾರೆಂದು” ಆರೋಪಿಸಿದರು.
ಕರವೇ ವಿಜಯನಗರ ತಾಲೂಕು ಅಧ್ಯಕ್ಷ ಸಂಗಯ್ಯ ಸಾರಂಗಮಠ ಮಾತನಾಡಿ, “ಕೃಷ್ಣಾ ತೀರದಲ್ಲಿ ಅಕ್ರಮವಾಗಿ ಯಂತ್ರೋಪಕರಣಗಳನ್ನು ಬಳಸಿಕೊಂಡು ಟಿಪ್ಪರಗಳ ಮುಖಾಂತರ ದಿನದ ಲೆಕ್ಕದಲ್ಲಿ ಸರ್ಕಾರದ ಲಕ್ಷಾಂತರ ಹಣ ಲೂಟಿ ಮಾಡುತ್ತಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ಯಾಕೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯಪುರ | ಆಲಮಟ್ಟಿ ಚಂದ್ರಮ್ಮದೇವಿ ಜಾತ್ರೆ ಆರಂಭ
ಈ ಪ್ರಕರಣವನ್ನು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮವಾಗಿಲ್ಲ. ಅವೈಜ್ಞಾನಿಕವಾಗಿ ಎಲ್ಲೆಂದರಲ್ಲಿ ಮಣ್ಣು ಅಗೆಯುತ್ತಿದ್ದಾರೆ. ಇದರಿಂದ ನದಿಯ ಹರಿವು ಬದಲಾಗುವ ಸಂಭವವಿದೆ. ಅಣೆಕಟ್ಟುಗಳಲ್ಲಿ ಸಂಗ್ರಹಿಸುವ ನೀರಿನ ಮಟ್ಟ ಹೆಚ್ಚಾಗಬಹುದು ಇದರಿಂದ ಅಣೆಕಟ್ಟಿಗೆ ಅಪಾಯವಾಗುತ್ತದೆ. ಕ್ರಮ ಆಗುವವರೆಗೂ ಹೋರಾಟ ಮುಂದುವರೆಯಲಿದೆ” ಎಂದರು.
ಈ ವೇಳೆ ಅಜಯ ಕುಲಕರ್ಣಿ, ರಾಜು ಮಸಬಿನಾಳ, ಕಾಶಿವರ್ ಗಂಗೂರ, ಶಿವು ವನಕಿಹಾಳ, ಶಿವು ಕನ್ನೊಳ್ಳಿ ಇದ್ದರು.
