ವಾಟ್ಸಪ್ ಗ್ರೂಪ್ನಲ್ಲಿ ಬಂದ ವಿಡಿಯೋವೊಂದಕ್ಕೆ ನಗುವಿನ ಚಿಹ್ನೆ ಹಾಕಿರುವ ಕಾರಣಕ್ಕೆ ವ್ಯಕ್ತಿಯೊಬ್ಬರ ಮನೆಗೆ ನುಗ್ಗಿ ನಗರಸಭೆಯ ಸದಸ್ಯೆಯ ಪತಿ, ಮಗ ಹಾಗೂ ಅವರ ಬೆಂಬಲಿಗರು ಗುಂಪು ಹಲ್ಲೆ ಮಾಡಿ ಕಲ್ಲು ತೂರಾಟ ನಡೆಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮಹೇಶ ರೆಡ್ಡಿ ಎಂದು ಹೇಳಲಾಗಿದೆ. ದೂರಿನ ಪ್ರಕಾರ ಮಹೇಶ ʼಆಂಧ್ರಪ್ರದೇಶದ ಸಾಮಾಜಿಕ ಕಾರ್ಯಕರ್ತ ಬಾಯಿರೆಡ್ಡಿಯ ಎಂಬುವವರು 26 ಸೆಕೆಂಡಿನ ವೀಡಿಯೋ ತುಣುಕು ಮುನ್ನುರುವಾಡಿ ಎಂಬ ವಾಟ್ಸಪ್ ಗ್ರೂಪ್ನಲ್ಲಿ ಶೇರ್ ಆಗಿತ್ತು. ಆ ವಿಡಿಯೋಗೆ ನಗರಸಭೆ ಸದಸ್ಯೆಯ ಮಗ ಸಂತೋಷರೆಡ್ಡಿ ನಗುವಿನ ಇಮೋಜಿ ಹಾಕಿದ್ದನು. ಅದನ್ನು ಮಹೇಶ ರೆಡ್ಡು ಡಿಲೀಟ್ ಮಾಡುವಂತೆ ಹೇಳಿದಾಗ ಇಬ್ಬರ ನಡುವೆ ವಾಗ್ವಾದ ಶುರುವಾಗಿದೆ ಎನ್ನಲಾಗಿದೆ.
ಬಳಿಕ ನಗರಸಭೆ ಮಾಜಿ ಸದಸ್ಯ ಸಂತೋಷ ರೆಡ್ಡಿಯ ತಂದೆ ಹಾಗೂ ಹಾಲಿ ನಗರಸಭೆ ಸದಸ್ಯೆ ಪತಿ ಬಿ.ತಿಮ್ಮಾರೆಡ್ಡಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದರು. ಸೋಮವಾರ ರಾತ್ರಿ 11.30 ಗಂಟೆಗೆ ಮಹೇಶ ರೆಡ್ಡಿ ಮನೆಗೆ ಬೆಂಬಲಿಗರೊಂದಿಗೆ ನುಗ್ಗಿ ಹಲ್ಲೆ ನಡೆಸಿದಲ್ಲದೇ ಮಹೇಶ ರೆಡ್ಡಿ ಪತ್ನಿಗೆ ಎಳೆದಾಡಿ ಕಪಾಳಮೋಕ್ಷ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಂಗಳವಾರ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಅಲ್ಲದೇ ತಮಗೆ ಬಿ.ತಿಮ್ಮಾರೆಡ್ಡಿಯಿಂದ ಜೀವ ಬೆದರಿಕೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದಲ್ಲದೇ, ಪುಟ್ಟಮಾದಯ್ಯ ಅವರಿಗೆ ಮನವಿ ಸಲ್ಲಿಸಿ ರಕ್ಷಣೆ ಕೋರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕೆಎಸ್ಆರ್ಟಿಸಿ ಬಸ್; ಪ್ರಯಾಣಿಕರು ಪಾರು
ತಿಮ್ಮಾರೆಡ್ಡಿ ಅವರ ಬೆಂಬಲಿಗ ತರುಣ ಎಂಬುವವರು ತನ್ನ ಮೇಲೆ ಮಹೇಶ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿ 11 ಜನರ ಮೇಲೆ ಪ್ರತಿ ದೂರು ದಾಖಲಿಸಿದ್ದಾರೆ.