ಮುಸ್ಲಿಮರು ಭೂಮಿಯನ್ನು ಕಬಳಿಸುತ್ತಾರೆಂಬ ಹಿಂದುತ್ವವಾದಿಗಳ ಕಲ್ಪಿತ ‘ಲ್ಯಾಂಡ್ ಜಿಹಾದ್’ ಆರೋಪ ತುಮಕೂರಿನಲ್ಲಿ ಕೇಳಿಬಂದಿದೆ.
ನಗರದ ಜೆ.ಸಿ.ರಸ್ತೆಯ ಸಿದ್ಧಿವಿನಾಯಕ ಮಾರ್ಕೆಟ್ ಜಾಗದಲ್ಲಿ ಗಣೇಶ ದೇವಸ್ಥಾನವಿದ್ದು, ಅದನ್ನು ತೆರವುಗೊಳಿಸಿ ಮಾಲ್ ಕಟ್ಟುತ್ತಾರೆಂಬ ವದಂತಿಯನ್ನು ಕೋಮುಶಕ್ತಿಗಳು ಹಬ್ಬಿಸಿವೆ ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಸದರಿ ದೇವಸ್ಥಾನದಲ್ಲಿ ನಿತ್ಯ ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಜೆ ಸಿ ರಸ್ತೆಯಲ್ಲಿರುವ ಮಾರ್ಕೆಟ್ಟಿನಿಂದಲೇ ಆಗಲಿ ಅಥವಾ ಬೇರೆ ಯಾರಿಂದಲೇ ಆಗಲಿ ಯಾವುದೇ ತೊಂದರೆ ಇಲ್ಲ. ದೇವಸ್ಥಾನಕ್ಕಾಗಲೀ ಅಥವಾ ಅಲ್ಲಿಗೆ ಬರುವ ಭಕ್ತರಿಗೆ ಆಗಲಿ ಯಾವುದೇ ಅಡಚಣೆ ಇಲ್ಲ. ಆದರೆ, ಅಲ್ಲಿರುವ ಮಾರ್ಕೆಟ್ನ ಸರ್ಕಾರಿ ಜಾಗದಲ್ಲಿ ಮಾಲ್ ಕಟ್ಟಲು ಉದ್ದೇಶಿಸಲಾಗಿದೆ ಎಂಬ ವದಂತಿಯನ್ನು ಮುಂದಿಟ್ಟುಕೊಂಡು, ಇಲ್ಲಿ ‘ಲ್ಯಾಂಡ್-ಜಿಹಾದ್’ ನಡೆಸಲಾಗುತ್ತಿದೆ ಎಂದು ಸುಳ್ಳು ಹಬ್ಬಿಸಿ, ನಗರದ ಶಾಂತಿ, ಸೌಹಾರ್ದತೆಗೆ ಭಂಗ ತರಲು ಕೆಲವು ಕೋಮು-ಶಕ್ತಿಗಳು ಯತ್ನಿಸುತ್ತಿವೆ ಎಂದು ಸಿಪಿಐ(ಎಂ) ಹರಿಹಾಯ್ದಿದೆ.
ಸರ್ಕಾರಿ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ ಎನ್ನಲಾಗುತ್ತಿರುವ ಮಾಲ್ ನಿರ್ಮಾಣಕ್ಕೂ, ಜೆ ಸಿ ರಸ್ತೆಯ ಮಾರ್ಕೆಟ್ ನಲ್ಲಿರುವ ಗಣೇಶ ದೇವಸ್ಥಾನಕ್ಕೂ ಏನೇನೂ ಸಂಧವಿಲ್ಲ. ನಿತ್ಯ ಎಂದಿನಂತೆ ನಡೆಯುತ್ತಿರುವ ದೇವಸ್ಥಾನದ ಪೂಜಾಕಾರ್ಯಗಳಿಗೆ ಯಾವುದೇ ಅಡ್ಡಿ-ಆತಂಕವಿಲ್ಲ. ಆದರೂ, ಒಂದು ಸಮುದಾಯದ ವಿರುದ್ಧ ಸುಳ್ಳು ಸುದ್ದಿ, ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.
ಸರ್ಕಾರಿ ಜಾಗದಲ್ಲಿ ಉದ್ದೇಶಿಸಲಾಗಿರುವ ನಿರ್ಮಾಣ ಕಾಮಗಾರಿಗಳನ್ನೋ ಅಥವಾ ಲೀಸ್ ಒಪ್ಪಂದಗಳನ್ನೋ ‘ಲ್ಯಾಂಡ್-ಜಿಹಾದ್’ ಎಂದು ಬಿಂಬಿಸಿ, ಕಪೋಲಕಲ್ಪಿತ ಸುಳ್ಳು-ವದಂತಿಗಳನ್ನು ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಹುಟ್ಟುಹಾಕುವ ಅಪರಾಧೀ ದುಷ್ಕೃತ್ಯಗಳಿಗೆ ಜಿಲ್ಲಾಡಳಿತ ಕೂಡಲೇ ಕಡಿವಾಣ ಹಾಕಬೇಕು. ಸುಖಾಸುಮ್ಮನೆ ಯಾವುದೋ ವಿಷಯ ಕೆದಕಿ, ಅದಕ್ಕೆ ಕೋಮು-ಬಣ್ಣ ಬಳಿದು ತುಮಕೂರಿನಲ್ಲಿ ಮತೀಯ ಸಂಘರ್ಷಕ್ಕೆ ಕಾರಣವಾಗುವಂತೆ ಸುದ್ದಿಗೋಷ್ಠಿ ನಡೆಸಿ, ದ್ವೇಷದ ಹೇಳಿಕೆಗಳನ್ನು ನೀಡಿರುವ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್, ಮಂಜುಭಾರ್ಗವ ಹಾಗೂ ಆ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ಹಿಂದೂಪರ ಸಂಘಟನೆಗಳು ಮತ್ತು ಅವುಗಳ ಮುಖಂಡರ ಮೇಲೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡು, ಕಾನೂನು ಕ್ರಮ ಕೈಗೂಳ್ಳುವಂತೆ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಜಿಲ್ಲಾ ಸಮಿತಿಯು ತುಮಕೂರು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐ(ಎಂ) ಜಿಲ್ಲಾ ಸಮಿತಿಯ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಹಾಗೂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್’ರವರು, ನಗರದ ಹೃದಯ ಭಾಗದಲ್ಲಿರುವ ನೂರಾರು ಕೋಟಿ ಬೆಲೆಬಾಳುವ ಸದರಿ ಸರ್ಕಾರಿ ಜಾಗದ ವಿಷಯ ಈಗಾಗಲೇ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ಈ ವಿಷಯವನ್ನು ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಚರ್ಚಿಸಿರುವುದು ನ್ಯಾಯಾಂಗ ನಿಂದನೆಯ ಅಪರಾಧವಾಗುತ್ತದೆ ಎಂಬಷ್ಟೂ ಸಾಮಾನ್ಯ ಜ್ಞಾನ ಇಲ್ಲದೇ ಹೋಯಿತೇ ಇವರಿಗೆ ಎಂದು ಪ್ರಶ್ನಿಸಿದ್ದಾರೆ.
ಸದರಿ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ ಎಂಬುದು ಗೊತ್ತಿದ್ದರೂ ಸಹಾ, ಪ್ರಮೋದ್ ಮುತಾಲಿಕ್ ಸೇರಿದಂತೆ ಇನ್ನೂ ಅನೇಕ ಹಿಂದೂಪರ ಸಂಘಟನೆಗಳ ಮುಖಂಡರು ಈ ವಿಚಾರದಲ್ಲಿ ಬಹಿರಂಗ ಹೇಳಿಕೆ ನೀಡಿ ಕಾನೂನು ಉಲ್ಲಂಘಿಸಿದ್ದಷ್ಟೇ ಅಲ್ಲದೆ, ನ್ಯಾಯಾಂಗ ನಿಂದನೆಯ ಅಪರಾಧವನ್ನೂ ಮಾಡಿದ್ದಾರೆ. ಘನ ನ್ಯಾಯಾಲಯದ ಮೇಲಿರುವ ಗೌರವಾಸ್ಥೆಗೂ ಇಲ್ಲಿ ಚ್ಯುತಿ ತರುವ ಕೃತ್ಯ ನಡೆದಿದೆ. ಆದ್ದರಿಂದ ಇವರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಿ, ಕಾನೂನು-ಸುವ್ಯವಸ್ಥೆಯ ಬಗ್ಗೆ ನಗರದ ಜನರಲ್ಲಿರುವ ವಿಶ್ವಾಸವನ್ನು ಮತ್ತೆ ಸ್ಥಾಪಿಸಿಕೊಳ್ಳಬೇಕಾಗಿದೆ.
ತುಮಕೂರು ನಗರದ ಶಾಸಕ ಜಿ ಬಿ ಜೋತಿಗಣೇಶ್ ಪ್ರತಿನಿಧಿಸುವ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಈ ಎಲ್ಲ ಹಿಂದೂಪರ ಸಂಘಟನೆಗಳ ಮುಖಂಡರಲ್ಲಿ ಕೆಲವರು, ತಂತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗನುಸಾರ ಪರಸ್ಪರ ಕಿತ್ತಾಡಿಕೊಳ್ಳುತ್ತಾ, ನಿಂದಿಸಿಕೊಳ್ಳುತ್ತಾ, ಸುಳ್ಳು ಆರೋಪಗಳನ್ನು ಮಾಡಿಕೊಳ್ಳುತ್ತಾ ನಗರದ ಜನರೆದುರು ಓಡಾಡುತ್ತಿರುತ್ತಾರೆ. ಇದೆಲ್ಲ ಅವರವರ ಇಷ್ಟಾನಿಷ್ಟಕ್ಕೆ ಬಿಟ್ಟದ್ದು. ಆದರೆ, ಒಂದು ಸಮುದಾಯದ ವಿರುದ್ಧ ವಿನಾಕಾರಣ ಕೋಮು-ಭಾವನೆಗಳನ್ನು ಪ್ರಚೋದಿಸಿ, ತುಮಕೂರು ಜಿಲ್ಲೆಯ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿರುವುದು ಹಾಗೂ ಸರ್ವ-ಜನಾಂಗದ ಶಾಂತಿಯ ತೋಟದಂತಿರುವ ನಮ್ಮ ಕಲ್ಪತರು ನಾಡಿನ ಸಹಬಾಳ್ಮೆ ಮತ್ತು ಸಾಮರಸ್ಯದ ಜೊತೆ ಆಟವಾಡುತ್ತಿರುವುದು ಅಕ್ಷಮ್ಯ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಮಂತ್ರಿ ಹಾಗೂ ಗೃಹಸಚಿವರಾದ ಡಾ: ಜಿ.ಪರಮೇಶ್ವರ ಕೂಡಲೆ ಮಧ್ಯ ಪ್ರವೇಶಿಸಿ ವಸ್ತುಸ್ಥಿತಿ ವಿವರಿಸಿ, ನಗರದ ಜನತೆಗೆ ಅಸಲು ಸಂಗತಿಯನ್ನು ಮನದಟ್ಟು ಮಾಡಿಕೊಡಬೇಕು. ಈ ವಿಷಯವನ್ನಿಟ್ಟುಕೊಂಡು ಪ್ರದೇಶದಲ್ಲಿ ಕೋಮು-ಗಲಭೆ ಸೃಷ್ಟಿಸಲು ಹುನ್ನಾರ ಹೆಣೆಯುತ್ತಿರುವ ದುಷ್ಟಶಕ್ತಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಸಿಪಿಐ(ಎಂ)ಜಿಲ್ಲಾಸಮಿತಿ ಒತ್ತಾಯಿಸುತ್ತದೆ ಎಂಬುದಾಗಿ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ತುಮಕೂರು | ಒಳಮೀಸಲಾತಿ ಪಾದಯಾತ್ರೆ ಮಾ.21ಕ್ಕೆ ಬೆಂಗಳೂರು ತಲುಪಲಿದೆ : ಭಾಸ್ಕರ್ ಪ್ರಸಾದ್
ಜನರಲ್ಲಿ ಅಭದ್ರತೆ, ಆತಂಕ ಸೃಷ್ಟಿಸಿ, ಕಲ್ಪತರು ನಾಡಿನಲ್ಲಿ ಕೋಮುದಳ್ಳುರಿ ಹುಟ್ಟುಹಾಕಲು ಕೆಲವರು ಯತ್ನಿಸುತ್ತಿರುವಂತೆ ಕಾಣುತ್ತಿದೆ. ‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’, ‘ಥೂಕ್ ಜಿಹಾದ್’, ‘ಫರ್ಟಿಲೈಸರ್ ಜಿಹಾದ್’, ‘ಹಲಾಲ್ ಜಿಹಾದ್’, ‘ಪ್ಯಾನ್ ಕಾರ್ಡ್ ಜಿಹಾದ್’ ಥರದ ಕಲ್ಪಿತ ಆರೋಪಗಳನ್ನು ಹಿಂದುತ್ವ ಗುಂಪುಗಳು ಮೊದಲಿನಿಂದಲೂ ಮಾಡುತ್ತಾ ಬಂದಿರುವುದು ಟೀಕೆಗೆ ಒಳಗಾಗಿದೆ. ಅನ್ಯಾಯದ ಪರ ಧ್ವನಿ ಎತ್ತುವ ಕೆಲಸ ಮಾಡುವಂಥ ಕೆಲ ಪ್ರಕರಣಗಳಲ್ಲಿ ಮುತುವರ್ಜಿ ವಹಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವ ಪೊಲೀಸ್ ಇಲಾಖೆ ಈ ರೀತಿ ಧರ್ಮದ ಹೆಸರಿನಲ್ಲಿ ಸಾರ್ವಜನಿಕವಾಗಿ ಕೋಮುದ್ವೇಷ ಬಿತ್ತುವ ಭಾಷಣ ಬಿಗಿಯುವವರ ವಿರುದ್ಧವೂ ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳಬಹುದಲ್ಲವೇ?