“ಭಾರತದಲ್ಲಿ ನಡೆದ ಅಸ್ಪೃಶ್ಯರ ಪರವಾದ ಮೊಟ್ಟ ಮೊದಲ ಚಳವಳಿ ಅಂದರೆ ಅದು ಮಹಾಡ್ ಸತ್ಯಾಗ್ರಹ. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿರುವ ಮಹಾಡ್ನಲ್ಲಿ 1927 ಮಾರ್ಚ್ 20ರಂದು ಸಾರ್ವಜನಿಕವಾಗಿ ಕೆರೆ ನೀರನ್ನ ಮುಟ್ಟಿ ಕುಡಿಯುವುದರ ಮೂಲಕ ಇದು ಎಲ್ಲರಿಗೂ ಸೇರಿದ್ದು ಎಂದು ಅಂಬೇಡ್ಕರ್ ಅವರು ಸಾರಿ ಹೇಳಿದ್ದರು. ಈ ಮೂಲಕ ಮಾನವ ಹಕ್ಕುಗಳನ್ನು ಎತ್ತಿ ಹಿಡಿದರು. ಬೌದ್ಧಿಕ ಬದ್ಧತೆಯನ್ನ ತೋರಿದ್ದರು” ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಬಣ್ಣಿಸಿದ್ದಾರೆ.
ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಶೋಷಿತರ ಸಂಘರ್ಷ ದಿನಾಚರಣೆಯನ್ನ ಬೆಂಗಳೂರಿನ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಗುರುವಾರ ಆಯೋಜನೆ ಮಾಡಿತ್ತು. ಈ ವೇಳೆ, ಜೈ ಭೀಮ ಪುಸ್ತಕವನ್ನು ಕೂಡ ಬಿಡುಗಡೆ ಮಾಡಲಾಯಿತು.
“ಅಂಬೇಡ್ಕರ್ ಒಂದು ವಾಸ್ತವ ಆದರೆ ಕಲ್ಪಿತ ಪ್ರಸಂಗವೊಂದು ಹೇಳುತ್ತಾರೆ. “ಒಂದು ಊರಿನಲ್ಲಿ ಗುರುವೊಬ್ಬರು ಶಿಷ್ಯರಿಗೆ ಜಾತಿ ವ್ಯವಸ್ಥೆಯ ಬಗ್ಗೆ ಬೋಧನೆ ಮಾಡುತ್ತಾರೆ. ಅಸ್ಪೃಶ್ಯತೆ ಆಚರಿಸಕೂಡದು ಎಂದು ಹೇಳುತ್ತಾರೆ. ಅಸ್ಪೃಶ್ಯರನ್ನು ಕೀಳಾಗಿ ಕಾಣುವುದು ತಪ್ಪು ಎಂದೆಲ್ಲಾ ಭಾಷಣ ಮಾಡಿ ಮುಂದಿನ ಊರಿಗೆ ತೆರಳುತ್ತಾರೆ. ದಾರಿಯಲ್ಲೊಂದು ಬಾವಿಯಲ್ಲಿ ಕೈ ಕಾಲು ತೊಳೆದು ನೀರು ಕುಡಿಯುತ್ತಾರೆ. ನೀರು ಕುಡಿದ ಮೇಲೆ ಬರುವಾಗ ಯಾರೋ ಒಬ್ಬರು, ಗುರುಗಳೇ ಇದು ಅಸ್ಪೃಶ್ಯರು ಕುಡಿಯುವ ನೀರು, ಇದು ಅಸ್ಪೃಶ್ಯರ ಬಾವಿ ಎಂದು ಹೇಳುತ್ತಾರೆ. ಆ ಬಳಿಕ ಗುರುವಿಗೆ ತಳಮಳ ಶುರುವಾಗಿ ಎಂತಹ ಪಾಪ ತಟ್ಟಿತ್ತು ನನಗೆ ಎಂದು ಹೇಳಿ ಒಬ್ಬ ಬುದ್ಧಿವಂತನ ಹತ್ತಿರ ಹೋಗಿ ಹೀಗೆ ಮಾಡಿದೆ ಈ ಪಾಪ ಕಳೆದುಕೊಳ್ಳುವುದಕ್ಕೆ ಏನು ಮಾಡಲಿ ಹೇಳಿ ಎಂದು ಕೇಳುತ್ತಾರೆ. ಆ ಬುದ್ಧಿವಂತ ಬಾವಿ ನೀರು ಕುಡಿಯುವ ಸಂದರ್ಭದಲ್ಲಿ ಏನೇನು ಮಾಡಿದೆ ಕ್ರಮವಾಗಿ ಹೇಳು ಎಂದಾಗ, ಆತ ಮೊದಲಿಗೆ ಬಾವಿಯಲ್ಲಿ ಕೈ ಕಾಲು ತೊಳೆದು ಆಮೇಲೆ ನೀರು ಕುಡಿದೆ ಎಂದು ಹೇಳುತ್ತಾರೆ. ಆ ಬಳಿಕ ಬುದ್ಧಿವಂತ ನಿನಗೇನೂ ಆಗಲ್ಲ. ಯಾಕೆಂದರೆ, ಮೊದಲಿಗೆ ನೀನು ಕೈ-ಕಾಲು ತೊಳೆದಿದ್ದೀಯ. ನಿನ್ನ ಪಾದ ಸ್ಪರ್ಶದಿಂದ ಆ ಬಾವಿಯ ನೀರು ಪವಿತ್ರವಾಯಿತು. ಹಾಗಾಗಿ, ನಿನಗೆ ಏನು ಆಗಲ್ಲ ಎಂದು ಹೇಳಿದ್ನಂತೆ. ಇದು ಕಲ್ಪಿತ ಪ್ರಸಂಗ, ಆದರೂ ಇದರೊಳಗಡೆ ವಾಸ್ತವ ಇದೆ. ಈ ಗುರುವು ಪತನಗೊಂಡ ಪ್ರಾಮಾಣಿಕತೆಯ ಸಂಕೇತ. ಈ ಬುದ್ಧಿವಂತ ಭ್ರಷ್ಟಗೊಂಡ ಬೌದ್ಧಿಕತೆಯ ಸಂಕೇತ. ಇವು ಯಾವತ್ತಿಗೂ ಕೂಡ ಒಂದೇ. ಇವು ದೇಶವನ್ನ ಉದ್ಧಾರ ಮಾಡುವುದಿಲ್ಲ. ದೊಡ್ಡ ದೊಡ್ಡ ಹೆಸರು ಇಟ್ಟುಕೊಂಡಿರುವವರಿಗೆ ಪ್ರಾಮಾಣಿಕತೆ ಇರೋದಿಲ್ಲ. ಆ ಗುರು ಪ್ರಾಮಾಣಿಕನಾಗಿದ್ದರೇ ಅಸ್ಪೃಶ್ಯರ ಬಾವಿ ನೀರು ಕುಡಿದೆ ಎಂದು ಸಂಭ್ರಮಿಸಬೇಕಿತ್ತು. ಇನ್ನು ಆತ ನಿಜವಾದ ಬುದ್ಧಿವಂತನೇ ಆಗಿದ್ದರೇ, ಆ ಗುರುವನ್ನ ಬೈದು ಕಳಿಸಬೇಕಿತ್ತು” ಎಂದು ವಿವರಿಸಿದರು.“ಇಂದಿಗೂ ಪತನಗೊಂಡಿರುವ ಪ್ರಾಮಾಣಿಕತೆಯ, ಭ್ರಷ್ಟಗೊಂಡಿರುವ ಬೌದ್ಧಿಕ ವಾತಾವರಣದಲ್ಲಿ ಬದುಕುತ್ತಿದ್ದೇವೆ. ನೈತಿಕ ಶಕ್ತಿ, ಸಂಘಟನಾ ಶಕ್ತಿ, ವಿಚಾರ ಶಕ್ತಿ ಸೇರಿ ಒಂದು ಬೌದ್ಧಿಕ ಬದ್ಧತೆ ಬೇಕು. ಇವತ್ತು ಸಹ ಅಸ್ಪೃಶ್ಯರಿಗೆ ಹಿಂಸೆ ನೀಡುವ ಘಟನೆ ನಡೆಯುತ್ತಿವೆ. ಅಂದು ಅಂಬೇಡ್ಕರ್ ಅವರು ಅದಕ್ಕೊಂದು ದೊಡ್ಡ ಪ್ರತಿರೋಧ ಒಡ್ಡಿದ್ದರು. ಅವರು ಒಡ್ಡಿದ ಈ ಪ್ರತಿರೋಧದ ಚಳವಳಿಯಲ್ಲಿ ಅನೇಕ ಸವರ್ಣೀಯ ಪ್ರಗತಿಪರರೂ ಭಾಗವಹಿಸಿದ್ದರು. ಕೆರೆಯ ನೀರನ್ನು ಮುಟ್ಟಿದ್ದಕ್ಕಾಗಿ ಪ್ರತಿವರ್ಷ ಮಾರ್ಚ್ 20ರ ತೇದಿಯನ್ನು ಸಾಮಾಜಿಕ ಸಬಲೀಕರಣ ದಿನವನ್ನಾಗಿ ಆಚರಿಸುವಂತೆ ಅಂಬೇಡ್ಕರ್ ಹೇಳುತ್ತಾರೆ. ಮಹಾಡ್ ಸತ್ಯಾಗ್ರಹ ಕೇವಲ ನೀರನ್ನು ಮುಟ್ಟಿದ್ದಲ್ಲ, ಹಲವು ಬಗೆಯ ಅಸ್ಪೃಶ್ಯತೆಯ ಆಚರಣೆಗೆ ಒಡ್ಡಿದ್ದ ಪ್ರತಿರೋಧವಾಗಿದೆ” ಎಂದು ವ್ಯಾಖ್ಯಾನಿಸಿದರು.
“ಶೋಷಿತ ಸಮುದಾಯಗಳು ಪಂಚಭೂತ ವಂಚಿತ ಸಮುದಾಯಗಳು ಈ ಸಮುದಾಯಗಳು ಗಾಳಿಯಿಂದ ವಂಚಿತರಾಗುತ್ತಾರೆ. ಭೂಮಿಯಿಂದ ವಂಚಿತರಾಗಿದ್ದಾರೆ. ಆಕಾಶ ಕನಸಿನ ಸಂಕೇತ, ಅವರಿಗೆ ಕನಸು ಕಾಣೋದಕ್ಕೆ ಆಗುವುದಿಲ್ಲ. ನೀರು ಮುಟ್ಟೋದಕ್ಕೆ ಬಿಡೋದಿಲ್ಲ. ಗುಡಿಸಲಿಗೆ ಬೆಂಕಿ ಹಚ್ಚುತ್ತಾರೆ. ಒಟ್ಟಿನಲ್ಲಿ ಈ ಶೋಷಿತ ಸಮುದಾಯಗಳು ಈ ಪಂಚಭೂತಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಸರಿಯಾದ ನೀರು, ಗಾಳಿ, ಬೆಂಕಿ, ಭೂಮಿ ಇವ್ಯಾವುದನ್ನೂ ಕೊಡಲಿಲ್ಲ ಅಂದರೆ, ಇವು ಪಂಚಭೂತ ವಂಚಿತ ಸಮುದಾಯಗಳು” ಎಂದು ಹೇಳಿದರು.
“1949ರಲ್ಲಿ ಪ್ರಜಾಪ್ರಭುತ್ವವನ್ನು ಸಾಮಾಜಿಕ, ರಾಜಕೀಯ, ಆರ್ಥಿಕ ಪ್ರಜಾಪ್ರಭುತ್ವ ಎಂದು ಅಂಬೇಡ್ಕರ್ ವಿವರಿಸಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಇದ್ದರೆ ಇದು ಸಾಮಾಜಿಕ ಪ್ರಜಾಪ್ರಭುತ್ವ ಆಗುತ್ತದೆ. ಆದರೆ, ಈಗ ದ್ವೇಷದ ರಾಜಕಾರಣ ನಡೆಯುತ್ತಿದೆ. ಪ್ರಜಾಪ್ರಭುತ್ವ ಸಮಾನತೆ ಸಹೋದರತೆ ಜತೆಗೆ ಎಲ್ಲರೂ ತಾರತಮ್ಯ ಮೀರಿ ಸಮಾಜವನ್ನು ಕಟ್ಟಬೇಕು. ಅರ್ಧಕ್ಕೂ ಹೆಚ್ಚು ಸಂಪತ್ತು ಕೆಲವೇ ಜನರ ಬಳಿ ಇದೆ. ಅನೇಕ ಚಳುವಳಿಗಳ ಕಾರಣಕ್ಕಾಗಿ ಅನೇಕ ಮುನ್ನಡೆಗಳು ನಡೆಯುತ್ತಿವೆ. ಈ ಮುನ್ನಡೆಗಳ ನಡುವೆ ಹಲವು ಸಮಸ್ಯೆಗಳಿವೆ. ಇನ್ನೂ ಅಸ್ಪೃಶ್ಯತೆ ಈಗಲೂ ನಿವಾರಣೆ ಆಗಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವ ನೆಲೆಯೂರಿದರೆ ಆಗ ಸ್ವಾತಂತ್ರ್ಯ ಸಮಾನತೆ ಬರುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಜೆಟ್ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕಡೆಗಣನೆ ; ಆಕ್ರೋಶ
ಡಿಎಸ್ಎಸ್ನ ಇಂದಿರಾ ಕೃಷ್ಣಪ್ಪ ಮಾತನಾಡಿ, “ಮಹಾಡ್ ಸತ್ಯಾಗ್ರಹದ ನೆನಪಿನಲ್ಲಿ ಈ ದಿನಾಚರಣೆಯನ್ನ ನಡೆಸುತ್ತೇವೆ. ಎಲ್ಲ ಜಿಲ್ಲೆಗಳಲ್ಲಿ ಮಹಾಡ್ ಸತ್ಯಾಗ್ರಹದ ಅರಿವು ಮೂಡಲಿ ಎಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕಳೆದ ಎರಡು ಮೂರು ತಿಂಗಳಲ್ಲಿ ಪ್ರಯಾಗರಾಜ್ಗೆ ಹೋಗಿ ಗಂಗೆಗೆ ಬಿದ್ದು ಪವಿತ್ರರಾಗಿದ್ದೀವಿ ಎಂದು ಜನ ಹೇಳಿಕೊಂಡರು. ಅಲ್ಲಿನ ಜೀವಜಲವನ್ನ ಕೊಳಕು ಮಾಡಿದ್ದಾರೆ. ಇದು ಸಾಮಾನ್ಯ ಜ್ಞಾನ, ಎಲ್ಲರಿಗೂ ಗೊತ್ತಾಗುವ ವಿಚಾರ. ನೀರನ್ನು ಹಾಳು ಮಾಡಿ, ಮಲಿನ ಮಾಡಿದ್ದಾರೆ. ಭಾರತ ಸರ್ಕಾರ ಆ ಪ್ರದೇಶ, ನೀರನ್ನು ಸ್ವಚ್ಛ ಮಾಡಲು ನಮ್ಮ ತೆರಿಗೆ ಹಣ ವೆಚ್ಚ ಮಾಡಿದೆ. ಎಷ್ಟು ಹಣ ವೆಚ್ಚ ಆಗಿದೆ ಎಂದು ಯಾರಾದರೂ ಯೋಚನೆ ಮಾಡಿದೀರಾ? ಅಂಬೇಡ್ಕರ್ ಮಾಡಿದ್ದ ಸತ್ಯಾಗ್ರಹಕ್ಕೂ ಈಗ ಸರ್ಕಾರವೇ ಏರ್ಪಡಿಸುವ ಇಂತಹ ಕಾರ್ಯಕ್ರಮಗಳಿಗೂ ಎಲ್ಲಿಯ ಸಾಮ್ಯತೆ? ಮೌಢ್ಯದ ವಿರೋಧದ ಬಗ್ಗೆ ಮಾತನಾಡಬೇಕಾದ ಕರ್ನಾಟಕ ಸರ್ಕಾರ ಇಲ್ಲಿಯೂ ಕೂಡ ಹಾಗೆಯೇ ಮಾಡಿತ್ತು. ಈ ಬಗ್ಗೆ ಎಲ್ಲರೂ ಪ್ರಶ್ನೆಗಳನ್ನ ಎತ್ತಿ ಹಿಡಿಯಬೇಕು” ಎಂದು ಹೇಳಿದರು.
“ಈ ಚಳವಳಿ ನಡೆದು ಇಂದಿಗೆ 98 ವರ್ಷಗಳು ಕಳೆದರೂ ನೀರಿನ ವಿಷಯದಲ್ಲಿ, ಉಡುಪಿನ ವಿಷಯದಲ್ಲಿ, ದಲಿತರ ಅಭಿರುಚಿಯ ವಿಷಯದಲ್ಲಿ ದಿನನಿತ್ಯ ಕೊಲೆ, ಸುಲಿಗೆ, ಅತ್ಯಾಚಾರಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇತ್ತೀಚಿಗೆ ರಾಜಸ್ಥಾನದ ಶಾಲೆಯೊಂದರಲ್ಲಿ ಏಳನೇ ತರಗತಿಯ ಬಾಲಕನೊಬ್ಬ ನೀರು ಕುಡಿದನೆಂದು ಹೊಡೆದು ಸಾಯಿಸಿದರು. ಉತ್ತರ ಪ್ರದೇಶದಲ್ಲಿ ಯುವಕನೊಬ್ಬ ಸಾರ್ವಜನಿಕ ಬಾವಿಯೊಂದರ ನೀರನ್ನು ಮುಟ್ಟಿದ ಕಾರಣಕ್ಕೆ ಕೊಲೆಮಾಡಲಾಯಿತು ಹೀಗೆ ಪ್ರತಿದಿನ ಸವರ್ಣಿಯರು ತಮ್ಮ ಬಾವಿಯಲ್ಲಿ ನೀರು ಸೇದಿದರು ಎಂದು. ಕೆರೆಯ ನೀರನ್ನು ಬಳಸಿದರು ಎಂದು, ತೊಟ್ಟಿಯ ನೀರನ್ನು ಬಳಸಿದರು ಎಂದು ನಿರಂತರವಾಗಿ ಹಲ್ಲೆಗಳು ದೇಶಾದ್ಯಂತ ನಡೆಯುತ್ತಲೇ ಇವೆ. ಇದು ದೇಶ ಸಮಾನತೆಯ ಕಡೆಗೆ ನಡೆಯದೆ ಅಮಾನುಷ ದ್ವೇಷ ಮತ್ತು ವಿಕೃತಿಯ ಕಡೆಗೆ ನಡೆಯುತ್ತಿರುವುದನ್ನು ಮತ್ತೆ ಮತ್ತೆ ಖಚಿತಪಡಿಸುತ್ತಿದೆ” ಎಂದು ತಿಳಿಸಿದರು.
