ಮಣಿಪುರ ಹಿಂಸಾಚಾರವು ನಮ್ಮ ದೇಶದ ಆತ್ಮಸಾಕ್ಷಿಯ ಮೇಲೆ ಆಳವಾದ ಗಾಯವನ್ನು ಉಂಟುಮಾಡಿದ್ದು, ಗಲಭೆ ಪೀಡಿತ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮನವಿ ಮಾಡಿದ್ದಾರೆ.
ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಡಿಯೋ ಮೂಲಕ ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಸೋನಿಯಾ ಗಾಂಧಿ, “ಸುಮಾರು 50 ದಿನಗಳ ಕಾಲ ಮಣಿಪುರದಲ್ಲಿ ಬಹುದೊಡ್ಡ ಹಿಂಸಾಚಾರವನ್ನು ನೋಡಿದ್ದೇವೆ. ಈ ಹಿಂಸಾಚಾರವು ರಾಜ್ಯದಲ್ಲಿ ಸಾವಿರಾರು ಜನರ ಜೀವನವನ್ನು ನಾಶಮಾಡಿದೆ ಮತ್ತು ಅನೇಕ ಜನರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಈ ಹಿಂಸಾಚಾರದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನಾನು ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ತಿಳಿಸಿದ್ದಾರೆ.
“ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿರುವ ನಮ್ಮ ಸಹೋದರ ಸಹೋದರಿಯರು ಪರಸ್ಪರ ಕಿತ್ತಾಡುವುದನ್ನು ನೋಡುವುದು ಹೃದಯವಿದ್ರಾವಕವಾಗಿದೆ. ಮಣಿಪುರದ ಇತಿಹಾಸವು ಎಲ್ಲ ಜನಾಂಗಗಳು, ಧರ್ಮಗಳು ಮತ್ತು ಹಿನ್ನೆಲೆಯ ಜನರನ್ನು ಅಪ್ಪಿಕೊಳ್ಳುವ ಸಾಮರ್ಥ್ಯ ಮತ್ತು ವೈವಿಧ್ಯಮಯ ಸಮಾಜದ ಅಸಂಖ್ಯಾತ ಸಾಧ್ಯತೆಗಳಿಗೆ ಸಾಕ್ಷಿಯಾಗಿದೆ. ಭ್ರಾತೃತ್ವದ ಮನೋಭಾವವನ್ನು ಬೆಳೆಸಲು ಅಪಾರ ನಂಬಿಕೆ ಮತ್ತು ಸದ್ಭಾವನೆ ಅಗತ್ಯವಿದೆ. ದ್ವೇಷ ಮತ್ತು ವಿಭಜನೆಯ ಬೆಂಕಿಯನ್ನು ಹೊತ್ತಿಸಲು ಒಂದು ತಪ್ಪು ನಿರ್ಧಾರ ಸಾಕು” ಎಂದು ಸೋನಿಯಾ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚೀನಾದಲ್ಲಿರುವ ಗೂಗಲ್ನ ಪಿಕ್ಸೆಲ್ ಮೊಬೈಲ್ ಘಟಕ ಶೀಘ್ರದಲ್ಲೇ ಭಾರತಕ್ಕೆ ಆಗಮನ!
“ಒಬ್ಬ ತಾಯಿಯಾಗಿ, ನಾನು ನಿಮ್ಮ ನೋವನ್ನು ಅರ್ಥಮಾಡಿಕೊಂಡಿದ್ದೇನೆ ಮತ್ತು ನೀವು ಸರಿಯಾದ ಮಾರ್ಗವನ್ನು ತೆಗೆದುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ಮುಂದಿನ ವಾರಗಳು ಮತ್ತು ತಿಂಗಳುಗಳಲ್ಲಿ ನಾವು ನಂಬಿಕೆಯನ್ನು ಮರುನಿರ್ಮಾಣ ಮಾಡುವ ದೀರ್ಘ ಪ್ರಯಾಣವನ್ನು ಪ್ರಾರಂಭಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ಮಣಿಪುರದ ಜನರಲ್ಲಿ ನನಗೆ ಅಪಾರ ಭರವಸೆ ಮತ್ತು ನಂಬಿಕೆ ಇದೆ ಮತ್ತು ನಾವು ಒಟ್ಟಾಗಿ ಈ ಪರೀಕ್ಷೆಯನ್ನು ಜಯಿಸುತ್ತೇವೆ” ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ನಿನ್ನೆ ಸೋನಿಯಾ ಅವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ತಿಳಿಸಿದ್ದರು. ಮಣಿಪುರದಲ್ಲಿ ಬಿಜೆಪಿ ರಾಜಕೀಯ ನಡೆಸುತ್ತಿದೆ. ಈಶಾನ್ಯ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಕರ್ತವ್ಯದಲ್ಲಿ ವಿಫಲವಾಗಿವೆ ಎಂದು ಆರೋಪಿಸಿದೆ.
ಮಣಿಪುರದಲ್ಲಿ ಕಳೆದ 50 ದಿನಗಳಿಂದ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ಸುಮಾರು 100ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೇ 3 ರಂದು ಮೀತೀ ಸಮುದಾಯಕ್ಕೆ ಪರಿಶಿಷ್ಟ ಪಂಗಡಗಳ (ಎಸ್ಟಿ) ಸ್ಥಾನಮಾನ ಬೇಡಿಕೆಯ ವಿರುದ್ಧ ಮಣಿಪುರದ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ ನಡೆಸಿದ ಮೆರವಣಿಗೆಯ ಸಂದರ್ಭದಲ್ಲಿ ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾಯಿತು. ಶಾಂತಿ ಮರುಸ್ಥಾಪನೆಗಾಗಿ ಮಣಿಪುರದಲ್ಲಿ ಸುಮಾರು 10 ಸಾವಿರ ಸೇನೆ ಮತ್ತು ಅಸ್ಸಾಂ ರೈಫಲ್ಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.