ಉಡುಪಿ ನಗರದ ಮಲ್ಪೆ ಬಂದರಿನಲ್ಲಿ ಮಲ್ಪೆ ಮೀನುಗಾರರ ಸಂಘ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಸಾರ್ವಜನಿಕರಿಗೆ ಅಪರಾಧ ಮಾಡಿಸಲು ಪ್ರೇರಣೆ ಮಾಡಿದ, ದ್ವೇಷ ಭಾವನೆಯಿಂದ ಭಾಷಣ ಮಾಡಿ ಅಲ್ಲಿದ್ದವರನ್ನು ಪ್ರಚೋದಿಸುತ್ತ ಉದ್ರೇಕ ಭಾಷಣ ಮಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ಪೊಲೀಸರು ಸುಮೊಟೋ ಪ್ರಕರಣ ದಾಖಲಿಸಿಕೊಂಡ ಹಿನ್ನಲೆಯಲ್ಲಿ ಇದೀಗ ಉಡುಪಿಯಲ್ಲಿ ಪರ ವಿರೋಧಿ ಚರ್ಚೆಗಳು ಪ್ರಾರಂಭವಾಗಿದೆ.
ಈ ಬಗ್ಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಕೋಟ ನಾಗೇಂದ್ರ ಪುತ್ರನ್ ಪತ್ರಿಕಾ ಹೇಳಿಕೆ ನೀಡಿದ್ದು, ಮೊಗವೀರ ಮಹಿಳೆಯರಿಗೆ ನ್ಯಾಯ ಸಿಗಬಾರದು ಎಂಬ ಉದ್ದೇಶದಿಂದಲೇ ಮುಖ್ಯಮಂತ್ರಿಗಳಿಗೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ, ಠಾಣಾಧಿಕಾರಿಗೆ ಪ್ರಮೋದ್ ಮದ್ವರಾಜ್ ವಿವಾದಾತ್ಮಕವಾಗುವಂತಹ ಹೇಳಿಕೆ ನೀಡಿದ್ದಾರೆ.

ಒಂದು ಹಂತದಲ್ಲಿ ಆಗಿರುವ ದುರಂತದ ಬಗ್ಗೆ ಪಕ್ಷಾತೀತವಾಗಿ ನ್ಯಾಯ ಒದಗಿಸುವ ಕಾರ್ಯ ನಡೆದಿತ್ತು, ಆದರೆ ನಿನ್ನೆ ನಡೆದ ಪ್ರತಿಭಟನೆಯಿಂದ ಮತ್ತು ಬಿಜೆಪಿ ನಾಯಕರ ಹೇಳಿಕೆಗಳಿಂದ ಪ್ರಕರಣ ಇನ್ನಷ್ಟು ಬಿಗಿಯಾದಂತಿದೆ ಎಂದು ಹೇಳಿದ್ದಾರೆ.
ನ್ಯಾಯ ಕೊಡಿಸುವ ಉದ್ದೇಶ ಇದ್ದಿದ್ದರೆ ಬಿಜೆಪಿ ನಾಯಕರು ಈ ರೀತಿ ಪ್ರಚೋದನಕಾರಿ ಭಾಷಣ ಮಾಡುತ್ತಿರಲಿಲ್ಲ, ಸಂವಿಧಾನದಡಿಯಲ್ಲಿ ಶಾಸಕ, ಸಚಿವರು ಆಗಿದ್ದ ಪ್ರಮೋದ್ ಮದ್ವರಾಜರಿಗೆ ಸ್ವಲ್ಪವಾದರೂ ಸಾಮಾನ್ಯ ಜ್ಞಾನಯಿಲ್ಲದೆ ಇರುವುದು ದುರದೃಷ್ಟಕರ.
ಆದ್ದರಿಂದ ದಯವಿಟ್ಟು ಈ ಬಿಜೆಪಿ ಅವರ ಡೋಂಗಿ ಭಾಷಣ, ಮೊಗವೀರ ಸಮುದಾಯವನ್ನು ಸೆಳೆಯುವ ದುರುದ್ದೇದಿಂದ ಈ ರೀತಿ ಹೇಳಿಕೆ ನೀಡಿದ್ದಾರೆ, ಈ ಹೇಳಿಕೆಗಳಿಂದ ಪ್ರಕರಣದಲ್ಲಿ ಅಪರಾಧಿಗಳಾಗಿರುವ ನಮ್ಮ ಮೊಗವೀರ ಮಹಿಳೆಯರಿಗೆ ಇನ್ನಷ್ಟು ಸಮಸ್ಯೆ ಹೆಚ್ಚು ಮಾಡಿದಂತಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರಿಗೆ ನ್ಯಾಯಯುತವಾಗಿ ಪ್ರಕರಣ ಸುಖಾಂತ್ಯ ಆಗಬಾರದು, ಜೈಲ್ ನಲ್ಲಿ ಇರುವ ಮೊಗವೀರ ಮಹಿಳೆಯರನ್ನು ಈ ರಾಜಕೀಯದಲ್ಲಿ ಉಪಯೋಗಿಸಿ ಕೊಂಡು ತಮ್ಮ ಬೇಳೆ ಬೆಯಿಸಿ ಕೊಳ್ಳುವ ಹುನ್ನಾರ ನಡೆಸುತ್ತಿದ್ದು. ದಯವಿಟ್ಟು ಮೊಗವೀರರು ಇವರುಗಳ ಮಾತನ್ನ ನಂಬದೆ, ಉಡುಪಿ ಜಿಲ್ಲೆಯ ಉತ್ತಮ ರಾಜಕೀಯ ನಾಯಕನ ಮಾರ್ಗದರ್ಶನದಲ್ಲಿ ಈ ಸಮಸ್ಯೆ ಬಗೆ ಹರಿಸಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಇನ್ನೊಂದು ಕಡೆಯಲ್ಲಿ ಪ್ರಮೋದ್ ಮಧ್ವರಾಜ್ ಮೇಲೆ ಹಾಕಿರುವ ಎಫ್ ಐಆರ್ ಮತ್ತು ಉಡುಪಿ ಪೊಲೀಸರ ನಡೆಯನ್ನು ಖಂಡಿಸಿ ಹೈಕೋರ್ಟ್ ವಕೀಲ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಪತ್ರಿಕಾ ಹೇಳಿಕೆ ನೀಡಿದ್ದು, ತಾನು ದಕ್ಷ ಅಧಿಕಾರಿ ಎಂದು ಬಿಂಬಿಸುತ್ತಿರುವ ಜಿಲ್ಲಾ ಎಸ್ಪಿ ಡಾ.ಅರುಣ್ ಜಿಲ್ಲೆಯಲ್ಲಿ ನಡೆದ ಕೊಲೆ, ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಫಲರಾದ ಅವರು ಸುಮೊಟೋ ಪ್ರಕರಣ ದಾಖಲಿಸಿ, ಪ್ರತಿಭಟಿಸುವವರ ಧ್ವನಿಯನ್ನು ಅಡಗಿಸುವ ಪ್ರಯತ್ನವನ್ನು ಮಾಡುತ್ತಿರುವುದು ನಾಚಿಕೆಗೇಡು ಎಂದು ಆರೋಪಿಸಿದ್ದಾರೆ.

ಮಲ್ಪೆ ಠಾಣೆಯಲ್ಲಿ ರಾಜಿಯಾದ ಪ್ರಕರಣದಲ್ಲಿ ತನಿಖೆಗೆಂದು ಕರೆಸಿ, ಕುತಂತ್ರದಿಂದ ಮಹಿಳಾ ಮೀನುಗಾರರು ಹಾಗು ಪುರುಷ ಮೀನುಗಾರರನ್ನು ಬಂಧಿಸಲಾಗಿದೆ. ಅವರ ಪರವಾಗಿ ಧ್ವನಿಎತ್ತಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಿರುದ್ದ ಸುಮೊಟೋ ದಾಖಲಿಸಿದ್ದೀರಿ. ಯಾರೋ ಅಮಾಯಕ ಪಿಎಸ್ಐಗಳನ್ನು ದಬಾಯಿಸಿ ಸುಮೊಟೋ ದೂರು ದಾಖಲಿಸುವ ತಾವು ಕಚೇರಿ ಬಿಟ್ಟು ಹೊರಗೆ ಬರಬೇಡಿ. ನೀವು ಮಾಡುವುದನ್ನೆಲ್ಲಾ ಒಪ್ಪಿಕೊಳ್ಳುತ್ತೇವೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ ಎಂದಿದ್ದಾರೆ.
ಕಾನೂನಿನಲ್ಲಿ ಪಾಂಡಿತ್ಯ ಮಾಡಿದವರಂತೆ ಬಿಂಬಿಸುವ ತಾವು, ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ 2024 ರ ಮಾ. 2 ರಾತ್ರಿ ನಡೆದ ಕೃಷ್ಣಾ ಎಂಬ ದಲಿತ ಯುವಕನ ಶೂಟೌಟ್ ಪ್ರಕರಣದಲ್ಲಿ ಇದುವರೆಗೆ ಆರೋಪಿಗಳನ್ನು ಪತ್ತೆಹಚ್ಚಿಲ್ಲ. ಆ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ತಾವು ವಿಫಲವಾಗಿದ್ದೀರಿ ಎಂದು ಕಿಡಿಕಾರಿದ್ದಾರೆ.
2024 ಜು.31 ರಂದು ಬ್ರಹ್ಮಗಿರಿಯ ವಸತಿ ಸಮುಚ್ಚಯಗಳಿಗೆ ನಾಲ್ವರು ಮುಸುಕುಧಾರಿಗಳ ತಂಡವು ನುಗ್ಗಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿತ್ತು. ಫ್ಲ್ಯಾಟ್ ನ ಸಿಸಿಟಿವಿ ದೃಶ್ಯಾವಳಿಗಳಿಂದ ಕೃತ್ಯವು ಬೆಳಕಿಗೆ ಬಂದಿತ್ತು. ಇದುವರೆಗೆ ಆರೋಪಿಗಳ ಪತ್ತೆಯಾಗಿಲ್ಲ.
ನಗರ ಠಾಣಾಯಿಂದ ಕೂಗಳತೆ ದೂರದಲ್ಲಿರುವ ಕಂದಾಯ ಇಲಾಖೆಯ ಸಿ ದರ್ಜೆ ನೌಕರರ ವಸತಿ ಸಮುಚ್ಚಯದ ಆರು ಮನೆಗೆ 2024 ರ ಸೆ.29 ರ ತಡರಾತ್ರಿ ಕಳ್ಳರು ನುಗ್ಗಿ ಸರಣಿ ಕಳ್ಳತನ ನಡೆಸಿದ್ದರು. ಒಂದೇ ಆವರಣದೊಳಗಿರುವ ವಸತಿ ಸಮುಚ್ಚಯದ 6 ಮನೆಗಳ ಬೀಗವನ್ನು ಕಳ್ಳರು ಒಡೆದು, ಮನೆಯ ಕಪಾಟನ್ನು ಚೆಲ್ಲಾಪಿಲ್ಲಿಯಾಗಿಸಿ, ಒಂದು ಮನೆಯಲ್ಲಿ ಸುಮಾರು 120 ಗ್ರಾಂ ಚಿನ್ನ, 20 ಸಾವಿರ ನಗದು ಹಾಗು ಮತ್ತೊಂದು ಮನೆಯಲ್ಲಿ 20 ಸಾವಿರ ನಗದು ಒಯ್ದಿದ್ದಾರೆ. ಉಳಿದ ಮೂರು ಮನೆಯಲ್ಲಿ ಯತ್ನ ವಿಫಲವಾಗಿತ್ತು. ಈ ಪ್ರಕರಣ ಜಾಡು ಹಿಡಿದ ಪೋಲಿಸರಿಗೆ ಆರೋಪಿಗಳ ಪತ್ತೆಯೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ ಎಂದು ಹೇಳಿದ್ದಾರೆ.
2025 ಫೆ.24 ರಂದು ನಿಮ್ಮದೇ ಇಲಾಖೆಯ ಡಿಎಆರ್ ವಸತಿಗೃಹಕ್ಕೆ ಕಳ್ಳರು ನುಗ್ಗಿದರು. ಅವರನ್ನು ಪತ್ತೆಹಚ್ಚಲು ವಿಫಲವಾದ ನೀವು ಕೇವಲ ಸಿಬ್ಬಂದಿಗಳನ್ನು ಅಮಾನತು ಮಾಡುವುದು, ಸುಮೊಟೋ ಕೇಸು ದಾಖಲಿಸುವುದು ಬಿಟ್ಟರೇ ಮತ್ಯಾವ ಸಾಧನೆ ಮಾಡಿದ್ದೀರಿ..? ಎಂದು ಪ್ರಶ್ನಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳನ್ನು ಭೇದಿಸಲು ಪೋಲಿಸ್ ಸಿಬ್ಬಂದಿಗಳ ಕೊರತೆಯೂ ಇರಬಹುದು. ಕ್ಷುಲ್ಲಕ ವಿಚಾರಕ್ಕೆ ಸಿಬ್ಬಂದಿಗಳ ವೇತನ ಕಡಿತ, ಅಮಾನತು ಮಾಡುತ್ತ ಅವರಿಗೆ ಮಾನಸಿಕ ಕಿರುಕಳ ನೀಡಿದ್ದೀರಿ. ಈ ರೀತಿಯ ಕ್ರಮಗಳಿಂದ ಸಿಬ್ಬಂದಿಯ ವಿಶ್ವಾಸವನ್ನು ಪಡೆಯುವಲ್ಲಿ ವಿಫಲವಾಗಿ, ಜನತೆ ನ್ಯಾಯ ನೀಡುವಲ್ಲಿ ತಾವು ಸೋತ್ತಿದ್ದೀರಿ.
ಜಿಲ್ಲಾ ಎಸ್ಪಿ ಕಾನೂನು & ಸುವ್ಯವಸ್ಥೆ ಕರ್ತವ್ಯ ನಿರ್ವಹಿಸಲು ತಾವು ಅರ್ಹರೇ..? ಕೇವಲ ಸುಮೊಟೋ ಪ್ರಕರಣ ದಾಖಲಿಸಿ ಪ್ರಜಾಪ್ರಭುತ್ವದ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುವ ತಾವು ತಮ್ಮ ಇಲಾಖೆಯಲ್ಲಿನ ಯಾವುದಾದರೂ ಅಕಾಡೆಮಿ ಹುದ್ದೆಯನ್ನು ಅಲಂಕರಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.