ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಬರುವ ಬೈಪಾಸ್ ರಸ್ತೆಯಲ್ಲಿ ಕಳ್ಳಿಪಾಳ್ಯ ಗೇಟ್ ನಿಂದ ಅಡಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಗ್ರಾಮಗಳಿಗೆ ಪ್ರವೇಶಿಸುವ ಬಹು ಅವಶ್ಯ ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳ ಪರಿಶೀಲಿಸಿದ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಮೇಲ್ಸೇತುವೆ ನಿರ್ಮಾಣ ಶೀಘ್ರದಲ್ಲಿ ನಿರ್ಮಿಸುವ ಭರವಸೆ ನೀಡಿದರು.
ಭಾನುವಾರ ಬೆಳಿಗ್ಗೆ ಕಳ್ಳಿಪಾಳ್ಯಗೇಟ್ ಬಳಿ ಆಗಮಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಸ್ಥಳೀಯರ ಸಮಸ್ಯೆ ಬಗ್ಗೆ ಮಾಹಿತಿ ಕಲೆಹಾಕಿ ನಿತ್ಯ ವಾಹನಗಳ ಸಂಚಾರ, ಸಾವಿರಾರು ಮಂದಿ ಓಡಾಟದ ಬಗ್ಗೆ ತಿಳಿದು ಅಂದಾಜು 40 ರಿಂದ 45 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ರಸ್ತೆ ತುರ್ತು ನಿರ್ಮಿಸುವ ಭರವಸೆ ನೀಡಿದರು.

ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಕಳ್ಳಿಪಾಳ್ಯ ಗೇಟ್ ಮೂಲಕ ಅಡಗೂರು, ಧೂಳನಹಳ್ಳಿ, ಪ್ರಭುವನಹಳ್ಳಿ ಹೀಗೇ ಅನೇಕ ಹಳ್ಳಿಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ಸಂಸದರಾಗಿ ಆಯ್ಕೆಯಾದ ಸಮಯದಲ್ಲಿ ವಿ.ಸೋಮಣ್ಣ ಅವರು ರಸ್ತೆ ಮೇಲ್ಸೇತುವೆ ಬಗ್ಗೆ ಭರವಸೆ ನೀಡಿ ನುಡಿದಂತೆ ನಡೆದಿದ್ದಾರೆ ಎಂದು ಸ್ಥಳೀಯರು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಯೋಗಾನಂದಕುಮಾರ್, ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ, ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ಚನ್ನಬಸವೆಗೌಡ, ತಾಪಂ ಮಾಜಿ ಸದಸ್ಯ ಕರೆತಿಮ್ಮಯ್ಯ, ಬಿಜೆಪಿ ಮುಖಂಡ ಬ್ಯಾಟರಂಗೇಗೌಡ, ಸೋಮೇಶ್, ಮಂಜುನಾಥ್, ಕಾಂತಣ್ಣ, ಹೊಸಪಾಳ್ಯ ದಯಾನಂದ, ಮಧು ಇತರರು ಇದ್ದರು.