“ಶಿಕ್ಷಕರಾಗಿ, ಸೃಜನಶೀಲ ಬರಹದ ಮೂಲಕ ಸಾಹಿತ್ಯಿಕ ವಲಯವನ್ನು ಶ್ರೀಮಂತಗೊಳಿಸಿದ ಕೀರ್ತಿ ಜೆ.ಕೆ.ಜಮಾದಾರ ಅವರಿಗೆ ಸಲ್ಲುವುದು. ಅವರ ಸಾಹಿತ್ಯ ಸೇವೆ ಮನಗಂಡು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸೂಕ್ತವಾಗಿದೆ” ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಗದಗ ಜಿಲ್ಲೆಯ ಗದಗ ತಾಲ್ಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಏಪ್ರಿಲ್ 5ರಂದು ನಡೆಯುವ ಗದಗ ತಾಲ್ಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಜೆ.ಕೆ.ಜಮಾದಾರ ಅವರ ಬೆಟಗೇರಿ ನಿವಾಸದಲ್ಲಿ ಅಧಿಕೃತ ಆಹ್ವಾನ ನೀಡಿ ಮಾತನಾಡಿದರು.
“ಕುರ್ತಕೋಟಿ ಗ್ರಾಮ ಸಾಹಿತ್ಯ, ಧರ್ಮ ಮತ್ತು ಸಂಸ್ಕೃತಿಯ ಹಿನ್ನೆಲೆಯಲ್ಲಿ ಅಮೋಘ ಕೊಡುಗೆ ನೀಡಿದ ಪ್ರದೇಶ. ಅಲ್ಲಿಯ ಇತಿಹಾಸವನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ನಡೆಯಲಿ” ಎಂದು ಆಶಿಸಿದರು.
ನಿಯೋಜಿತ ಸಮ್ಮೇಳನಾಧ್ಯಕ್ಷ ಜೆ.ಕೆ.ಜಮಾದಾರ ಮಾತನಾಡಿ, “ಸಾಹಿತ್ಯದ ಅಲ್ಪಸೇವೆ ಮನಗಂಡು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿರುವುದು ಖುಷಿ ನೀಡಿದೆ. ಗದುಗಿನ ಪರಿಸರ ಸಾಹಿತ್ಯ, ಕಲೆ, ರಂಗಭೂಮಿ, ಸಂಗೀತದ ಹಿನ್ನೆಲೆಯನ್ನು ಹೊಂದಿದ್ದು, ಅದರ ಪೋಷಣೆ ನಮ್ಮ ಹೊಣೆ” ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, “ಸಮ್ಮೇಳನಗಳು ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜಾಗೃತವಾಗಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕನ್ನಡ ಅಸ್ಮಿತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪರಿಷತ್ತು ನಿರಂತರಾಗಿ ಕೆಲಸ ಮಾಡಲಿದೆ” ಎಂದರು.
ಗದಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಡಾ. ರಶ್ಮಿ ಅಂಗಡಿ ಅಧಿಕೃತ ಆಹ್ವಾನಪತ್ರ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಹಾವೇರಿ ವಿ ವಿ ಉಳಿದರೆ ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ : ನಿವೃತ್ತ ಕುಲಪತಿ ಡಾ. ಎ. ಮುರಿಗೆಪ್ಪ
ಸಭೆಯಲ್ಲಿ ಅಪ್ಪಣ್ಣ ಇನಾಮತಿ, ಶೇಖರಯ್ಯ ಹೊಸಮಠ, ಸಿದ್ದಯ್ಯ ವಿಭೂತಿ, ಜಿ.ಎನ್.ಪಾಟೀಲ, ಅಶೋಕ ಶಿರಹಟ್ಟಿ, ಪ್ರಕಾಶ ನಾಯ್ಕರ, ಕರಿಯಪ್ಪ ಕೊಡವಳ್ಳಿ, ರಾಘವೇಂದ್ರ ಹೊಸಮನಿ, ಬಾಬು ಗಾಣಿಗೇರ, ಡಾ. ಎಸ್.ಆರ್.ನಾಗನೂರ, ರಂಗನಗೌಡ ಓದುಗೌಡರ, ರತ್ನಕ್ಕ ಪಾಟೀಲ, ಸುರೇಶ ಬಳಗಾರ, ಡಿ.ಎಸ್.ಬಾಪುರೆ, ಶ್ರೀಮತಿ ನಿಡಗುಂದಿ, ಅಶೋಕ ಹಾದಿ, ಹೊಳೆಬಸಪ್ಪ ಅಕ್ಕಿ, ಜಯಶ್ರೀ ಶ್ರೀಗಿರಿ, ಡಾ. ರಾಜಶೇಖರ ದಾನರಡ್ಡಿ, ಶರಣಪ್ಪ ಹೊಸಂಗಡಿ, ಕೋಶಾಧ್ಯಕ್ಷೆ ಪಾರ್ವತಿ ಬೇವಿನಮರದ, ಸಹಕಾರ್ಯದರ್ಶಿಗಳಾದ ಜ್ಯೋತಿ ಹೇರಲಗಿ ಇದ್ದರು.