ಉಡುಪಿಯ ಮಲ್ಪೆ ಬಂದರು ಪ್ರದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ತಲೆ ಮೇಲೆ ಮೀನು ಹೊರುವ ಕಾಯಕದಲ್ಲಿ ನಿರತರಾಗಿದ್ದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರನ್ನು ಕಳೆದ ಮಾರ್ಚ್ 18ರಂದು ಕೆಲಸದ ವೇಳೆಯಲ್ಲಿ ಸ್ವಲ್ಪ ಮೀನು ಕದ್ದರು ಎಂಬ ಕ್ಷುಲ್ಲಕ ಆರೋಪದಲ್ಲಿ ಅಮಾನವೀಯವಾಗಿ ಮರಕ್ಕೆ ಹಗ್ಗದಿಂದ ಕಟ್ಟಿಹಾಕಿ, ಥಳಿಸಿದ ಪ್ರಕರಣದಲ್ಲಿ ಎಲ್ಲ ತಪ್ಪಿತಸ್ಥರ ವಿರುದ್ಧ ಮತ್ತು ಈ ಹೇಯ ಅಪರಾಧ ಕೃತ್ಯವನ್ನು ಬಹಿರಂಗವಾಗಿ ಬೆಂಬಲಿಸಿದ ಎಲ್ಲರ ವಿರುದ್ಧ ನಿಯಮಾನುಸಾರ ಕಠಿಣ ಕಾನೂನು ಕ್ರಮ ಕೈಗೊಳ್ಳಲೇ ಬೇಕು. ಇದರಲ್ಲಿ ರಾಜಿ ಮಾಡಿಕೊಳ್ಳಲು ನಮ್ಮ ಪ್ರಜ್ಞಾವಂತ ಸಮಾಜ ಅವಕಾಶ ನೀಡಬಾರದು. ಜಾತಿ ಮತ ಧರ್ಮ ಬೇಧ ಭಾವ ಇಲ್ಲದೆ ಈ ದಿಕ್ಕಿನಲ್ಲಿ ಎಲ್ಲರೂ ಪೊಲೀಸರನ್ನು ಬೆಂಬಲಿಸಬೇಕು. ಪೊಲೀಸರು ಕರ್ತವ್ಯ ಲೋಪ ಎಸಗಿದ್ದರೆ ಅವರ ವಿರುದ್ಧವೂ ಕ್ರಮಕೈಗೊಳ್ಳಲು ಅವಕಾಶವಿದ್ದೇ ಇದೆ. ಆದ್ದರಿಂದ ಯಾರೂ ಸಂಘಟಿತ ಶ್ರಮಜೀವಿ ಜನವರ್ಗವನ್ನು ಕಾನೂನು ಉಲ್ಲಂಘಿಸಲು ಪ್ರೆರೇಪಿಸಬಾರದು ಎಂದು ನಾವು ಎಲ್ಲರನ್ನು ವಿನಂತಿಸುತ್ತೇವೆ ಎಂದು ಪರಿಶಿಷ್ಟ ಜಾತಿಗಳ ಮತ್ತು ಬುಡಕಟ್ಟು ಸಂಘಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ ಹೇಳಿದರು.
ಅವರು ಇಂದು ಉಡುಪಿ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ದೌರ್ಜನ್ಯ ಸಂತ್ರಸ್ತ ಮತ್ತು ಅವರ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸ ಬೇಕು, ಸಂತ್ರಸ್ಥೆಗೆ ತುರ್ತು ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಅವರ ಕುಟುಂಬಕ್ಕೆ ಸೂಕ್ತ ಪುನರ್ವಸತಿ ಕಲ್ಪಿಸಬೇಕು ಎಂದು ನಾವು ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಎಸ್ ಪಿ ಅವರನ್ನು ಆಗ್ರಹಿಸುತ್ತೇವೆ ಎಂದು ಹೇಳಿದರು.

ಕಳೆದ ಕೆಲವು ವರ್ಷಗಳಿಂದ ತಲೆ ಮೇಲೆ ಮೀನು ಹೊರುವ ಕಾಯಕದಲ್ಲಿ ನಿರತರಾಗಿದ್ದ ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರನ್ನು ಸ್ವಲ್ಪ ಮೀನು ಕದ್ದರು ಎಂಬ ಕ್ಷುಲ್ಲಕ ಆರೋಪದಲ್ಲಿ ಅಮಾನವೀಯವಾಗಿ ಮರಕ್ಕೆ ಹಗ್ಗದಿಂದ ಕಟ್ಟಿಹಾಕಿ, ಥಳಿಸಿರುವ ಮನಕಲಕುವ, ಗಂಭೀರ ಅಪರಾಧ ಕೃತ್ಯ ಮತ್ತು ಈ ಅಪರಾಧ ಕೃತ್ಯವನ್ನು ಬಹಿರಂಗವಾಗಿ ಸಮರ್ಥಿಸಿದ ವಿಡಿಯೋ ನೋಡಿದಾಗ ಯಾರಿಗೇ ಆಗಲಿ ಅತೀವ ನೋವು – ಸಂಕಟವಾಗುತ್ತದೆ. ಮಾನವತೆ ಮೇಲೆ ನಂಬಿಕೆ ಇರುವ ಯಾರಿಗೇ ಆಗಲಿ, ಬುದ್ದಿವಂತರ ಜಿಲ್ಲೆ ಎಂಬ ಖ್ಯಾತಿಗೆ ಒಳಗಾದ ಈ ಜಿಲ್ಲೆ ಎತ್ತ ಸಾಗುತ್ತಿದೆ ಎಂಬ ಆತಂಕ ಸಹಜವಾಗಿ ಮೂಡುತ್ತದೆ ಎಂದು ಹೇಳಿದರು.
‘ನಾನು ಅವತ್ತು ಸ್ವಲ್ಪ ಮೀನು ತೆಗೆದಿರುವುದು ಹೌದು. ಮಲ್ಪೆ ಬಂದರಿನಲ್ಲಿ ಆ ರೀತಿ ಮೀನು ತೆಗೆಯುವುದು ಸಹಜ. ಆವತ್ತು ಏನೋ ನನ್ನ ಗ್ರಹಚಾರ ಸರಿ ಇರಲಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ಯಾರಿಗೂ ಏನೂ ಆಗುವುದು ಬೇಡ…. ಈ ಘಟನೆ ಆದ ಬಳಿಕ ನಾನು ಮಲ್ಪೆ ಬಂದರಿಗೆ ಹೋಗಿಲ್ಲ. ಇನ್ನು ನಾನಿಲ್ಲಿ ಇಲ್ಲಿ ಕೆಲಸ ಮಾಡುವುದು ಕಷ್ಟ. ಊರಿಗೆ ಹೋಗಲು ಉದ್ದೇಶಿಸಿದ್ದೇನೆ’ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ ಎಂದು ಪತ್ರಿಕೆ (ಉದಯವಾಣಿ – ಮಣಿಪಾಲ 22.03.2025, ಪುಟ-11 ವರದಿ ಗಮನಿಸಿ) ವರದಿ ಮಾಡಿದೆ. ಈ ವರದಿ ಮಲ್ಪೆ ಬಂದರು ಪ್ರದೇಶದ ಒಳಗೆ ಎಂತಹ ಪರಿಸ್ಥಿತಿ ಇದೆ ಎಂಬುದನ್ನು ಸೂಚ್ಯವಾಗಿ ಬಹಿರಂಗ ಪಡಿಸುತ್ತದೆ.

ಇದಾದ ಬಳಿಕ ಪೋಲೀಸರ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಲವರು ಬಳಸಿದ ಭಾಷೆಯಿಂದ ಮತ್ತು ಮಾನವತೆವುಳ್ಳ ಪ್ರತಿಯೊಬ್ಬನೂ ತಲೆ ತಗ್ಗಿಸುವಂತೆ ಮಾಡಿದ ಈ ಹೇಯ ಕೃತ್ಯವನ್ನು ಸಮರ್ಥಿಸಿದ ರೀತಿಯಿಂದ, ಪರಿಶಿಷ್ಟರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಹಾಕಿದ ಕೇಸು ವಾಪಸು ಪಡೆಯಬೇಕೆಂದು ನೀಡಿದ ಎಚ್ಚರಿಕೆಯ ಸ್ವರೂಪದಿಂದ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಶಿಷ್ಟ ಸಮುದಾಯಗಳ ಜನರಲ್ಲಿ ಒಂದು ರೀತಿಯಲ್ಲಿ ಅವ್ಯಕ್ತ ಆತಂಕವುಂಟಾಗಿದೆ.
ಈ ಹಿನ್ನೆಲೆಯಲ್ಲಿ, ಪರಿಶಿಷ್ಟ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ, ಅವರ ಮೇಲೆ ಸಾರ್ವಜನಿಕವಾಗಿ ಅವಮಾನಮಾಡಿ ದೌರ್ಜನ್ಯ ನಡೆಸಿರುವ ಮತ್ತು ಆ ದೌರ್ಜನ್ಯವನ್ನು ಬೆಂಬಲಿಸಿರುವ ಹಾಗೂ ಸಮರ್ಥಿಸಿರುವ ಎಲ್ಲರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಕೇಸು ದಾಖಲಿಸಿ, ಕಾನೂನಿನ ಮಾನ ಕಾಪಾಡಲೇ ಬೇಕು. ಇದು ಎಲ್ಲರೂ ಸಮಾನತೆಯ ಆಧಾರದಲ್ಲಿ, ಸೌಹಾರ್ದತೆಯಿಂದ ಬದುಕಲು ಅತ್ಯಗತ್ಯವಾಗಿದೆ ಎಂದು ನಾವು ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸರನ್ನು ಆಗ್ರಹಪೂರ್ವಕವಾಗಿ ಕೋರುತ್ತೇವೆ ಎಂದು ಮನವಿ ಮಾಡಿಕೊಂಡರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮೀನುಗಾರರು ಶ್ರಮ ಜೀವಿಗಳು. ಸತ್ಯ, ನ್ಯಾಯ, ಧರ್ಮದಲ್ಲಿ, ಸೌಹಾರ್ದತೆಯಲ್ಲಿ ನಂಬಿಕೆವುಳ್ಳವರು. ಅವರ ಒಳ್ಳೆತನವನ್ನು, ಸಂಘಟಿತ ಶಕ್ತಿಯನ್ನು ನಮ್ಮ ಸಂವಿಧಾನ ಪ್ರತಿಪಾದಿಸುವ ಮಹತ್ವದ ಜೀವನ ಮೌಲ್ಯಗಳ ಅಧಾರದಲ್ಲಿ, ಇಡೀ ಸಮಾಜವನ್ನು ಪರಿವರ್ತಿಸಲು ಬಳಸಿಕೊಳ್ಳಬೇಕೇ ಹೊರತು, ಕಾನೂನು ಉಲ್ಲಂಘನೆಯನ್ನು ಹೇಯ ಕೃತ್ಯಗಳನ್ನು ಸಮರ್ಥಿಸಿ ಕೊಳ್ಳಲು ಅಲ್ಲ. ಇದನ್ನು ಯಾರೂ ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಬಾರದು ಎಂದು ಹೇಳಿದರು.