ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಬೀದರ್ ಹೊರವಲಯದ ಕಮಠಾಣ ರಸ್ತೆಯ ನಂದಿನಗರದ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ಜರುಗಿತು.
2022-23ನೇ ಸಾಲಿನ ʼಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಅಂಡ್ ಅನಿಮಲ್ ಹಸ್ಬೆಂಡ್ರಿʼ ಸ್ನಾತಕ ಪದವಿಯಲ್ಲಿ ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಚಿದಾನಂದ ಅವರು 9 ಚಿನ್ನದ ಪದಕಗಳಿಗೆ ಭಾಜನರಾದರು.
ಚಿತ್ರದುರ್ಗದ ರವೀನಾ ಅವರು 15 ಚಿನ್ನದ ಪದಕಗಳ ಸಾಧನೆ ಮಾಡಿದರು. ಆದರೆ ಕೆಪಿಎಸ್ಸಿ ಪರೀಕ್ಷೆ ಸಿದ್ಧತೆಯಲ್ಲಿರುವ ಕಾರಣ ಅವರು ಗೈರಾಗಿದ್ದಾರೆ ಎಂದು ತಿಳಿದು ಬಂದಿದೆ.

ಚಿತ್ರದುರ್ಗದ ಚಳ್ಳಕೆರೆಯ ಚಿಕ್ಕೇನಹಳ್ಳಿ ಗ್ರಾಮದವರಾದ ದಕ್ಷೀತ್ ಪಿ.ಎಲ್. ಅವರು ಎಂವಿಎಸ್ಸಿ ಸ್ನಾತಕೋತ್ತರ ಪದವಿಯಲ್ಲಿ 6 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ದಕ್ಷೀತ್ ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು, 2022–23ನೇ ಸಾಲಿನಲ್ಲಿ ಈ ಸಾಧನೆಗೈದಿದ್ದಾರೆ.
ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದ ಎಲೆಕ್ಟ್ರಿಕಲ್ ವ್ಯಾಪಾರಿ ಹನುಮಂತಪ್ಪ ಅವರ ಮಗಳಾದ ಭಾಗ್ಯಶ್ರೀ ಅವರು ‘ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಅಂಡ್ ಅನಿಮಲ್ ಹಸ್ಬೆಂಡ್ರಿ’ (ಬಿವಿಎಸ್ಸಿ ಅಂಡ್ ಎಎಚ್) ಸ್ನಾತಕ ಪದವಿಯಲ್ಲಿ 4 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.
ಭಾಗ್ಯಶ್ರೀ ಅವರು ಬೀದರ್ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಧ್ಯಾರ್ಥಿನಿಯಾಗಿದ್ದಾರೆ.

ಹನುಮಂತಪ್ಪ ಅವರು ಎಲೆಕ್ಟ್ರಿಕಲ್ ಅಂಗಡಿ ಇಟ್ಟುಕೊಂಡು ಅದರ ಆದಾಯದಿಂದ ಮಗಳಿಗೆ ಓದಿಸಿದ್ದಾರೆ. ಪೋಷಕರ ನಿರೀಕ್ಷೆಯಂತೆ ಉತ್ತಮ ರೀತಿಯಲ್ಲಿ ಓದುವುದರ ಮೂಲಕ ಮಗಳು 2022-23ನೇ ಸಾಲಿನಲ್ಲಿ ಈ ಸಾಧನೆ ಮಾಡಿದ್ದಾರೆ.
ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ಸ್ನಾತಕ ಪದವಿಯಲ್ಲಿ 16 ವಿದ್ಯಾರ್ಥಿಗಳಿಗೆ 53 ಚಿನ್ನದ ಪದಕಗಳು, ಸ್ನಾತಕೋತ್ತರ ಪದವಿಯಲ್ಲಿ 21 ವಿದ್ಯಾರ್ಥಿಗಳಿಗೆ 34 ಚಿನ್ನದ ಪದಕಗಳು, ಡಾಕ್ಟರೇಟ್ ಪದವಿ ಪೂರೈಸಿದ ಏಳು ವಿದ್ಯಾರ್ಥಿಗಳಿಗೆ ತಲಾ ಒಂದು ಚಿನ್ನದ ಪದಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿಎರಡು ಚಿನ್ನದ ಪದಕ ಸೇರಿದಂತೆ ಒಟ್ಟು 96 ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು.

ಒಟ್ಟು 634 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. 419 ಸ್ನಾತಕ ಪದವೀಧರರು, 187 ಸ್ನಾತಕೋತ್ತರ ಹಾಗೂ 28 ಡಾಕ್ಟರೇಟ್ ಪದವೀಧರರು ಸೇರಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮನ್ನ ಹಿಂಗ್ಯಾಕ ನೋಡತಾರಪ ಬೆಂಗ್ಳೂರ್ ಮಂದಿ? (ಭಾಗ-1)
ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ನಿರ್ದೇಶಕ ಡಾ. ನವೀನಕುಮಾರ ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಪ್ರೊ. ಕೆ.ಸಿ. ವೀರಣ್ಣ, ಕುಲಸಚಿವ ಪಿ.ಟಿ. ರಮೇಶ, ಆಡಳಿತ ಮಂಡಳಿ ಸದಸ್ಯರು, ಬೋಧಕ ಸಿಬ್ಬಂದಿ ಹಾಜರಿದ್ದರು