ಭೂಮಿಗಾಗಿ ರೈತರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ಪ್ರಾಂತ ರೈತ ಸಂಘದ ಸದಸ್ಯರನ್ನು ನಿಂದಿಸಿ ಆರೋಪ ಮಾಡಿದ ತಹಶೀಲ್ದಾರ್ ಕ್ಷಮೆ ಕೇಳಬೇಕು. ಭೂಮಿಗೆ ಸಲ್ಲಿಸುವ ಅರ್ಜಿ ಸ್ವೀಕರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರುಪ್ರತಿಭಟನೆ ನಡೆಸಿದರು. ಬೆಳಿಗ್ಗೆ ಬಸ್ ನಿಲ್ದಾಣದಿನದ ಸರ್ಕಲ್ ಮೂಲಕ ತಾಲ್ಲೂಕು ಕಚೇರಿ ಮುಂದೆ ಜಮಾಯಿಸಿದ ನೂರಾರು ಮಂದಿ ರೈತರು ಹಾಗೂ ಪ್ರಾಂತ ರೈತ ಸಂಘದ ಕಾರ್ಯಕರ್ತರು ತಹಶೀಲ್ದಾರ್ ವಿರುದ್ಧ ಘೋಷಣೆ ಕೂಗಿದರು.

ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶವಂತ್ ಮಾತನಾಡಿ ಬಗರ್ ಹುಕುಂ ಸಮಿತಿ ಮೂಲಕ ಅರ್ಜಿ ಸಲ್ಲಿಸಿ ಭೂಮಿ ಮಂಜೂರು ಆಗದ ಹಿನ್ನಲೆ ಈ ಹಿಂದೆ ಪ್ರಾಂತ ರೈತ ಸಂಘ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸುವ ಚಳವಳಿ ಮಾಡಿದ್ದೇವೆ. ಸುಮಾರು ನಾಲ್ಕು ಸಾವಿರ ಅರ್ಜಿ ನಂತರ ಬಾಕಿ ಇದ್ದ ಅರ್ಜಿಗಳ ಸಲ್ಲಿಕೆಗೆ ತಹಶೀಲ್ದಾರ್ ಅವರೇ ಖುದ್ದು ಎಲ್ಲರೂ ಬರುವ ಬದಲು ಒಬ್ಬರು ಎಲ್ಲರ ಅರ್ಜಿ ತಂದು ಸಲ್ಲಿಸಲು ಸೂಚಿಸಿದ್ದರು. ಅವರ ಮಾತಿನಂತೆ ನಮ್ಮ ಸಂಘದ ಸದಸ್ಯ ಅರ್ಜಿಗಳನ್ನು ಸಲ್ಲಿಸಲು ಹೋದಾಗ ಎಲ್ಲಾ ಅರ್ಜಿಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಪೊಲೀಸ್ ಕೇಸ್ ಮಾಡುವುದಾಗಿ ಬೆದರಿಸಿ ಅರ್ಜಿಗೆ ಸಾವಿರ ರೂ ಪಡೆಯುತ್ತೀರಿ ಎಂದು ಆರೋಪ ಮಾಡಿದ್ದಾರೆ. ಸಂಘ ರೈತರ ಪರ ನಿಂತು ಕೆಲಸ ಮಾಡುತ್ತದೆ. ಮಾತಿಗೆ ತಪ್ಪಿದ ತಹಶೀಲ್ದಾರ್ ಅವರು ಕ್ಷಮೆ ಕೇಳಬೇಕು. ರೈತರಿಗೆ ಸೂಕ್ತ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಸುಬ್ರಹ್ಮಣ್ಯ ಮಾತನಾಡಿ ಜಮೀನು ಇಲ್ಲದ ರೈತರು ಭೂಮಿ ಕೇಳುವುದು ನಮ್ಮ ಹಕ್ಕು ಆಗಿದೆ. ಬಹಳ ವರ್ಷಗಳಿಂದ ಕೃಷಿ ನಡೆಸಿ ದಾಖಲೆ ಸಿಗದ ಹಿನ್ನಲೆ ರೈತರು ಕಂಗಾಲಾಗಿದ್ದಾರೆ. ಸಮಿತಿಯಲ್ಲಿ ಮಂಜೂರು ಆಗಿಲ್ಲ. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಸಹ ಭೂಮಿ ದಕ್ಕಿಲ್ಲ. ಗಂಗಯ್ಯನಪಾಳ್ಯ ಗೋಮಾಳ ಸರ್ವೇ ನಂಬರ್ ನೂರಾರು ವರ್ಷದಿಂದ ರೈತರಿದ್ದಾರೆ. ಈಗ ಅರಣ್ಯ ಭೂಮಿ ಎಂದು ಒಕ್ಕಲೆಬ್ಬಿಸಿ ರೈತರನ್ನು ಬೀದಿಗೆ ತಂದಿದ್ದಾರೆ. ಈ ಜೊತೆಗೆ ಮಂಜೂರಾದ ಜಮೀನು ದುರಸ್ತು ಮಾಡಿ ದಾಖಲೆ ಮಾಡಿಕೊಡುತ್ತಿಲ್ಲ. ಈ ವಿಚಾರವಾಗಿ ಹೋರಾಟ ನಿರಂತರ ನಡೆದಿದೆ. ಈ ಸಮಯ ತಹಶೀಲ್ದಾರ್ ಅವರ ನಡೆ ಬೇಸರ ತಂದಿದೆ. ರೈತರಿಗೆ ಭೂಮಿ ನೀಡಲು ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿರುವುದು. ಸರ್ಕಾರ ಭಾಗವಾಗಿ ಅರ್ಜಿ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಜಪ್ಪ ಮಾತನಾಡಿ ನೂರಾರು ರೈತರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಿಲ್ಲ. ಬಗರ್ ಹುಕುಂ ಸಮಿತಿಯಲ್ಲಿ ದಕ್ಕದ ಹಿನ್ನಲೆ ಸರ್ಕಾರಕ್ಕೆ ಒತ್ತಾಯ ತರಲು ಹೋರಾಟ ಮಾಡಲಾಗಿತ್ತು. ಸರ್ಕಾರ ಭೂಮಿ ನೀಡುವ ಭರವಸೆ ನೀಡಿತ್ತು. ಈ ಹಿನ್ನಲೆ ಭೂ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಆದರೆ ತಹಶೀಲ್ದಾರ್ ಆರತಿ ಅವರು ಅರ್ಜಿ ಸಲ್ಲಿಸುವ ರೈತರ ಪ್ರತಿನಿಧಿಗೆ ನಿಂದಿಸಿ ಸಾವಿರ ರೂ ಪಡೆಯುವ ಆರೋಪ ಮಾಡಿರುವುದು ಖಂಡನೀಯ. ಈ ನಡೆ ಖಂಡಿಸಿ ಉಳಿದ ಅರ್ಜಿ ಸ್ವೀಕರಿಸಿ ಸರ್ಕಾರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಪ್ರಾಂತ ರೈತ ಸಂಘದ ಸದಸ್ಯರು ಹಾಗೂ ರೈತರ ಬಳಿಗೆ ದಿಢೀರ್ ಆಗಮಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಪ್ರಾಂತ ರೈತ ಸಂಘದ ಸದಸ್ಯರೊಂದಿಗೆ ಮಾತಿನ ಚಕಮಕಿ ನಡೆಸಿದರು.
