ವಾಣಿವಿಲಾಸ ಸಾಗರ ನೀರಗಂಟಿ ನೌಕರರಿಗೆ (ವಾಟರ್ ಮ್ಯಾನ್) ವೇತನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ವಿವಿ ಸಾಗರ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
“ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರದಿಂದ ಹಗಲು ರಾತ್ರಿ ಎನ್ನದೆ ಸಾರ್ವಜನಿಕರಿಗೆ ನೀರು ಪೂರೈಕೆ ಮಾಡುವ ನೀರಗಂಟಿಗಳಿಗೆ ಕಳೆದ 4 ತಿಂಗಳಿನಿಂದ ಸಂಬಳ ಕೊಡದೆ ಎಲ್ಒಸಿ ಬಂದಿಲ್ಲವೆಂದು ಕುಂಟುನೆಪ ಹೇಳುತ್ತಾ ಸತಾಯಿಸುತ್ತಿದ್ದಾರೆ” ಎಂದು ಕಸವನಹಳ್ಳಿ ರಮೇಶ್ ಆರೋಪಿಸಿದರು.
“ನೀರಗಂಟಿಗಳಿಗೆ ನಾಲ್ಕು ತಿಂಗಳ ಹಿಂದಿನಿಂದಲೂ ಸಂಬಳ ಇಲ್ಲದೆ ಮಕ್ಕಳ ಶಾಲಾ-ಕಾಲೇಜು ಶೈಕ್ಷಣಿಕ ವೆಚ್ಚ, ಅನಾರೋಗ್ಯ ಸಮಸ್ಯೆಗಳಿಗೆ ದೈನಂದಿನ ಖರ್ಚು, ಕುಟುಂಬ ನಿರ್ವಹಣೆ ಸೇರಿದಂತೆ ಇತರೆ ಖರ್ಚುಗಳಿಗೆ ತುಂಬಾ ತೊಂದರೆ ಆಗಿದೆ. ಆದ್ದರಿಂದ ತುರ್ತಾಗಿ ವೇತನ ಬಿಡುಗಡೆ ಮಾಡಬೇಕು” ಎಂದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ವಿವಿ ಸಾಗರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಮಾನವ ಸಂಪನ್ಮೂಲ ಹೊರಗುತ್ತಿಗೆ ಸಂಸ್ಥೆಯ ಮುಖ್ಯಸ್ಥ ಜೆ ಬಿ ರಾಜು ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ “ಎರಡು ತಿಂಗಳ ಸಂಬಳವನ್ನು ಸೋಮವಾರ ನೀರಗಂಟಿ ನೌಕರರ ಖಾತೆಗೆ ಜಮಾ ಮಾಡುತ್ತೇನೆ” ಎಂದು ಭರವಸೆ ನೀಡಿದರು.
“ಸರ್ಕಾರದಿಂದ ಈವರೆಗೆ ಅವರ ಸಂಬಳ, ಪಿಎಫ್ ಮತ್ತು ಇಎಸ್ಐ ಅನುದಾನ ಬಂದಿಲ್ಲ. ಆದರೂ ತನ್ನ ಕಡೆಯಿಂದ ಪ್ರತಿ ತಿಂಗಳು ಪಿಎಫ್ ಮತ್ತು ಇಎಸ್ಐ ಅನುದಾನವನ್ನು ಜಮಾ ಮಾಡುತ್ತಿದ್ದೇನೆ. ಆದ್ದರಿಂದ ಕೇವಲ ಎರಡು ತಿಂಗಳ ಸಂಬಳವನ್ನು ಬಿಡುಗಡೆ ಮಾಡುತ್ತೇನೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹ
ಭದ್ರಾ ಮೇಲ್ದಂಡೆ ಎ ಇ ಇ ವಿಜಯ್ ಕುಮಾರ್ ಅವರ ಸಮ್ಮಖದಲ್ಲಿ ಮುಖ್ಯ ಎಂಜಿನಿಯರ್ ಶಿವಪ್ರಕಾಶ್ ಅವರೊಂದಿಗೆ ದೂರವಾಣಿಯಲ್ಲಿ ಮಾತಾಡಿ ತುರ್ತಾಗಿ ಸಂಬಳ ಹಾಕಲು ಒತ್ತಾಯಿಸಲಾಯಿತು.
ನೀರುಗಂಟಿ ನೌಕರರ ಮುಖಂಡ ದ್ಯಾಮಣ್ಣ, ರವಿ, ಐನಳ್ಳಿ ಇಬ್ರಾಹಿಂ, ಬಿದರಿಕೆರೆ ರಮೇಶ್, ರಾಜಣ್ಣ ಸೇರಿದಂತೆ ಜೂನಿಯರ್ ಎಂಜಿನಿಯರ್ ನಿಜ್ಜೇಗೌಡ ಇದ್ದರು.