ಈ ಬಾರಿ ಯುಗಾದಿ ಹಬ್ಬ ಕಲ್ಪತರು ನಾಡು ತಿಪಟೂರಿನ ತೆಂಗು ಬೆಳೆಗಾರರಿಗೆ ಭರ್ಜರಿ ಖುಷಿ ಸುದ್ದಿ ತಂದಿದೆ. ತಾಲೂಕಿನಲ್ಲಿ ಕ್ವಿಂಟಲ್ಗೆ 19 ಸಾವಿರ ದಾಟುವ ಮೂಲಕ ಕೊಬ್ಬರಿ ಧಾರಣೆ ಸಾರ್ವಕಾಲಿಕ ದಾಖಲೆ ಬರೆದಿದೆ.
ನಿರಂತರ ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರಿಗೆ ಕೊಬ್ಬರಿ ಬೆಲೆ ಏರಿಕೆ ಭರವಸೆ ಮೂಡಿಸಿದೆ. ಉಂಡೆ ಕೊಬ್ಬರಿಯ ಹೇರಳ ಉತ್ಪಾದನೆಗೆ ಹೆಸರಾಗಿರುವ ತುಮಕೂರು ಜಿಲ್ಲೆಯಲ್ಲಿ ಸಾವಿರಾರು ರೈತ ಕುಟುಂಬಗಳಿಗೆ ಕೊಬ್ಬರಿಯೇ ಜೀವನಾಧಾರವಾಗಿದೆ. ನಿಧಾನಗತಿಯಲ್ಲಿ ಏರಿಕೆಯತ್ತ ಸಾಗಿರುವ ಕೊಬ್ಬರಿ ಬೆಲೆ ಈ ವಾರ 19051 ರೂಗೆ ಮಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಈ ಹಿಂದೆ 2014-15 ರಲ್ಲಿ 19 ಸಾವಿರ ಗರಿಷ್ಠ ಬೆಲೆ ಪಡೆದು ದಾಖಲೆ ನಿರ್ಮಿಸಿದ್ದ ಕೊಬ್ಬರಿ ಇದೀಗ ಕ್ವಿಂಟಲ್ ಕೊಬ್ಬರಿಗೆ 19051 ರೂಗೆ ಮಾರಾಟವಾಗುವ ಮೂಲಕ ಹಿಂದಿನ ದಾಖಲೆಯನ್ನು ಮುರಿದಿದೆ. 2,704 (6,296 ಚೀಲ)ಕ್ವಿಂಟಲ್ ಕೊಬ್ಬರಿ ಅವಕವಾಗಿದ್ದು, ಕನಿಷ್ಠ 16800 ರೂಗೆ ಮಾರಟವಾಗಿದೆ.
ನಿರಂತರ ಬೆಲೆ ಕುಸಿತದಿಂದ ನಷ್ಟದಲ್ಲಿದ್ದ ಕೊಬ್ಬರಿ ಬೆಳೆಗಾರರಿಗೆ ಕೊಬ್ಬರಿ ಧಾರಣೆ ಏರಿಕೆ ಈ ಬಾರಿಯ ಯುಗಾದಿಗೆ ರೖತರ ಪಾಲಿಗೆ ಕೊಬ್ಬರಿ ಬೆಲ್ಲವಾಗಿದೆ. ರೋಗಭಾದೆ, ಮಳೆ ಕೊರತೆಯಿಂದ ತೆಂಗು ಇಳುವರಿಯಲ್ಲಿ ಭಾರಿ ಕುಸಿತ ಕಂಡಿದೆ. ಹಾಗೆ ಕೊಬ್ಬರಿ ಬೆಲೆ ಕುಸಿತದಿಂದ ರೈತರು ತೆಂಗು ಬೆಳೆಯಿಂದ ಅಡಕೆ ಬೆಳೆ ಕಡೆ ವಾಲಿರುವುದರಿಂದ ತೆಂಗು ಬೆಳೆಯ ವಿಸ್ತೀರ್ಣವೂ ಕಡಿಮೆಯಾಗುತ್ತಿದೆ. ಹಾಗಾಗಿ ಕೊಬ್ಬರಿ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ವರದಿಗಳು ಅಂದಾಜಿಸಿವೆ.

ನೈಸರ್ಗಿಕವಾಗಿ ಉತ್ಪಾದನೆಯಾಗುವ ತಿಪಟೂರು ಕೊಬ್ಬರಿಗೆ ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ಬೇಡಿಕೆಯೆನೋ ಇತ್ತು. ಆದರೆ ಉತ್ಪಾದನಾ ವೆಚ್ಚಕ್ಕೂ ಕೊಬ್ಬರಿಗೆ ಸಿಗುತ್ತಿದ್ದ ಬೆಲೆಗೂ ಅಜಗಜಾಂತರ ವ್ಯಾತ್ಯಾಸವು ಕೊಬ್ಬರಿ ಬೆಳೆಗಾರರನ್ನು ನಿರಂತರ ನಷ್ಟಕ್ಕೆ ದೂಡುತ್ತಿತ್ತು. ರೖತರು ಎಂಎಸ್ಪಿ ಬೆಲೆಗೆ ನಾಫೆಡ್ ಮೂಲಕ ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿ ಮಾಡುವಂತೆ ನಿರಂತರ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಸ್ಥಳೀಯವಾಗಿಯೇ ತೆಂಗು ಉಪಉತ್ಪನ್ನಗಳನ್ನು, ಕೊಬ್ಬರಿ ಉಪಉತ್ಪನ್ನಗಳನ್ನು ತಯಾರಿಸಲು ಉತ್ತೇಜನ ನೀಡಿ, ಕೊಬ್ಬರಿಗೆ ಮಾರುಕಟ್ಟೆ ಸೃಷ್ಠಿಸುವಂತೆ ರೖತರು ಮನವಿ ಮಾಡುತ್ತಲೇ ಇದ್ದಾರೆ.
ತಿನ್ನುವ ಕೊಬ್ಬರಿಗೆ ಹೆಸರಾಗಿರುವ ತಿಪಟೂರು, ಹುಳಿಯಾರು, ಅರಸೀಕೆರೆ, ಮಾರುಕಟ್ಟೆಯ ಕೊಬ್ಬರಿಗೆ ಇದೀಗ ಬೇಡಿಕೆ ಸೃಷ್ಟಿಯಾಗಿದೆ. ರಾಜಪೂರಿ ಕೊಬ್ಬರಿ ಮಾದರಿಯಲ್ಲಿ ತಿಪಟೂರು ಕೊಬ್ಬರಿ ಮಾಡುತ್ತಿರುವುದರಿಂದ ಬೇಡಿಕೆ ಹೆಚ್ಚಾಗಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ತೆಂಗಿನ ಕಾಯಿಯನ್ನು ಹೋಳು ಮಾಡಿ ಬಿಸಿಲಿನಲ್ಲಿ ಒಣಗಿಸಿ ಮಾರುವ ಪದ್ಧತಿ ತಮಿಳುನಾಡಿನಲ್ಲಿ ರೂಢಿಯಲ್ಲಿದೆ. ಆದೇ ಮಾದರಿಯಲ್ಲಿ ತಿಪಟೂರು ಉಂಡೆ ಕೊಬ್ಬರಿಯನ್ನು ಹೋಳು ಮಾಡಿ ಮಾರಾಟ ಮಾಡಲಾಗುತ್ತಿದೆ. ಉತ್ತರ ಭಾರತೀಯರು ಈ ಕೊಬ್ಬರಿಯನ್ನು ಇಷ್ಟಪಟ್ಟು ತಿನ್ನುತ್ತಾರೆ.
ಕೊಬ್ಬರಿ ಧಾರಣೆ ಏರಿಕೆ ನಡುವೆಯೇ ತೆಂಗಿನ ಚಿಪ್ಪು, ಎಳನೀರು, ತೆಂಗಿನ ಕಾಯಿ ಬೆಲೆಯೂ ಏರಿಕೆಯಾಗುತ್ತಿದೆ. ತೆಂಗಿನಕಾಯಿ ಒಂದಕ್ಕೆ 60 ರೂನಂತೆ ಮಾರಾಟವಾಗುತ್ತಿದೆ. ಒಂದು ಟನ್ ಚಿಪ್ ಪ್ರಸ್ತುತ 25000 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆ ಒಂದು ಸಾವಿರ ತೆಂಗಿನ ಮಟ್ಟೆ 500 ರೂಗೆ ಮಾರಾಟವಾಗುತ್ತಿದೆ. ತೆಂಗಿನ ಬೆಳೆಗೂ ಬಂಪರ್ ಬೆಲೆ ಬಂದಂತಾಗಿದೆ.
“ನೈಸರ್ಗಿಕವಾಗಿ ರಾಸಾಯನಿಕ ರಹಿತವಾಗಿ ಬೆಳೆಯುವ ಉಂಡೆ ಕೊಬ್ಬರಿ ಬೆಲೆಯೇನೋ ಏರಿಕೆಯಾಗಿದೆ. ಆದರೆ ದೀರ್ಘಕಾಲ ಇದೇ ರೀತಿ ಇರುತ್ತದೆ ಎಂದು ಹೇಳಲು ಬರುವುದಿಲ್ಲ. ಒಮ್ಮೆ ಭಾರೀ ಖುಷಿ ಕೊಡುವಷ್ಟು ಏರಿಕೆಯಾಗುವ ಬೆಲೆ ಕೆಲವೊಮ್ಮೆ ಕಣ್ಣೀರು ತರಿಸುವಷ್ಟು ಪಾತಾಳಕ್ಕೆ ಕುಸಿಯುತ್ತದೆ. ಕೊಬ್ಬರಿ ಬೆಲೆ ಕಡಿಮೆಯಾದಾಗ ಸರ್ಕಾರ ಇಂತಿಷ್ಟು ಬೆಂಬಲ ಬೆಲೆ ಎಂದು ಘೋಷಿಸಿ ಖರೀದಿಸಿದರೆ ರೈತರಿಗೂ ಅನುಕೂಲವಾಗಲಿದೆ” ಎಂದು ಈದಿನ ಡಾಟ್ ಕಾಮ್ನೊಂದಿಗೆ ಮಾತಾಡುತ್ತಾರೆ ರೈತ ಕೃಷ್ಣಮೂರ್ತಿ.
ಇದನ್ನೂ ಓದಿ: ತಿಪಟೂರು | ತಾಯಿ ಮಗಳ ಮೇಲೆ ಹರಿದ ಬಸ್; ಮೃತದೇಹ ಎತ್ತದಂತೆ ಗ್ರಾಮಸ್ಥರ ಧರಣಿ
ರೈತ ಗಿರೀಶ್ ಮಾತನಾಡಿ, “ಇಳುವರಿ ಕುಸಿತದಿಂದ ಕೊಬ್ಬರಿ ಉತ್ಪಾನೆಯೂ ಈ ಬಾರಿ ಕಡಿಮೆಯಿದೆ. ಹಾಗೆ ಕಾಯಿ ಕೀಳುವುದರಿಂದ, ಕೊಬ್ಬರಿ ಸುಲಿಯಲು, ಹೊಡೆಯಲು ಕೂಲಿಯೂ ದುಬಾರಿಯಾಗಿದೆ. ಹೀಗಿರುವಾಗ ಬೆಲೆ ಏರಿಕೆಯಿಂದ ರೖತರಿಗೆ ಹೇಳಿಕೊಳ್ಳುವಂತಹ ಲಾಭವೇನೂ ಆಗುವುದಿಲ್ಲ” ಎಂದರು.
ಒಟ್ಟಾರೆ ಕೊಬ್ಬರಿ ಮಾರಿ ಚಿನ್ನ ತರುವ ಕಾಲವೊಂದಿತ್ತು ಎನ್ನುವ ಕೊಬ್ಬರಿ ಬೆಳೆಗಾರರ ಬದುಕಿನಲ್ಲಿ ಗತವು ಮರುಕಳಿಸಲಿ.
