ರಾಜ್ಯದಲ್ಲಿ ಸರ್ಕಾರ ಆರು ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಕೂಡಲೇ ಈ ನಿರ್ಧಾರವನ್ನು ಕೈಬಿಡಬೇಕು ಎಂದು ಶಿಕ್ಷಣ ಉಳಿಸಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿ ಎನ್ ರಾಜಶೇಖರ್ ಆಗ್ರಹಿಸಿದರು.
ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, “ರಾಜ್ಯ ಸರ್ಕಾರ ಕಡಿಮೆ ದಾಖಲಾತಿ ಇರುವ ಶಾಲೆಗಳನ್ನು ವಿಲೀನಗೊಳಿಸಲು ನಿರ್ಧಾರ ಮಾಡಿದೆ. ವಿಲೀನದ ಹೆಸರಿನಲ್ಲಿಸುಮಾರು ಆರು ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತವೆ. ಇದು ಬಹಳ ಅಘಾತಕಾರಿ ಹಾಗೂ ನೋವಿನ ವಿಷಯ. ಸರ್ಕಾರಿ ಶಾಲೆಗಳಲ್ಲಿ ಕೊರತೆಯಾಗಿರುವ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಕಡಿಮೆ ಇರುವ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಪ್ರಯತ್ನಿಸಬೇಕು. ಗುಣಮಟ್ಟದ ಶಿಕ್ಷಣ ನೀಡಬೇಕು. ಸರ್ಕಾರಿ ಶಾಲೆಗಳ ಈ ದುಸ್ಥಿತಿಗೆ ಕಾರಣ ಸಾವಿರಾರು ಶಿಕ್ಷಕರ ಹುದ್ದೆಗಳೇ ಖಾಲಿ ಬಿದ್ದಿವೆ. ಆ ಹುದ್ದೆಗಳಿಗೆ ಶೀಘ್ರ ಶಿಕ್ಷಕರನ್ನು ನೇಮಿಸಬೇಕು. ಅದು ಬಿಟ್ಟು ಈ ರೀತಿ ಶಾಲೆಗಳನ್ನೇ ಮುಚ್ಚಲು ಮುಂದಾಗಬಾರದು” ಎಂದರು.
“ರಾಜ್ಯ ಸರ್ಕಾರವೇ ಹೇಳಿಕೊಳ್ಳುವ ಪ್ರಕಾರ ಸರಿಸುಮಾರು 59 ಸಾವಿರ ಶಿಕ್ಷಕರ ಹುದ್ದೆ ಖಾಲಿ ಬಿದ್ದಿವೆ ಅದನ್ನು ತುಂಬುತ್ತಿಲ್ಲ. ಈ ತಕ್ಷಣಕ್ಕೆ ಒಂದು ತರಗತಿಗೆ ಒಬ್ಬ ಶಿಕ್ಷಕ ಲೆಕ್ಕ ತಗೊಂಡರೆ ಕರ್ನಾಟಕದಲ್ಲಿ ಎರಡೂವರೆ ಲಕ್ಷ ಶಿಕ್ಷಕರನ್ನು ಭರ್ತಿ ಮಾಡಬೇಕಾಗುತ್ತದೆ; ಅದನ್ನು ಮಾಡುತ್ತಿಲ್ಲ. 30 ರಿಂದ 40,000 ಸಾವಿರ ಅತಿಥಿ ಶಿಕ್ಷಕರಿದ್ದಾರೆ. ಅವರನ್ನು ಕ್ರಮಬದ್ಧಗೊಳಿಸುತ್ತಿಲ್ಲ. ಇವತ್ತಿನ ಸರ್ಕಾರ ಮಾತ್ರವಲ್ಲ, ಇಲ್ಲಿವರೆಗೆ ಯಾವುದೇ ಪಕ್ಷದ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ಕೊಡುತ್ತಲೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಶಾಲೆ ಮುಚ್ಚುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಂತೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲರೂ ಒಂದಾಗಿಬಿಟ್ಟಿದ್ದಾರೆ. ಸರ್ಕಾರಿ ಶಾಲೆಗಳನ್ನು ಮುಚ್ಚಬೇಕೆನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿ 2020 ಅದರ ಪ್ರಮುಖ ಶಿಫಾರಸುಗಳಲ್ಲಿ ಒಂದು. ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುತ್ತೇವೆ ಅಂತ ಹೇಳುತ್ತಾರೆ, ರಾಜ್ಯಕ್ಕೊಂದು ಶಿಕ್ಷಣ ನೀತಿ ತರಬೇಕು ಅಂತ ಹೇಳುತ್ತಾರೆ, ಇನ್ನೊಂದು ಕಡೆ ಅದೇ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸಿನಿಂದ ಶಾಲೆಗಳನ್ನು ಮರ್ಜ್ ಮಾಡುವುದು ಅಂದರೆ ಶಾಲೆಗಳನ್ನು ಮುಚ್ಚಲು ಹೊರಟಿದ್ದಾರೆ ಅಂತಲೇ ಅರ್ಥ. ಹೊಸ ಶಿಕ್ಷಣ ನೀತಿಗೆ ಇವರ ವಿರೋಧ ಏನು? ಇದು ಬಾಯಿಯೋಪಚಾರಕ್ಕೆ ಅಷ್ಟೇ ಹೇಳುವುದಾ?” ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಕೊಪ್ಪಳ | ಕರ್ತವ್ಯ ಲೋಪ ಆರೋಪ : ಆನೆಗೊಂದಿ ಗ್ರಾ.ಪಂ. ಪಿಡಿಒ ಅಮಾನತು
ಸಭೆಯಲ್ಲಿ ಶಾಲಾ ಪಾಲಕರ ಹೋರಾಟ ಸಮಿತಿ ಸಂಚಾಲಕ ಎಸ್ ಎ ಗಫಾರ್, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್, ಕೊಳಚೆ ನಿರ್ಮೂಲನಾ ವೇದಿಕೆ ಜಿಲ್ಲಾ ಸಂಚಾಲಕ ಗಾಳೆಪ್ಪ ಮುಂಗೋಲಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಮಖಬೂಲ್ ರಾಯಚೂರು, ಶಿವಪ್ಪ ಹಡಪದ್ ಹಾಗೂ ಇತರರಿದ್ದರು.