ಹಳೆಯ ಸಾಹಿತ್ಯದ ಪ್ರಕಾರಗಳನ್ನು ಉಳಿಸುವುದರ ಜೊತೆಗೆ ಹೊಸ ರೀತಿಯ ಸಾಹಿತ್ಯ ಪ್ರಕಾರವನ್ನು ಅಳವಡಿಸಿಕೊಳ್ಳುವ ಮೂಲಕ ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು ಎಂದು ಬರಹಗಾರ ವಿಜಯ್ ಅಮೃತ್ ರಾಜ್ ಹೇಳಿದರು.
ಯುಗಾದಿ ಹಾಗೂ ರಂಜಾನ್ ಹಬ್ಬದ ನಿಮಿತ್ತ ಕವಿ ಸಮೂಹ ಕೊಪ್ಪಳ ಬಹುತ್ವ ಭಾರತ ಬಳಗ ಕೊಪ್ಪಳದ ಸಂಯುಕ್ತ ಆಶಯದಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಿಜಯ ಅಮೃತ್ ರಾಜ್ ಮಾತನಾಡಿ, “ಕವಿತೆಗಳಲ್ಲಿ ಹೊಸತನ ಬರಬೇಕಿದೆ. ಮತ್ತೊಮ್ಮೆ ಜನಪದ ಸಾಹಿತ್ಯ ಪರಂಪರೆಯನ್ನು ಉಳಿಸುವ ಕೆಲಸವನ್ನು ಮಾಡಬೇಕಿದೆ. ಕನ್ನಡದಲ್ಲಿ ವಿಟ್ ಪ್ರಕಾರ ಇದುವರೆಗೆ ಬಂದಿಲ್ಲ. ಕೌಬಾಯ್ ಪದ್ಯಗಳು ಬರೆಯುವ ಪ್ರಯತ್ನ ನಡೆಯಬೇಕಿದೆ. ಜೊತೆಗೆ ನಿರಂತರವಾಗಿ ಸಾಹಿತ್ಯ ವಿಚಾರಗಳು ಚರ್ಚೆ ಆಗಬೇಕಿದೆ” ಎಂದು ಕಿವಿಮಾತು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹತ್ತಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆಯನ್ನು ವಾಚನ ಮಾಡಿದರು. ಅರುಣ ನರೇಂದ್ರ ರಂಜಾನ್ ಹಾಗೂ ಯುಗಾದಿ ಕುರಿತ ಕವಿತೆಯನ್ನು ವಾಚನ ಮಾಡಿದರು. ಪುಷ್ಪಲತಾ ಏಳುಭಾವಿ: ʼನನ್ನ ಕೊಂದುಬಿಡುʼ ಹಾಗೂ ʼಅಂದು ಮತ್ತು ಇಂದುʼ, ಶ್ರೀನಿವಾಸ್ ಚಿತ್ರಗಾರ್: ʼಡುಬ್ಬ ಚಪ್ಪರಿಸುವವರುʼ ಹಾಗೂ ʼಕಟ್ಟ ಕಡೆಯ ಹಾದಿʼ, ಜಿಎಸ್ ಗೋನಾಳ್: ʼಶಾಂತಿ ಪ್ರೀತಿ ಸೌಹಾರ್ದತೆ ರಂಜಾನ್ ಮತ್ತು ಯುಗಾದಿʼ, ವಿಜಯ್ ಅಮೃತ್ ರಾಜ್: ʼಯುಗಾದಿ ಹಾಗೂ ರಂಜಾನ್ʼ, ಪೀ ಎಸ್ ಅಮರದೀಪ್: ʼಬೇವು ಬೆಲ್ಲʼ , ʼಖಾಲಿ ಬಿಳಿಹಾಳೆʼ, ಬಿಎಸ್ ವೀರಾಪುರ್: ʼಕೊಪ್ಪಳ ಉಳಿಸೋಣ ಬನ್ನಿʼ, ʼಯುಗಾದಿ ಹರುಷ ತರಲಿʼ, ಬೀರಪ್ಪ ಅಂಡಗಿ: ʼಕಿವಿʼ , ಅನಸೂಯ ಜಾಗೀರ್ದಾರ್: ʼಅಳಲಾರದ ಮಕ್ಕಳು ಹಾಗೂ ಯುಗಾದಿ ಚೈತ್ರಳ ಸ್ವಗತ ಕವಿತೆʼ, ಸಿರಾಜ್ ಬಿಸರಳ್ಳಿ: ʼದ್ವಿಪದಿಗಳುʼ , ʼನನಗೆ ನಿನ್ನ ದರ್ಶನ ಭಾಗ್ಯವಿಲ್ಲʼ ಕವಿತೆಗಳನ್ನು ವಾಚನ ಮಾಡಿದರು.
ಇದನ್ನೂ ಓದಿ: ಕೊಪ್ಪಳ | ಅಪರಾಧಿಗಳ ದಂಡಿಸುವಾಗ ಜಾತಿ, ಧರ್ಮ ಲೆಕ್ಕಿಸಲ್ಲ: ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ
ಕಾರ್ಯಕ್ರಮದಲ್ಲಿ ಕವಿ ಪಿಎಸ್ ಅಮರದೀಪ್, ಮೌಲಾ ಹುಸೈನ್ ತಳಕಲ್, ಮಂಜು ತೋಟಗಾರ, ನರೇಂದ್ರ ಪಾಟೀಲ್ ಸೇರಿದಂತೆ ಇತರರು ಉಪಸಿತರಿದ್ದರು.