ಕನ್ನಡ ವಿಶ್ವವಿದ್ಯಾಲಯ ತನ್ನ 33ನೇ ನುಡಿಹಬ್ಬದ ಪ್ರಯುಕ್ತ ಕಲೆ, ಸಾಹಿತ್ಯ, ಇತಿಹಾಸ, ವಿಜ್ಞಾನ ಮತ್ತು ಆರೋಗ್ಯ ಸೇರಿದಂತೆ ವಿವಿಧ ಬಗೆಯ 60 ಪುಸ್ತಕಗಳನ್ನು ಪ್ರಕಟಿಸಿರುವುದು ಉತ್ತಮವಾದ ಕಾರ್ಯ. ಪುಸ್ತಕಗಳನ್ನು ಪ್ರಕಟಿಸಿದರಷ್ಟೇ ಸಾಲದು ಅವುಗಳನ್ನು ಬೆಳಕಿಗೆ ತರುವ ಕೆಲಸವೂ ಆಗಬೇಕು ಎಂದು ವಿಜಯನಗರ ಶಾಸಕ ಎಚ್ ಆರ್ ಗವಿಯಪ್ಪ ಅಭಿಪ್ರಾಯಪಟ್ಟರು.
ಕನ್ನಡ ವಿವಿ ಮಂಟಪ ಸಭಾಂಗಣದಲ್ಲಿ 33ನೇ ನುಡಿಹಬ್ಬ ಪ್ರಯುಕ್ತ ಪ್ರಸಾರಾಂಗ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ, ಹಾಗೂ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
“ವಿಶ್ವವಿದ್ಯಾಲಯವು ಇದುವರೆಗೂ ಪ್ರಕಟಿಸಿರುವ ಪುಸ್ತಕಗಳನ್ನು ಡಿಜಿಟಲೈಜೇಶನ್ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ಕನ್ನಡದ ಜ್ಞಾನವನ್ನು ಅನಾವರಣಗೊಳಿಸಲು ಸಾಧ್ಯವಾಗುತ್ತದೆ. ವಿಶ್ವವಿದ್ಯಾಲಯಕ್ಕೆ ಬೇಕಾದ ಸಹಕಾರವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕೊಡಿಸುವೆ. ಜಿಲ್ಲೆಗೆ ಇಂದು ಆದಾಯದ ಮೂಲ ಪ್ರವಾಸೋದ್ಯಮವಾಗಿದೆ. ಆದ್ದರಿಂದ ವಿಶ್ವವಿದ್ಯಾಲಯದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಆರಂಭಿಸುವುದರ ಮೂಲಕ ದೇಶೀಯ ಆಹಾರ, ಕಲೆ, ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಬೇಕು” ಎಂದರು.

“ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಮೂಲಕ ಹಂಪಿಯ ಪ್ರವಾಸಿಗರಿಗೆ ರೆಸ್ಟೋರೆಂಟ್ಗಳನ್ನು ತೆರೆಯುವ ಕೆಲಸವಾಗುತ್ತಿದೆ. ಹಂಪಿಯ ಸ್ಮಾರಕಗಳು ಮತ್ತು ಪರಿಸರವನ್ನು ನೋಡಲು ಬರುವ ಪ್ರವಾಸಿಗರು ಕನ್ನಡ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಇಲ್ಲಿನ ಪುಸ್ತಕಗಳನ್ನು ನೋಡಬೇಕು, ಓದಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದರು.
ವಿವಿ ಕುಲಪತಿ ಡಾ. ಡಿ ವಿ ಪರಮಶಿವಮೂರ್ತಿ ಮಾತನಾಡಿ, “ಭಾರತದ ಬೇರಾವ ವಿಶ್ವವಿದ್ಯಾಲಯದಲ್ಲೂ ಇಲ್ಲದ ಸಂಶೋಧನಾ ಕಳಕಳಿ ಕನ್ನಡ ವಿಶ್ವವಿದ್ಯಾಲಯದಲ್ಲಿದೆ. ಇಲ್ಲಿನ ಪ್ರತಿಯೊಬ್ಬರು, ಗಿಡಮರಗಳು ಸಹ ಸಂಶೋಧನೆಯನ್ನೇ ಧ್ಯಾನಿಸುತ್ತವೆ. ಕನ್ನಡ ವಿಶ್ವವಿದ್ಯಾಲಯ ಬೇರೆ ಹಳೆಯ ವಿಶ್ವವಿದ್ಯಾಲಯಗಳಿಗೆ ಸರಿಸಾಟಿಯಾಗಿ 1650ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಇಲ್ಲಿನ ಪುಸ್ತಕಗಳ ಗುಣಮಟ್ಟ ಉತ್ಕೃಷ್ಟವಾದುದು. ವಿವಿಯ ಪ್ರಸಾರಾಂಗವು ಲಾಭವನ್ನು ನಗಣ್ಯವಾಗಿ ಪರಿಗಣಿಸಿ ಇಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದ ಅನೇಕ ವಿಷಯಗಳನ್ನು ತಳಮಟ್ಟದಿಂದ ಸಂಶೋಧನೆ ಮಾಡಿ ರೂಪಿಸಿದ ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಿದೆ. ಸರ್ಕಾರದ ಅನುದಾನದ ಕೊರತೆಯ ನಡುವೆಯೂ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ. ಉತ್ತಮವಾದ ಪುಸ್ತಕಗಳು, ಚಿಂತಕರ ಆಲೋಚನೆಗಳು ಪುಸ್ತಕದ ರೂಪದಲ್ಲಿ ಓದುಗರ ಕೈ ಸೇರಬೇಕು ಎಂದು ಅತ್ಯಂತ ಕಡಿಮೆ ಬೆಲೆಗೆ ಪ್ರಸಾರಂಗ ಪುಸ್ತಕಗಳನ್ನು ಪ್ರಕಟಿಸುತ್ತದೆ” ಎಂದು ಹೇಳಿದರು.

ವಿವಿ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡವರು ಮಾತನಾಡಿ, “ಸಂಶೋಧನೆ ಮತ್ತು ಪ್ರಕಟಣೆ ಎನ್ನುವುದು ವಿಶ್ವವಿದ್ಯಾಲಯದ ಜೀವಾಳ. ಇದುವರೆಗೂ 1650 ಪುಸ್ತಕಗಳನ್ನು ಪ್ರಕಟಿಸಿದೆ. ಈ ಬಾರಿ ಹೆಚ್ಚು ಪುಸ್ತಕಗಳು ಮಾರಾಟವಾಗಿವೆ. ನಾಡಿನ ಎಲ್ಲೆಡೆ ವಿಶ್ವವಿದ್ಯಾಲಯದ ಜ್ಞಾನವನ್ನು ತಲುಪಿಸುವ ಕೆಲಸ ನಡೆಯುತ್ತಿದೆ. ಪ್ರಸಾರಾಂಗವು ಸಾಮಾಜಿಕ, ರಾಜಕೀಯ, ಸಾಹಿತ್ಯ, ಚರಿತ್ರೆ, ವಿಜ್ಞಾನ ಹೀಗೆ ಎಲ್ಲ ಪ್ರಕಾರದ ಪುಸ್ತಕಗಳನ್ನು ಪ್ರಕಟಿಸಿಕೊಂಡು ಬಂದಿದೆ. ಪ್ರಸಾರಾಂಗದ ಹೊಸ ಕಟ್ಟಡ ನಿರ್ಮಾಣ ಶೇ.80 ರಷ್ಟು ಪೂರ್ಣಗೊಂಡಿದ್ದು, ಶೇ.20ರಷ್ಟು ಬಾಕಿ ಇದೆ. ಕೆಕೆಆರ್ಡಿಬಿ ಯಿಂದ ಅನುದಾನ ಬಿಡುಗಡೆಯಾದರೆ ಉಳಿದ ಕಾರ್ಯವನ್ನು ಪೂರ್ಣಗೊಳಿಸುತ್ತೇವೆ” ಎಂದರು.
ಇದನ್ನೂ ಓದಿ: ವಿಜಯನಗರ | ಕನ್ನಡ ವಿಶ್ವವಿದ್ಯಾಲಯ ದೇಶದಲ್ಲಿಯೇ ವಿಶಿಷ್ಟವಾದುದು: ಕುಲಪತಿ ಡಾ. ಡಿ ವಿ ಪರಮಶಿವಮೂರ್ತಿ
ಕಾರ್ಯಕ್ರಮದಲ್ಲಿ ಸಾಹಿತಿಗಳು, ಪುಸ್ತಕ ಪ್ರಕಟಿಸಿದ ಲೇಖಕರು, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು .