ನುರಿತ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಅತ್ಯಧಿಕ ಕನಿಷ್ಠ ವೇತನ ನೀಡುವ ದೇಶದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದ್ದು, ಎರಡು ವಾರಗಳಲ್ಲಿ ವೇತನ ಪರಿಷ್ಕರಣೆ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ.
82 ವಿಧದ ಅನುಸೂಚಿತ ಉದ್ಯೋಗಗಳಿಗೆ ಕನಿಷ್ಠ ವೇತನವನ್ನು ನಿಗದಿಪಡಿಸಲಾಗಿದೆ. ಕಾರ್ಮಿಕರು ಕೌಶಲ್ಯರಹಿತ, ಅರೆ-ಕೌಶಲ್ಯ, ನುರಿತ ಮತ್ತು ಹೆಚ್ಚು ಕೌಶಲ್ಯದ ವರ್ಗಗಳ ಅಡಿಯಲ್ಲಿ ಬರುತ್ತಾರೆ. ಅವರ ವರ್ಗಗಳಿಗೆ ಅನುಗುಣವಾಗಿ ಕನಿಷ್ಠ ವೇತನವನ್ನು ನಿಗದಿಪಡಿಸಲಾಗುತ್ತದೆ. ಕಾರ್ಮಿಕ ಇಲಾಖೆ ಹೊರಡಿಸಿದ 2022ರ ಅಧಿಸೂಚನೆಯ ಪ್ರಕಾರ, ಕನಿಷ್ಠ ವೇತನವು ತಿಂಗಳಿಗೆ ₹12,000 ಗಳಿಂದ ₹20,000ಗಳವರೆಗೆ ಬದಲಾಗುತ್ತದೆ.
ಕರ್ನಾಟಕದಲ್ಲಿ, ಸಂಘಟಿತ ಮತ್ತು ಅಸಂಘಟಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 1.7 ಕೋಟಿ ಮಂದಿ ಕಾರ್ಮಿಕರಿದ್ದು, ತಿಂಗಳಿಗೆ ಕನಿಷ್ಠ ವೇತನವನ್ನು ₹35,000ಕ್ಕೆ ಹೆಚ್ಚಿಸಬೇಕೆಂದು ಕಾರ್ಮಿಕ ಸಂಘಗಳು ಒತ್ತಾಯಿಸುತ್ತಿವೆ.
ವೇತನ ಪರಿಷ್ಕರಣೆಯ ಕರಡು ಅಧಿಸೂಚನೆಯನ್ನು ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಯ ಮುಂದೆ ಇಡಲಾಗುವುದು. ಇದು ವಿವಿಧ ವರ್ಗಗಳಿಗೆ ವೇತನವನ್ನು ಶಿಫಾರಸು ಮಾಡುತ್ತದೆ. ರಾಜ್ಯ ಸರ್ಕಾರವು ಈ ಶಿಫಾರಸುಗಳನ್ನು ಸ್ವೀಕರಿಸಬಹುದು ಅಥವಾ ಬದಲಿಸಬಹುದೆಂದು ಅಧಿಕೃತ ಮೂಲಗಳಿಂದ ತಿಳಿದುಬಂದಿರುವುದಾಗಿ ವರದಿಯಾಗಿದೆ.
ಕನಿಷ್ಠ ವೇತನವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಈ ಪ್ರಸ್ತಾಪವನ್ನು ಅನುಮೋದನೆಗಾಗಿ ಮಂಡಳಿಯ ಮುಂದೆ ಇಡಬೇಕಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
“ಉದ್ಯೋಗದಾತರು ವೇತನ ಕಡಿಮೆ ಇರಬೇಕೆಂದು ಬಯಸಿದ್ದರು. ನಾವು ವೇತನವನ್ನು ಅಂತಿಮಗೊಳಿಸಿದಾಗ, ಉದ್ಯೋಗದಾತರು ಮತ್ತು ಕಾರ್ಮಿಕರ ಬೇಡಿಕೆಗಳನ್ನು ಪರಿಗಣಿಸುತ್ತೇವೆ. ನಾವು ಅಸ್ತಿತ್ವದಲ್ಲಿರುವ ವೇತನವನ್ನು ಪರಿಷ್ಕರಿಸಲಿದ್ದೇವೆ. ಪರಿಷ್ಕರಣೆಯೊಂದಿಗೆ, ಕರ್ನಾಟಕದ ಕನಿಷ್ಠ ವೇತನವು ಭಾರತದಲ್ಲಿಯೇ ಅತ್ಯಧಿಕವಾಗಲಿದೆ” ಎಂದು ತಿಳಿಸಿದ್ದಾರೆ.
ಪ್ರಸ್ತುತ, ದೆಹಲಿಯಲ್ಲಿ ಕನಿಷ್ಠ ವೇತನವು ತಿಂಗಳಿಗೆ 17,000 ರೂ.ಗಳಿಂದ 23,000 ರೂ.ಗಳವರೆಗೆ ಅತ್ಯಧಿಕವಾಗಿದೆ.
ಮಂಡಳಿಯ ಸದಸ್ಯರೂ ಆಗಿರುವ ಗಾರ್ಮೆಂಟ್ಸ್ ಮತ್ತು ಜವಳಿ ಕಾರ್ಮಿಕರ ಒಕ್ಕೂಟದ ಜಂಟಿ ಕಾರ್ಯದರ್ಶಿ ಜಯರಾಮ್ ಕೆ ಆರ್ ಮಾತನಾಡಿ, “ಗಾರ್ಮೆಂಟ್ಸ್ ಅಲ್ಲದ ವಲಯದ ಕಾರ್ಮಿಕರಿಗೆ ಸರ್ಕಾರವು ದಿನಕ್ಕೆ ಸುಮಾರು ₹651ನ್ನು ನಿಗದಿಪಡಿಸಿದೆ, ಆದರೆ ಗಾರ್ಮೆಂಟ್ಸ್ ವಲಯದವರಿಗೆ ದಿನಕ್ಕೆ ₹470 ಸಿಗುತ್ತಿದೆ. ಇದು ಕಾರ್ಮಿಕರ ನಡುವಿನ ತಾರತಮ್ಯ” ಎಂದು ತಿಳಿಸಿದ್ದಾರೆ.
“ಸರ್ಕಾರವು ವೇತನವನ್ನು ಪರಿಷ್ಕರಿಸಿದಾಗಲೆಲ್ಲಾ, ಗಾರ್ಮೆಂಟ್ಸ್ ಕಾರ್ಮಿಕರನ್ನು ಇತರ ಕ್ಷೇತ್ರಗಳಲ್ಲಿನ ಕಾರ್ಮಿಕರಿಗೆ ಸಮಾನವಾಗಿ ಪರಿಗಣಿಸಬೇಕು” ಎಂದು ಹೇಳಿದರು.
“ಕರ್ನಾಟಕದಲ್ಲಿ ಸುಮಾರು 4.5 ಲಕ್ಷ ಮಂದಿ ಗಾರ್ಮೆಂಟ್ಸ್ ಕಾರ್ಮಿಕರಿದ್ದಾರೆ. ಅವರಲ್ಲಿ ಹೆಚ್ಚಿನವರು ಬೆಂಗಳೂರಿನಲ್ಲಿದ್ದಾರೆ. ಜೀವನ ವೆಚ್ಚ ಹೆಚ್ಚಾಗಿರುವ ಬೆಂಗಳೂರಿನಂತಹ ನಗರದಲ್ಲಿ, ಇಷ್ಟು ಕಡಿಮೆ ವೇತನದಿಂದ ಜೀವನವನ್ನು ಹೇಗೆ ನಿಭಾಯಿಸಬಹುದು” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಿಹಾರದ ಮಹಾ ಬೋಧಿ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡುವಂತೆ ಒತ್ತಾಯ
“ಕನಿಷ್ಠ ವೇತನವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲವೆಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ಪ್ರಸ್ತಾಪವನ್ನು ಅನುಮೋದನೆಗಾಗಿ ಮಂಡಳಿಯ ಮುಂದೆ ಇಡಬೇಕಾಗಿದೆ. ನಾವು ಕೆಲವು ಮಾನದಂಡಗಳನ್ನು ಅನುಸರಿಸಬೇಕು. ಬಳಿಕ ವೇತನವನ್ನು ನಿಗದಿಪಡಿಸಬೇಕು. ಮುಂದಿನ 15 ದಿನಗಳಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುವ ಭರವಸೆ ಹೊಂದಿದ್ದೇವೆ” ಎಂದು ಅವರು ಹೇಳಿದರು.