“ಮನುಷ್ಯ ಪರಿಸರ, ಕೃಷಿ, ಶಿಕ್ಷಣ, ಆರೋಗ್ಯ ಮತ್ತು ರಾಜಕೀಯ ಈ ಐದು ಕ್ಷೇತ್ರಗಳನ್ನು ಮರೆಯುವಂತಿಲ್ಲ. ಐದು ಕ್ಷೇತ್ರಗಳಲ್ಲಿ ಸುಧಾರಣೆ ಆಗದಿದ್ದರೆ ನಮ್ಮ ಬದುಕು ದುರಂತವಾಗುತ್ತದೆ. ಮತದಾನ ಕಡ್ಡಾಯವಾಗಬೇಕು. ಇಲ್ಲವಾದರೆ ಸೌಲಭ್ಯಗಳು ನಿಲ್ಲಿಸಬೇಕು” ಎಂದು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯ ಲತಾ ಮಂಟಪದಲ್ಲಿ ನಡೆಯುತ್ತಿರುವ ಎರಡನೆಯ ದಿನದ ‘ಕರ್ನಾಟಕದ ಪರಿವರ್ತನೆಯ ಚಿಂತನೆ ಮತ್ತು ಕ್ರಿಯಾಯೋಚನೆ’ ಕುರಿತು ಸಮಾನ ಮನಸ್ಕರ ಸಂವಾದ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.
“ಚುನಾವಣೆಯಲ್ಲಿ ಆಮಿಷಕ್ಕೆ ಬಲಿಯಾಗದ ರೀತಿ ಮತದಾರರಲ್ಲಿ ಜಾಗೃತಿ ಮೂಡಿಸಬೇಕು. ಗುಪ್ತಮತದಾನ ಗುಪ್ತವಾಗಿಯೇ ನಡೆಯಬೇಕು. ಯಾವ್ಯಾವ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತಗಳು ಬಂದಿವೆ ಎನ್ನುವುದನ್ನು ಬಹಿರಂಗ ಪಡಿಸಬಾರದು. ಸರ್ವೋದಯದಲ್ಲಿರುವವರು ಯಾರೂ ರಾಜಕೀಯಕ್ಕೆ ಹೋಗಬಾರದು. ತಾತ್ವಿಕರನ್ನು ಬೆಂಬಲಿಸುವ ಕಾರ್ಯ ಮಾಡಬೇಕು. ಪ್ರಾಮಾಣಿಕರಾಗಿ, ನಮ್ಮನ್ನು ಆತ್ಮಶುದ್ಧಿಯಾಗಿಟ್ಟುಕೊಳ್ಳಬೇಕು. ಎಲ್ಲ ಸುಧಾರಣೆಗೆ ಶಕ್ತಿ ತುಂಬುವಂಥದ್ದು ರಾಜಕೀಯ. ಧರ್ಮ ಮತ್ತು ರಾಜಕೀಯ ಕ್ಷೇತ್ರಗಳು ಸುಧಾರಣೆಯಾದರೆ ಎಲ್ಲಾ ಕ್ಷೇತ್ರಗಳು ಸುಧಾರಣೆಯಾಗುವುದರಲ್ಲಿ ಅನುಮಾನವೇ ಇಲ್ಲ” ಎಂದು ಅಭಿಪ್ರಾಯಪಟ್ಟರು.

ಕುಂಬಾರ ಗುರುಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಮಾತನಾಡಿ “ಸರ್ವೊದಯದ ಮೂಲಕ ನಮ್ಮ ಭವಿಷ್ಯವನ್ನು ರೂಪಿಸುವ ಕೆಲಸ ಆಗಬೇಕು. ಇದಕ್ಕೆ ನಾವೆಲ್ಲರೂ ಶ್ರಮವಹಿಸಿ ತಪ್ಪುಗಳು ಆಗುವುದನ್ನು ವಿರೋಧಿಸೋಣ. ಪರಿಸರಕ್ಕೆ ಬೆಂಕಿ ಇಡುವ ಕೆಲಸ ಮಾಡಬಾರದು” ಎಂದು ಕರೆ ನೀಡಿದರು.
ಪಾಂಡೋಮಟ್ಟಿಯ ವಿರಕ್ತ ಮಠದ ಗುರುಬಸವ ಸ್ವಾಮಿಗಳು ಮಾತನಾಡಿ “ನಮ್ಮಲ್ಲಿ ದೀಪ ಬೆಳಗಿಸುವ ಕೆಲಸಕ್ಕಿಂತ ಬೆಂಕಿ ಹಚ್ಚುವ ಕೆಲಸ ಹೆಚ್ಚಾಗಿದೆ. ನಮ್ಮೊಳಗೆ ಅರಿವಿನ ಬೆಳಕು ಕಾಣಬೇಕು. ಮಧ್ಯಪಾನ ಕೆಟ್ಟದ್ದೆಂದು ಎಲ್ಲರಿಗೂ ಗೊತ್ತಿದೆ. ಮದ್ಯಪಾನ ನಿಷೇಧ ಮಾಡಬೇಕು. ಕೋಟ್ಯಾಂತರ ಜನರ ಬದುಕು ಮದ್ಯಪಾನ ಚಟದಲ್ಲಿದೆ. ಅವರ ಬದುಕು ದುರಂತದಲ್ಲಿ ಅಂತ್ಯವಾಗಬಾರದು. ನಮ್ಮಲ್ಲಿ ಕಲ್ಯಾಣರಾಜ್ಯ ನಿರ್ಮಾಣವಾಗಬೇಕು. ಸರ್ವೋದಯದ ಚಿಂತನೆಗಳು ಎಲ್ಲರಲ್ಲೂ ಬರಬೇಕಾದರೆ ನಾವುಗಳು ಸರಿಯಾಗಬೇಕು. ಸತತ ಪ್ರಯತ್ನದಿಂದ ಜನರನ್ನು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗಲು ಸಾಧ್ಯ. ನಡೆ ನುಡಿ ಒಂದಾಗಬೇಕು. ನಡೆ ನುಡಿ ಒಂದಾಗುವ ಕೆಲಸ ಮಾಡಬೇಕು” ಎಂದರು.

`ರಾಜಕಾರಣದಲ್ಲಿ ಪರಿವರ್ತನೆ’ ಕುರಿತು ಮಾಜಿ ಶಾಸಕ ವೈ ಎಸ್ ವಿ ದತ್ತ ಮಾತನಾಡಿ; ಮುಖ್ಯವಾಗಿ ರಾಜಕಾರಣದಲ್ಲಿ ಪರಿವರ್ತನೆ ಆಗುವುದಕ್ಕಿಂತ ಚುನಾವಣೆ ಸುಧಾರಣೆ ಆಗಬೇಕು. ವ್ಯವಸ್ಥೆಯನ್ನು ಆರೋಗ್ಯಕರವಾಗಿಟ್ಟುಕೊಳ್ಳುವ ಜವಾಬ್ದಾರಿ ಮತದಾರನ ಕೈಯಲ್ಲಿದೆ. ಮತದಾರ ಸರಿಯಾದರೆ ನೇತಾರ ಸರಿಯಾಗುವನು. ಇಷ್ಟೆಲ್ಲಾ ಕೆಡುವುದಕ್ಕೆ ಕಾರಣ ಕೆಟ್ಟ ರಾಜಕಾರಣ. ಅದು ಧನಾತ್ಮಕವಾಗಿ ಪರಿವರ್ತನೆ ಆಗಬೇಕು. ಅವ್ಯವಸ್ಥೆಯಿಂದ ವ್ಯವಸ್ಥೆಗೆ ತರುವುದೇ ಪರಿವರ್ತನೆ. ಆದರೆ ಇದು ರಾಜಕಾರಣದಲ್ಲಿ ಆಗುತ್ತಿಲ್ಲ. ಸುವ್ಯವಸ್ಥೆಯಿಂದ ಕುವ್ಯವಸ್ಥೆಯ ಕಡೆಗೆ ಹೋಗುತ್ತಿರುವುದು ದೊಡ್ಡ ದುರಂತ. ನಾಳೆ ಏನಾಗುತ್ತಿದೆ ಎಂದು ತಿಳಿದುಕೊಳ್ಳಬೇಕಾದರೆ ಇಂದು ಏನಾಗುತ್ತಿದೆ ಎಂದು ಅರಿಯುವುದು ಸೂಕ್ತ. ಸರ್ವೋದಯದಲ್ಲಿ ನಿರ್ಣಯಗಳು ಆಗುವ ಸಂದರ್ಭದಲ್ಲಿ ಚರ್ಚೆಯಾಗುವ ಅಗತ್ಯ ಇದೆ. ಜಗತ್ತಿನ ಕುಬೇರರಲ್ಲಿ ಭಾರತದ ಕುಬೇರರು 271 ಜನ ಇದ್ದಾರೆ. ಇದರಲ್ಲಿ ಒಂದು ವರ್ಷದಿಂದೀಚಿಗೆ 94 ಜನ ಕುಬೇರರು ಆ ಪಟ್ಟಿಗೆ ಹೊಸದಾಗಿ ಸೇರಿದ್ದಾರೆ. ಅಂದರೆ ಭಾರತದಲ್ಲಿ ಎಷ್ಟರಮಟ್ಟಿಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗಿದೆ. ಭಾರತದಲ್ಲಿ ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ. ಅವರೆಲ್ಲರೂ ರಾಜಕಾರಣಿಗಳೇ. ಬಡವರು ಬಡವರಾಗಿಯೇ ಇದ್ದಾರೆ ಅವರೆಲ್ಲರೂ ಕೃಷಿಕರು, ಶ್ರಮಜೀವಿಗಳು. ಈ ತಾರತಮ್ಯವನ್ನು ಹೋಗಲಾಡಿಸಬೇಕಾದರೆ ಮತದಾರ ಜಾಗೃತನಾಗಬೇಕು. ಆಗ ಮಾತ್ರ ಪರಿವರ್ತನೆ ತರಲು ಸಾಧ್ಯ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಅಡಿಕೆ, ತೆಂಗು, ಹನಿ ನೀರಾವರಿ ಉಪಕರಣಗಳು ಬೆಂಕಿಗಾಹುತಿ, ರೈತ ಕಂಗಾಲು.
“ಪರಿಸರ ಪರಿವರ್ತನೆ ಮತ್ತು ಜನಜಾಗೃತಿಯಾಗಬೇಕು. ಆಗ ಆರೋಗ್ಯಯುತವಾದ ವಾತಾವರಣ ನಿರ್ಮಾಣ ಸಾಧ್ಯ. ಆದರೆ ನಮ್ಮ ದೇಶ ಆರ್ಥಿಕತೆಯಲ್ಲಿ ಶ್ರೀಮಂತ ನಂಬರ್ ಒನ್ ದೇಶ. ಆದರೂ ಎಲ್ಲ ಕ್ಷೇತ್ರಗಳು ಬಡತನದಲ್ಲಿ ಬೇಯುತ್ತಿವೆ. ಸಂಪತ್ತಿನ ಹಂಚಿಕೆ ಶ್ರೀಮಂತರ ಕೈವಶ ಆಗಿದೆ. ದೇಶವನ್ನು ಶ್ರೀಮಂತರ ಕೈಯಲ್ಲಿ ಕೊಡುವುದು ಸ್ವಾತಂತ್ರ್ಯವಲ್ಲ. ಹಾಗೇನಾದರೂ ಮಾಡಿದರೆ `ಕುಂಬಕರ್ಣದ ರಾಜ್ಯವಾಗುವುದು’ ಎಂದು ಗಾಂಧೀಜಿಯವರು ಹೇಳಿದ್ದರು. ಅದು ನಮ್ಮ ದೇಶದಲ್ಲಿ ಆಗುತ್ತಿದೆ. ಬಡವರೆಲ್ಲಾ ಒಂದಾದಾಗ ಮಾತ್ರ ಪರಿವರ್ತನೆಯ ಗಾಳಿ ಬೀಸಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಸಂವಾದದಲ್ಲಿ ಮುಖ್ಯಮಂತ್ರಿ ಚಂದ್ರು, ಬಿ ಎಲ್ ಶಂಕರ್, ಎ ಟಿ ರಾಮಸ್ವಾಮಿ, ಪ್ರಸನ್ನ ಹೆಗ್ಗೋಡು, ಎಂ ಪಿ ನಾಡಗೌಡ, ರವಿಕೃಷ್ಣಾರೆಡ್ಡಿ, ಶಿವನಕೆರೆ ಬಸವಲಿಂಗಪ್ಪ, ವಿ ಆರ್ ಸುದರ್ಶನ್, ಡಾ. ಗೋಪಾಲ ದಾಬಡೆ, ಚಂದ್ರಶೇಖರ ನಾರಣಾಪುರ , ಈಚಘಟ್ಟದ ಸಿದ್ಧವೀರಪ್ಪ, ಮಹಿಮಾ ಜೆ ಪಟೇಲ್, ಅಬ್ದುಲ್ ರೆಹಮಾನ ಪಾಷಾ, ಭೈರೇಗೌಡ, ಡಾ. ರಾಘವನ್, ತೇಜಸ್ವಿ ಪಟೇಲ್ ಶುದ್ಧ ರಾಜಕಾರಣದಲ್ಲಿ ಆಸಕ್ತಿ ಇರುವ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.