ಚೈತ್ರ ನವರಾತ್ರಿ ಆಚರಿಸಲು ಮತ್ತು ದುರ್ಗಾ ದೇವಿಯನ್ನು ಪೂಜಿಸಲು ಎಲ್ಲಾ ತಯಾರಿ ನಡೆಸಿದ ಬಳಿಕ ಮುಟ್ಟಾದ ಕಾರಣ ನವರಾತ್ರಿ ಆಚರಿಸಲು ಸಾಧ್ಯವಾಗಿಲ್ಲವೆಂದು ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಜಾನ್ಸಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು 36 ವರ್ಷದ ಪ್ರಿಯಾಂಷಾ ಸೋನಿ ಎಂದು ಗುರುತಿಸಲಾಗಿದೆ. ಹೂವುಗಳು, ಹಣ್ಣುಗಳು, ಸಿಹಿತಿಂಡಿಗಳು, ದೀಪಗಳು ಮತ್ತು ಧಾನ್ಯಗಳನ್ನೆಲ್ಲವನ್ನೂ ತನ್ನ ಪತಿ ಮುಖೇಶ್ ಸೋನಿ ಅವರಿಗೆ ತಿಳಿಸಿ ತರಿಸಿದ್ದರು. ಆದರೆ ನವರಾತ್ರಿಯ ಮೊದಲ ದಿನವಾದ ಮಾರ್ಚ್ 30ರಂದು ಮುಟ್ಟಾದ ಕಾರಣ ನವರಾತ್ರಿ ಆಚರಿಸಲು, ಪ್ರಾರ್ಥಿಸಲು ಸಾಧ್ಯವಾಗಿಲ್ಲ.
ಇದನ್ನು ಓದಿದ್ದೀರಾ? ಶಿಕ್ಷಕರ ಹತ್ಯೆ ಪ್ರಕರಣ: ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್ ಅನ್ಸಾರಿಗೆ 10 ವರ್ಷ ಜೈಲು
ಮುಟ್ಟಿನ ಸಮಯದಲ್ಲಿ ಮಹಿಳೆಯರು ಪ್ರಾರ್ಥನೆ ಮಾಡಬಾರದು, ಇದು ಅಶುದ್ಧ ಎಂಬ ಮೌಢ್ಯ ಕಲ್ಪನೆ ಭಾರತದಲ್ಲಿದೆ. ನಗರ ಪ್ರದೇಶದಲ್ಲಿ ಈ ಮೌಢ್ಯತೆ ಕೊಂಚ ಬದಲಾವಣೆಯಾಗಿದ್ದರೂ ಗ್ರಾಮಗಳಲ್ಲಿ ಇನ್ನೂ ಕೂಡಾ ಈ ಮೂಢನಂಬಿಕೆಯಿದೆ. ಮುಟ್ಟಾದ ಮಹಿಳೆಯನ್ನು ತುಚ್ಛವಾಗಿ ಕಾಣಲಾಗುತ್ತದೆ.
“ಪ್ರಿಯಾಂಷಾ ನವರಾತ್ರಿಗಾಗಿ ಒಂದು ವರ್ಷದಿಂದ ಕಾಯುತ್ತಿದ್ದರು. ಆದರೆ ಮುಟ್ಟಾದ ಕಾರಣ ಉಪವಾಸ ಮಾಡಲು ಅಥವಾ ದೇವಿಯನ್ನು ಪೂಜಿಸಲು ಸಾಧ್ಯವಾಗಲಿಲ್ಲ. ಎಲ್ಲವೂ ಹೇಗೆ ನಡೆಯುತ್ತದೆ, ಯಾರು ಪೂಜೆ ಮಾಡುತ್ತಾರೆ ಎಂದು ಒತ್ತಡಕ್ಕೆ ಒಳಗಾಗಿದ್ದಳು. ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ. ಮುಟ್ಟು ನೈಸರ್ಗಿಕ ಪ್ರಕ್ರಿಯೆ ಮತ್ತು ಮಾಸಿಕವಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಸಂಭವಿಸುತ್ತದೆ ಎಂದು ವಿವರಿಸಿದೆ. ಆದರೆ ಆಕೆ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಅವಳ ಪರವಾಗಿ ನಾನು ಆಚರಣೆಗಳನ್ನು ಮಾಡಲು ಮುಂದಾದೆ, ಆದರೆ ಅದರಿಂದಲೂ ದುಃಖಿತಳಾದಳು” ಎಂದು ಪತಿ ಮುಖೇಶ್ ಸೋನಿ ಹೇಳಿದ್ದಾರೆ.
ಮುಖೇಶ್ ಸೋನಿ ಕೆಲಸಕ್ಕೆ ಹೋದ ಬಳಿಕ ಪ್ರಿಯಾಂಷಾ ಕರೆ ಮಾಡಿ ಅತ್ತು ಮನೆಗೆ ಬರುವಂತೆ ಒತ್ತಾಯಿಸಿದ್ದಾಳೆ. ಮುಖೇಶ್ ಮನೆಗೆ ಹೋಗುವಷ್ಟರಲ್ಲಿ ಸೋನಿ ವಿಷ ಸೇವಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. “ನಾನು ತಪ್ಪು ಮಾಡಿದೆ” ಎಂದು ಪ್ರಿಯಾಂಷಾ ಹೇಳಿರುವುದಾಗಿ ಮುಖೇಶ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕನಾಯಕನಹಳ್ಳಿ | ಬಲ್ಲಪ್ಪನಹಟ್ಟಿಗೆ ಮಕ್ಕಳ ಹಕ್ಕುಗಳ ಆಯೋಗ ಭೇಟಿ
ಪ್ರಿಯಾಂಷಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಹೆತ್ತವರನ್ನು ಭೇಟಿ ಮಾಡಲು ಕರೆದೊಯ್ಯಲಾಗಿದೆ. “ತವರು ಮನೆಯಲ್ಲಿದ್ದರೆ ಕೊಂಚ ಮನಸ್ಸು ಸಮಾಧಾನವಾಗಬಹುದು ಎಂದು ಭಾವಿಸಿದೆ” ಎಂದು ಮುಖೇಶ್ ಹೇಳಿದ್ದಾರೆ. ಆದರೆ ಪ್ರಿಯಾಂಷಾ ಸ್ಥಿತಿ ಹದಗೆಟ್ಟ ಕಾರಣ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.
“ಮಧ್ಯಾಹ್ನ ಸುಮಾರು 2:30 ರ ಸುಮಾರಿಗೆ ಅವಳು ವಾಂತಿ ಮಾಡಲು ಆರಂಭಿಸಿದರು. ಬೆನ್ನು ನೋವು ಎಂದಳು. ಅದು ಮುಟ್ಟಿನ ಕಾರಣದಿಂದಾಗಿ ಎಂದು ನಾನು ಭಾವಿಸಿದೆ. ನಾನು ಅವಳನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದೆ. ಮರುದಿನ, ಮಧ್ಯಾಹ್ನ 1:30ರ ಸುಮಾರಿಗೆ ನನಗೆ ಏನಾದರೂ ತಿನ್ನುವಂತೆ ಹೇಳಿದಳು. ಆಸ್ಪತ್ರೆಯಲ್ಲಿ ಅವಳನ್ನು ಒಂಟಿಯಾಗಿ ಬಿಡುವುದು ಬೇಡವೆಂದು ನನಗೆ ಹಸಿವಿಲ್ಲ ಎಂದೆ. ಆಗ ಜ್ಯೂಸ್ ತರುವಂತೆ ನನಗೆ ತಿಳಿಸಿದಳು. ನಾವು ವಾಪಸ್ ಬರುವಷ್ಟರಲ್ಲಿ ಆಕೆಗೆ ಆಕ್ಸಿಜನ್ ಇಡಲಾಗಿತ್ತು. 15-20 ನಿಮಿಷಗಳಲ್ಲಿ ಮೃತಪಟ್ಟಿದ್ದಾಳೆ” ಎಂದು ಪತಿ ತಿಳಿಸಿದ್ದಾರೆ.
ಮುಟ್ಟಾದ ಮಹಿಳೆಯರನ್ನು ಕೀಳಾಗಿ ಕಾಣುವ, ಎಲ್ಲಾ ಧಾರ್ಮಿಕ ಆಚರಣೆಗಳಿಂದ ದೂರವಿರಿಸುವ ಮೌಢ್ಯ ಪದ್ಧತಿ ಭಾರತದಲ್ಲಿದೆ. ಈ ಮೂಢನಂಬಿಕೆ ಪಾಲಿಸದಿದ್ದರೆ ನಮಗೆ ಕೆಟ್ಟದಾಗುತ್ತದೆ, ನಮ್ಮ ಕುಟುಂಬಕ್ಕೆ ಶಾಪ ತಟ್ಟುತ್ತದೆ ಎಂಬ ಮೌಢ್ಯ ವಿದ್ಯಾವಂತ ಮಹಿಳೆಯರಲ್ಲೂ ಇದೆ. ವಾರ್ಷಿಕವಾಗಿ ನಡೆಯುವ ಅದೆಷ್ಟೋ ಕಾರ್ಯಕ್ರಮಗಳಲ್ಲಿ ಸಂತೋಷದಿಂದ ಭಾಗಿಯಾಗುವ ಅವಕಾಶವನ್ನು ಮುಟ್ಟಿನ ಕಾರಣ ನೀಡಿ ಈ ಪುರುಷ ಪ್ರಧಾನ ಸಮಾಜ ಕಿತ್ತುಕೊಳ್ಳುತ್ತಿದೆ. ಇದು ಹಲವು ಮಹಿಳೆಯರಿಗೆ ಮಾನಸಿಕವಾಗಿ ಒತ್ತಡ ನೀಡಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.
