ಬೆಸ್ಕಾಂ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಜೆಎಂಎಫ್ಸಿ
ನ್ಯಾಯಾಲಯದ ತೀರ್ಪು ಬೆಸ್ಕಾಂ ನೌಕರರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ನಿರ್ಲಕ್ಷ್ಯ ತೋರಿದ ಎಇಇ, ಮೆಕ್ಯಾನಿಕ್ ಹಾಗೂ ಮತ್ತೊಬ್ಬ ಸಿಬ್ಬಂದಿ ಸೇರಿ ಮೂರು ಜನರಿಗೆ ಎರಡು ವರ್ಷ ಜೈಲು ಶಿಕ್ಷೆ , ದಂಡ ವಿಧಿಸಿ ಆದೇಶಿಸಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ನಗರದ ಭೋವಿ ಕಾಲನಿಯ 14 ವರ್ಷದ ಪುತ್ರ ಕಿರಣ್ ಪಂಪ್ಹೌಸ್ ಬಳಿ 2015 ಜೂನ್ ಒಂದರಂದು ಆಟವಾಡುತ್ತಿದ್ದಾಗ ಸಮೀಪದ ವಿದ್ಯುತ್ ಕಂಬದಲ್ಲಿದ್ದ ಹಳೆಯ ಸ್ವಿಚ್ ಬೋರ್ಡ್ನ ವೈಯರ್ ತಾಗಿ ವಿದ್ಯುತ್ ಆಘಾತದಿಂದ ಬಾಲಕ ಮೃತಪಟ್ಟಿದ್ದ.
ಮೊಳಕಾಲ್ಮೂರು ನಗರ ಪೊಲೀಸ್ ಠಾಣೆಯಲ್ಲಿ ಬೆಸ್ಕಾಂ ನೌಕರರ ನಿರ್ಲಕ್ಷ್ಯ ವಿರುದ್ಧ ದೂರು ದಾಖಲಿಸಿದ್ದರು. ಎಇಇ ಸೇರಿದಂತೆ ಮೂರು ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಪೊಲೀಸ್ ಉಪ ನಿರೀಕ್ಷಕ ಲೋಕೇಶ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ವಿಚಾರಣೆಯಲ್ಲಿ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯ ಕಂಡು ಬಂದಿದ್ದು, ನಿರ್ಲಕ್ಷ್ಯ ತೋರಿದ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ವಿಚಾರಣೆ ನಡೆಸಿದ ಮೊಳಕಾಲ್ಮೂರು ಪ್ರಧಾನ ಸಿ.ಜೆ. ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಿಯಾಂಕ ಕೆ.ಟಿ. ಅವರು ಆರೋಪಿಗಳಾದ ಬೆಸ್ಕಾಂ ಎಇಇ, ಮೆಕ್ಯಾನಿಕ್ ಮತ್ತೊಬ್ಬರಿಗೆ 2 ವರ್ಷ ಸಾದಾ ಜೈಲು ಶಿಕ್ಷೆ ಮತ್ತು 1 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಮೊಹಮ್ಮದ್ ಶಂಶಿರ್ ಅಲಿ ವಕಾಲತ್ತು ವಹಿಸಿ, ವಾದ ಮಂಡಿಸಿದ್ದರು.