ಕೊಡಗು ಜಿಲ್ಲೆ, ಮಡಿಕೇರಿಯಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಶಾಸಕದ್ವಯರು ಶೀಘ್ರವೇ ನಿಜಾಂಶ ಹೊರಬರಲಿದೆ ಎಂದರು.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ವಿನಯ್ ಸಾವು ನೋವುಂಟು ಮಾಡಿದ್ದು, ಈ ಬಗ್ಗೆ ಸಂತಾಪ ವ್ಯಕ್ತಪಡಿಸುತ್ತೇವೆ. ವಿನಯ್ ಆತ್ಮಹತ್ಯೆ ಮಾಡಿಕೊಳ್ಳಲು ಬಿಜೆಪಿ ಪಕ್ಷದವರು ನಿರ್ಮಾಣ ಮಾಡಿದ ವಾತಾವರಣವೇ ಕಾರಣ. ಆತನ ಮೇಲೆ ಮೊಕದ್ದಮೆ ದಾಖಲಾದ ಸಂದರ್ಭದಲ್ಲಿ ಪಕ್ಷದವರು ಯಾವುದೇ ಬೆಂಬಲ ನೀಡಿಲ್ಲ. ಇದೀಗ ಬೆಂಬಲ ನೀಡುತ್ತಿದ್ದಾರೆ. ಮೃತನ ಅಂತ್ಯಕ್ರಿಯೆಯಲ್ಲೂ ಭಾಗವಹಿಸದೆ ಕೀಳು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯವರ ಇಂತಹ ನಡೆಯನ್ನು ಧಿಕ್ಕರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಲಯದ ಸೂಚನೆ ಮೇರೆಗೆ ದೂರು ದಾಖಲಾಗಿದೆ. ಅದಕ್ಕೆ ತಡೆಯಾಜ್ಞೆಯೂ ಸಿಕ್ಕಿದೆ. ಅರೋಪಿಗಳು ಜಾಮೀನು ಕೂಡ ಪಡೆದುಕೊಂಡಿದ್ದಾರೆ. ತಡೆಯಾಜ್ಞೆ ಸಿಕ್ಕಿದ ಬಳಿಕ ವಿನಯ್ ಪೊಲೀಸ್ ಠಾಣೆಗೆ ಹೋಗಬೇಕಿದ್ದರೂ ಹಾಜರಾಗಲಿಲ್ಲ. ಅದೂ ಅಲ್ಲದೆ ತಾನು ಪೊಲೀಸ್ ಸಿಬ್ಬಂದಿಗೆ ಹೇಳಿ ಕರೆ, ಬೆದರಿಕೆ ಹಾಕಿಸಿದ್ದಾಗಿ ಮಾಜಿ ಶಾಸಕರು ಆರೋಪ ಮಾಡಿದ್ದಾರೆ. ಅಗತ್ಯವಿದ್ದಲ್ಲಿ ದಾಖಲೆಗಳನ್ನು ಪರಿಶೀಲಿಸಲಿ ಎಂದರು.
ಪ್ರಕರಣ ದಾಖಲಾಗಿರುವುದು ಫೆಬ್ರವರಿ ತಿಂಗಳಲ್ಲಿ. ಇದೀಗ ಏಪ್ರಿಲ್ ಬಂದಿದೆ, ಇವಾಗ ಇಂತಹದೊಂದು ಘಟನೆ ಸಂಭವಿಸಿದೆ. ಬಿಜೆಪಿಯವರು ಸಾಮಾಜಿಕ ಜಾಲತಾಣವನ್ನು ಹೇಗೆ ನಿರ್ವಹಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇದೀಗ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮರಣ ಪತ್ರ ಎಲ್ಲಿಂದ ಹೇಗೆ ರವಾನೆಯಾಗಿದೆ? ವಿನಯ್ನ ಮೊಬೈಲ್ ಎಲ್ಲಿತ್ತು ಎಂಬ ಬಗ್ಗೆ ತನಿಖೆ ಆಗಬೇಕಿದೆ. ಅಷ್ಟಕ್ಕೂ, ಸಾಮಾಜಿಕ ಜಾಲತಾಣದಲ್ಲಿನ ಪತ್ರಗಳು ಸಿಂಧುವಾಗುವುದಿಲ್ಲ. ಕೈಬರಹದಲ್ಲಿ ಸಿಗದಿದ್ದಲ್ಲಿ ಆ ಬಗ್ಗೆ ತನಿಖೆ ಆಗಬೇಕಿದೆ. ಈ ಪ್ರಕರಣದ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಬಗ್ಗೆ ತಿಳಿಯಲಿದೆ. ಶೀಘ್ರದಲ್ಲಿ ನಿಜಾಂಶ ಹೊರಬರಲಿದೆ ಎಂದರು.
ವಾಸ್ತವ ಸಂಗತಿಯನ್ನು ಮುಚ್ಚಿಟ್ಟು ಅಂತ್ಯ ಸಂಸ್ಕಾರಕ್ಕೂ ಅವಕಾಶ ಕೊಡದೆ ಪ್ರತಿಭಟನೆ ಮಾಡಿರುವುದನ್ನು ಯಾರು ಒಪ್ಪುವುದಿಲ್ಲ. ಧರ್ಮದ ಹೆಸರಿನಲ್ಲಿ ಮತ ಪಡೆಯುವವರು, ನಿನ್ನೆಯಿಂದ ಪ್ರತಿಭಟನೆ ಮಾಡುತ್ತಿದ್ದವರು, ಇಂದು ಮೃತ ಯುವಕನ ಅಂತ್ಯಕ್ರಿಯೆ ಸಂದರ್ಭದಲ್ಲಿ ಯಾರೂ ಇರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿನ ಸಂದೇಶಗಳಿಗೆ ಸಂಬಂಧಿಸಿದಂತೆ ಅಡ್ಡಿನ್ಗಳ ಮೇಲೆ ಮೊಕದ್ದಮೆ ಹಾಕುವುದನ್ನು ಒಪ್ಪಲಾಗದು. ಆದರೆ, ಸಂಬಂಧಿಸಿದ ಗ್ರೂಪ್ ಗಳ ಅಡ್ಡಿನ್ಗಳು ಸಂದೇಶಗಳ ಮೇಲೆ ಗಮನಹರಿಸಬೇಕು, ಎಚ್ಚರ ವಹಿಸಬೇಕೆಂದು ಉಚ್ಚ ನ್ಯಾಯಾಲಯ ಹೇಳಿದೆ. ಈ ಬಗ್ಗೆ ಅಡ್ಮಿನ್ ಗಳು ಜಾಗೃತರಾಗಿರಬೇಕೆಂದು ಎಂದು ಹೇಳಿದರು.
ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಕಳೆದ ನವೆಂಬರ್ ತಿಂಗಳಲ್ಲಿ ಕುಶಾಲನಗರ ಆಸ್ಪತ್ರೆಯ ಸಮಸ್ಯೆ ಬಗ್ಗೆ ತನ್ನ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಲಾಗಿತ್ತು. ಅದನ್ನು ಗಮನಿಸಿ ಕರೆ ಮಾಡಿ ಏನೇ ಸಮಸ್ಯೆಗಳಿದ್ದರೂ ನೇರವಾಗಿ ಗಮನಕ್ಕೆ ತರುವಂತೆ ಹೇಳಿದ್ದೆ. ಸಾಮಾಜಿಕ ಜಾಲತಾಣದಲ್ಲಿ ಕೂಡ ಬರುವ ಸಮಸ್ಯೆಗಳ ಪರಿಹಾರ ಮಾಡಬೇಕೆಂಬುದು ತನ್ನ ಉದ್ದೇಶವಾಗಿದೆ. ಆದರೆ, ವಿನಯ್ ಯಾರೆಂಬುದು ಇದುವರೆಗೂ ತನಗೆ ಗೊತ್ತಿಲ್ಲ. ನಾಪೋಕ್ಲುವಿನ ವಿಚಾರ ಕೂಡ ತನಗೆ ತಿಳಿದಿಲ್ಲ. ಇವೆಲ್ಲವೂ ರಾಜಕೀಯವಾಗಿ ನಮ್ಮ ಕೆಲಸ ಕಾರ್ಯಗಳನ್ನು ಹತ್ತಿಕ್ಕಲು ಮಾಡುತ್ತಿರುವ ಪ್ರಯತ್ನವಾಗಿದೆ ಎಂದು ಹೇಳಿದರು.
ಇಂತಹ ಘಟನೆಗಳಾದಾಗ ಯಾರೇ ಆದರೂ ಸರಿ ನೊಂದ ಕುಟುಂಬಸ್ಥರೊಂದಿಗೆ ನಿಲ್ಲಬೇಕು, ರಾಜಕೀಯ ಮಾಡಬಾರದು. ನಾವುಗಳು ಎಂದಿಗೂ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಿಲ್ಲ. ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಬೇಕೆಂಬುದೇ ಉದ್ದೇಶ. ಕಳೆದ ಎರಡೂವರೆ ವರ್ಷದಲ್ಲಿ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಆಗುತ್ತಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಎಂದಿಗೂ ಯಾರ ಮೇಲೂ ವೈಯಕ್ತಿಕ ಟೀಕೆ ಮಾಡಿಲ್ಲ. ಜನತೆ ನಮಗೆ ಅವಕಾಶ ನೀಡಿದ್ದಾರೆ. ಅದಕ್ಕೆ ನ್ಯಾಯ ಕೊಡುವ ನಿಟ್ಟಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಬಿಜೆಪಿ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ಬೇಸರದ ವಿಚಾರವಾಗಿದ್ದು ಸಂತಾಪ ಸೂಚಿಸುತ್ತೇವೆ. ಆದರೆ, ಈ ಘಟನೆಯನ್ನು ರಾಜಕೀಯಕ್ಕೆ ಬಳಸಿಕೊಂಡು ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದು ಖಂಡನೀಯ. ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಸಚಿವರುಗಳು ಸೇರಿಕೊಂಡು ಜಿಲ್ಲೆಯ ಶಾಸಕರುಗಳ ಮೇಲೆ ಆರೋಪ ಮಾಡುತ್ತಾ ರಾಜಕೀಯ ಲಾಭ ಪಡೆದುಕೊಳ್ಳುತ್ತಿರುವುದು ಸರಿಯಲ್ಲ. ಇಂತಹ ಘಟನೆ ಮೂಲಕ ರಾಜಕೀಯ ಮಾಡಬಾರದೆಂದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ದೇಶಕ್ಕೆ ಡಾ. ಬಾಬು ಜಗಜೀವನ ರಾಮ್ ಅವರ ಕೊಡುಗೆ ಅಪಾರ : ಸಂಸದ ಸುನಿಲ್ ಬೋಸ್
ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ, ಮಾಧ್ಯಮ ವಕ್ತಾರ ಟಿ.ಪಿ. ರಮೇಶ್, ಪ್ರಧಾನ ಕಾರ್ಯದರ್ಶಿಗಳಾದ ಕೊಲ್ಯದ ಗಿರೀಶ್, ಎಸ್ ಐ ಮುನೀರ್ ಅಹಮದ್ ಪತ್ರಿಕಾಗೋಷ್ಟಿಯಲ್ಲಿ ಇದ್ದರು.