ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇತ್ತೀಚೆಗೆ ಟೋಲ್ ದರ, ಮೆಟ್ರೋ ದರ, ಡೀಸೆಲ್ ದರ ಹೆಚ್ಚಳ ಹಾಗೂ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಜನಸಾಮಾನ್ಯರು ತತ್ತರಿಸಿ ಹೋಗಿರುತ್ತಾರೆ ಅದರ ಮಧ್ಯೆ ಡೀಸೆಲ್ ದರ, ಟೋಲ್ ದರ ನೆಪದಲ್ಲಿ ಖಾಸಗಿ ಬಸ್ ದರ ಏರಿಕೆ ಮಾಡುವುದನ್ನು ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ ಖಂಡಿಸುತ್ತದೆ ಈ ಕೂಡಲೇ ಟಿಕೆಟ್ ದರ ಹೆಚ್ಚಳ ಕುರಿತು ನಿರ್ಧಾರವನ್ನು ಕೈ ಬಿಡಬೇಕು ಎಂದು ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್. ಎಸ್.ಕಾಂಚನ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಪ್ರತಿ ಬಾರಿಯೂ ಡೀಸೆಲ್ ಬೆಲೆ ಏರಿಕೆ ಯಾಗುವ ಸಂದರ್ಭದಲ್ಲಿ ಖಾಸಗಿ ಬಸ್ ಮಾಲೀಕರು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಮಾತಾನಾಡದೇ ಜನಸಾಮಾನ್ಯರ, ವಿದ್ಯಾರ್ಥಿಗಳ, ಕಾರ್ಮಿಕರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ ಈಗಾಗಲೇ ಸರಕಾರಗಳ ದ್ವಂದ್ವ ನೀತಿಗಳಿಂದ ಜನಸಾಮಾನ್ಯರು, ಕಾರ್ಮಿಕರು, ಮಧ್ಯಮ ವರ್ಗದ ಜನರು ಕಷ್ಟಪಡುತ್ತಿದ್ದಾರೆ.
ಇತ್ತೀಚೆಗೆ ಸುರತ್ಕಲ್ ಟೋಲ್ ಗೇಟ್ ಮುಚ್ಚಲ್ಪಟ್ಟಿದ್ದು ಈ ಹಿಂದೆ ಉಡುಪಿ ಮಂಗಳೂರು ಮಧ್ಯೆ 5ರೂ ಟಿಕೆಟ್ ದರ ಮಾಲೀಕರು ಹೆಚ್ಚಳ ಮಾಡಿದ್ದು, ಟೋಲ್ ಗೇಟ್ ಮುಚ್ಚಿದ ನಂತರ ಟಿಕೆಟ್ ದರವನ್ನು ಮಾಲೀಕರು ಕಡಿಮೆ ಮಾಡಲಿಲ್ಲ ಈಗ ಮತ್ತೆ ಟೋಲ್ ದರ, ಡೀಸೆಲ್ ದರ, ಸೆಸ್ ನೆಪದಲ್ಲಿ ಬಸ್ ಟಿಕೆಟ್ ದರ ಹೆಚ್ಚಳಮಾಡುವ ಕ್ರಮ ಸರಿಯಲ್ಲ ಮಾತ್ರವಲ್ಲದೆ RTO ಅಧಿಕಾರಿಗಳ ಗಮನಕ್ಕೂ ಬಾರದೆ, ಜಂಟಿ ಸಭೆಯು ನಡೆಸದೆ ಖಾಸಗಿ ಬಸ್ ಮಾಲೀಕರು ದರ ಹೆಚ್ಚಳ ಮಾಡುವುದು ಬಡ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ಮಾಡಿದ ದ್ರೋಹ. ಈ ಕೂಡಲೇ ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ ದರ ಏರಿಕೆ ಪ್ರಸ್ತಾಪವನ್ನು ಕೈಬೀಡಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗದ ಕಾರ್ಮಿಕರು, ವಿದ್ಯಾರ್ಥಿಗಳು, ಜನಸಾಮಾನ್ಯರು ಒಟ್ಟು ಸೇರಿ ತೀವ್ರವಾದ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.