- 2019ರಲ್ಲಿ ಶನಿವಾರ ಬ್ಯಾಗ್ ರಹಿತ ದಿನ ಆಚರಿಸಲು ಕ್ರಮವಹಿಸಿದ್ದೆ
- ಪಠ್ಯೇತರ ಚಟುವಟಿಕೆ ಮೂಲಕ ಸೃಜನಶೀಲತೆ ಬೆಳೆಸುವುದು ಉದ್ದೇಶ
ತಿಂಗಳಿಗೆ ಕನಿಷ್ಟ ಒಂದು ಶನಿವಾರವಾದರೂ ಮಕ್ಕಳಿಗೆ ಬ್ಯಾಗ್ ರಹಿತ ದಿನವನ್ನಾಗಿ ಮಾಡಿ ಎಂದು ಮಾಜಿ ಸಚಿವ ಮತ್ತು ರಾಜಾಜಿನಗರ ಕ್ಷೇತ್ರದ ಶಾಸಕ ಎಸ್ ಸುರೇಶ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಸಲಹೆ ನೀಡಿದ್ದಾರೆ.
ಪತ್ರದಲ್ಲಿ, “ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಬ್ಯಾಗ್ನ ಹೊರೆ ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ತೀರಾ ಅವಶ್ಯಕವಾಗಿರುವ ಕ್ರಮ. ವಿಶೇಷವಾಗಿ ಕೆಲ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಜ್ಞಾನಾರ್ಜನೆಯ ನೆಪದಲ್ಲಿ ನೀಡಲಾಗುವ ಈ ಕಿರುಕುಳದ ಕಾರಣ ಇಡೀ ಪೀಳಿಗೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ” ಎಂದಿದ್ದಾರೆ.
“ಜೊತೆಗೆ, ತಿಂಗಳಿಗೆ ಕನಿಷ್ಠ ಒಂದು ಶನಿವಾರವಾದರೂ ಮಕ್ಕಳಿಗೆ ಬ್ಯಾಗ್ ರಹಿತ ದಿನವನ್ನಾಗಿಸಬೇಕೆಂಬುದು ಬಹಳ ದಿನದ, ಅನೇಕ ಶಿಕ್ಷಣ ತಜ್ಞರ ಚಿಂತನೆ. 2019 ರಲ್ಲಿ ಈ ಕುರಿತಂತೆ ನಾನು ವಿಶೇಷ ಕಾಳಜಿವಹಿಸಿ ಶನಿವಾರ ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲು ಕ್ರಮವಹಿಸಿದ್ದೆ. ಈ ದಿನವನ್ನು “ಸಂಭ್ರಮದ ಶನಿವಾರ” ಕರೆಯಬೇಕೆಂಬುದೂ ತೀರ್ಮಾನಿಸಲಾಗಿತ್ತು” ಎಂದು ವಿವರಿಸಿದ್ದಾರೆ.

“ಸಂಭ್ರಮದ ಶನಿವಾರದ ಎಂಬ ಪರಿಕಲ್ಪನೆಯಲ್ಲಿ ಈ ಕಾರ್ಯಕ್ರಮವನ್ನು ನಾವು ರೂಪಿಸಿದಾಗ ರಾಜ್ಯಾದ್ಯಂತ ಶಾಲಾ ಮಕ್ಕಳಲ್ಲಿ ನಿಜಕ್ಕೂ ಸಂಭ್ರಮ ಮನೆ ಮಾಡಿತ್ತು. ಪುಸ್ತಕದ ಬ್ಯಾಗನ್ನು ಮನೆಯಲ್ಲಿಯೇ ಬಿಟ್ಟು ತಿಂಗಳಿಗೆ ಒಂದು ಶನಿವಾರ ಆಗಮಿಸುತ್ತಿದ್ದ ಆ ಚಿಣ್ಣರ ಸಂಭ್ರಮ ನೋಡಿ ನಾವೆಲ್ಲರೂ ಕಣ್ತುಂಬಿಸಿಕೊಂಡಿದ್ದೆವು” ಎಂದಿದ್ದಾರೆ.
“ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಣ ತಜ್ಞರು ತಮ್ಮೆಲ್ಲ ಸೃಜನಶೀಲತೆಯನ್ನು ಪ್ರಯೋಗಕ್ಕೆ ಒಡ್ಡಿಕೊಂಡು ಮಕ್ಕಳ ಮನಗೆಲ್ಲಲು ಮುಂದಾಗಿದ್ದರು. ಹಾಡು, ಆಟ, ಕಥೆ ಹೀಗೆ ನಾನಾ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು ನಮ್ಮ ಆ ಸಂಭ್ರಮದ ಶನಿವಾರದ ಮುಖ್ಯ ಉದ್ದೇಶವಾಗಿತ್ತು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿದ್ಯುತ್, ನೀರಿನ ಕ್ಷಾಮ ತಲೆದೋರುವುದು ಗ್ಯಾರಂಟಿ: ಬಸವರಾಜ ಬೊಮ್ಮಾಯಿ
“ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿನೂತನ ಉಪಕ್ರಮಗಳನ್ನು ಎಲ್ಲರೂ ಅಳವಡಿಸಿಕೊಳ್ಳಲು ವೇದಿಕೆಯೊಂದನ್ನು ರೂಪಿಸಿ, ಒಂದು ವೈವಿಧ್ಯಮಯ ವಾತಾವರಣ ಕಲ್ಪಿಸಲು ಶ್ರದ್ಧೆ ವಹಿಸಿದ್ದೆವು. ಆದರೆ, ಆ ನಂತರ ನಮ್ಮ ಮೇಲೆ ಎರಗಿದ ಕೋವಿಡ್ ಕಾಲಘಟ್ಟದ ಸವಾಲುಗಳು ನಮ್ಮ ಈ ಪರ್ಯಾಯ ಕ್ರಮಗಳಿಗೆ ವಿರಾಮ ಹಾಡಿದವು ಎನ್ನುವುದು ಬೇರೆಯೇ ವಿಷಯ” ಎಂದಿದ್ದಾರೆ.
“ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮಾತ್ರವೇ ಕಲಿಕೆಯ ಮೂಲವಾಗಬಾರದು. ಸುತ್ತಲಿನ ಪರಿಸರ, ಪೂರಕವಾದ ಚಟುವಟಿಕೆಗಳು ಮಕ್ಕಳಿಗೆ ಇನ್ನಷ್ಟು ಆಪ್ತವಾಗಿ ಕಲಿಸುವ ಆಕರ್ಷಣೆ ಹೊಂದಿವೆ. ಆದ್ದರಿಂದ, ಸಂಭ್ರಮದ ಶನಿವಾರದಂತಹ ಮಹತ್ವದ ಕಾರ್ಯಕ್ರಮಗಳ ಬಗ್ಗೆ ತಾವು ಗಮನಹರಿಸಿ ವೇಗ ಕಲ್ಪಿಸಿದಲ್ಲಿ, ಮಕ್ಕಳಿಗೆ ಕಲಿಕೆಯೂ ಸಹನೀಯವಾಗುತ್ತದೆ. ದೇಶದ ಭವಿಷ್ಯಕ್ಕೂ ಒಳಿತಾಗುತ್ತದೆ” ಎಂದು ಸಲಹೆ ನೀಡಿದ್ದಾರೆ.