ಸಂಘಪರಿವಾರ ಮತ್ತು ಹಿಂದುತ್ವವಾದಿಗಳ ವಿರೋಧ, ದಾಂಧಲೆ ಹಾಗೂ ಆಕ್ಷೇಪದ ಕಾರಣದಿಂದಾಗಿ ಹಿಂದಿ ಭಾಷೆಯ ‘ಫುಲೆ’ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಮುಂದೂಡಿದೆ. ಈ ಮೊದಲು, ಏಪ್ರಿಲ್ 11ರಂದು ಸಿನಿಮಾ ಬಿಡುಗಡೆಗೆ ನಿರ್ಧರಿಸಲಾಗಿತ್ತು. ಈಗ, ಬಿಡುಗಡೆ ದಿನಾಂಕವನ್ನು ಏಪ್ರಿಲ್ 25ಕ್ಕೆ ನಿಗದಿ ಮಾಡಲಾಗಿದೆ.
ಹಿಂದುತ್ವವಾದಿ, ಮನುವಾದಿ, ಜಾತಿವಾದಿಗಳ ಒತ್ತಡಕ್ಕೆ ಮಣಿದಿರುವ ‘ಸೆನ್ಸಾರ್ ಬೋರ್ಡ್’ ಸಿನಿಮಾದಲ್ಲಿ 12 ಬದಲಾವಣೆಗಳನ್ನು ಮಾಡುವಂತೆ ಚಿತ್ರತಂಡಕ್ಕೆ ಸೂಚನೆ ನೀಡಿದೆ. ಬದಲಾವಣೆಗಳನ್ನು ಮಾಡುವ ಕಾರಣದಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.
ವಿದ್ಯಾ ಬಾಲನ್, ವಿವೇಕ್ ಅಗ್ನಿಹೋತ್ರಿ, ನಾಗಾಭರಣ, ವಾಮನ ಕೇಂದ್ರೆ ಹಾಗೂ ಜೀವಿತ ರಾಜಶೇಖರ್ ಗಳಿರುವ ಸೆನ್ಸಾರ್ ಬೋರ್ಡ್ನ ಸಮಿತಿಯ ಸದಸ್ಯರು ಸಿನಿಮಾದ ಕನ್ನಡ ಭಾಷೆಯ ಅನುವಾದದಲ್ಲಿ ದೋಷಗಳಿವೆ ಎಂದು ಹೇಳಿದ್ದಾರೆ.
ಸಮಿತಿ ಸೂಚಿಸಿರುವ ಪ್ರಮುಖ ಬದಲಾವಣೆಗಳು:
- ಮೂಲ: ಶೂದ್ರರು ಪೊರಕೆ ಕಟ್ಟಿಕೊಂಡು ಅಡ್ಡಾಡಿ ಬೇಕಿದ್ದರೆ.
ಬದಲಾವಣೆ: ಇದರಿಂದ ನಮ್ಮನ್ನು ದೂರವಿಡಬೇಕಾಗಿದೆ.
- ಮೂಲ: 3,000 ವರ್ಷಗಳ ಗುಲಾಮಗಿರಿ
ಬದಲಾವಣೆ: ಕೆಲವು ವರ್ಷಗಳ ಹಿಂದಿನ
- ಮೂಲ: ಪೇಶ್ವೆಗಳು ಇದ್ದಿದ್ದರೆ ತಲೆ, ಕೈ, ಕಾಲು ಬೇರೆ ಬೇರೆ ಮಾಡುತ್ತಿದ್ದರು…
ಬದಲಾವಣೆ: ನಿಮ್ಮ ಅದೃಷ್ಟ ಚೆನ್ನಾಗಿದೆ… ರಾಜರು ಇದ್ದಿದ್ದರೆ ಕೈ, ಕಾಲು ಬೇರೆ ಬೇರೆ ಮಾಡುತ್ತಿದ್ದರು…
- ಮೂಲ: ಮಹರ್, ಮಾಂಗ್..
ಬದಲಾವಣೆ: ಇಂತಹ ಸಣ್ಣ ಸಣ್ಣ… (ಮುಂದಿನ ಪದಗಳು ಮ್ಯೂಟ್)
ಸಿನಿಮಾದಲ್ಲಿ ಬದಲಾವಣೆಗಳನ್ನು ಮಾಡಲು ಸೂಚಿಸಿರುವ ಸೆನ್ಸಾರ್ ಬೋರ್ಡ್ ವಿರುದ್ಧ ಚಿಂತಕ ಶ್ರೀಪಾದ್ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಬ್ರಾಹ್ಮಣರು ಚಾತುರ್ವರ್ಣ ಪದ್ಧತಿ ಪಾಲಿಸುತ್ತಾರೆ. ಫುಲೆ ದಂಪತಿಗಳ ಕಾಲದಲ್ಲಿ ಬ್ರಾಹ್ಮಣ ಸಮಾಜ ಅವರ ಮೇಲೆ ದೈಹಿಕ ಹಲ್ಲೆ ಮಾಡಿದೆ. ಇದು ಇತಿಹಾಸದಲ್ಲಿ ದಾಖಲಾಗಿದೆ. ಸಿನಿಮಾದಲ್ಲಿ ಇದನ್ನು ವಿರೋಧಿಸುವ ಯಾವುದೇ ಹಕ್ಕು, ನೈತಿಕತೆ ಬ್ರಾಹ್ಮಣರಿಗಿಲ್ಲ” ಎಂದಿದ್ದಾರೆ.
“ಆರ್ಎಸ್ಎಸ್-ಬಿಜೆಪಿಗರು ಬ್ರಾಹ್ಮಣ – ಬನಿಯಾ ರಾಜಕಾರಣದಿಂದ ಅಧಿಕಾರಕ್ಕಾಗಿ ಇಂದು ಹಿಂದುಳಿದ, ದಲಿತ ರಾಜಕಾರಣಕ್ಕೆ ವಿಸ್ತರಿಸಿಕೊಂಡಿದ್ದಾರೆ. ಆದರೆ, ಫುಲೆ ದಂಪತಿಗಳ ಆಧಾರಿತ ಸಿನಿಮಾವನ್ನು ವಿರೋಧಿಸುತ್ತಾರೆ. ಯಾವುದೇ ನೈತಿಕತೆ, ಮೌಲ್ಯಗಳಿಲ್ಲದ ಇವರ double standard ಬಯಲಾಗಿದೆ” ಎಂದಿದ್ದಾರೆ.
“ಫುಲೆ ಹೋರಾಟದ ಕುರಿತು ಬೆಂಬಲಿಸಿ ಮಾತನಾಡುವ ಪ್ರಜಾಪ್ರಭುತ್ವವಾದಿಗಳು ಈಗ ಮೌನದಿಂದ ಇರಬಾರದಲ್ಲವೇ ಚಾತುರ್ವರ್ಣವನ್ನು ಬೆಂಬಲಿಸಿ ‘ಫುಲೆ’ ಸಿನಿಮಾದ ದೃಶ್ಯಗಳಿಗೆ ಮಾಡಿರುವ ಸೆನ್ಸಾರ್ ಅನ್ನು ಖಡಾಖಂಡಿತವಾಗಿ ವಿರೋಧಿಸಬೇಕಲ್ಲವೇ? ಇದು ‘ಫುಲೆ’ ಲೆಗಸಿಯನ್ನು ರಕ್ಷಿಸುವ ಹೊಣೆಗಾರಿಕೆಯಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆಯವರು ಪ್ರತಿಕ್ರಿಯಿಸಿ, ‘ಜಾತಿ ದಬ್ಬಾಳಿಕೆಯ ವಾಸ್ತುಶಿಲ್ಪಿಗಳು ತಮ್ಮ ಕೃತ್ಯಗಳನ್ನು ಹೇಗೆ ನೆನಪಿಸಿಕೊಳ್ಳುತ್ತಾರೆ ಮತ್ತು ಮಾತನಾಡುತ್ತಾರೆ ಎಂಬುದನ್ನು ಸಹ ನಿಯಂತ್ರಿಸಲು ಬಯಸುತ್ತಾರೆ? ಜಾತಿ ತಾರತಮ್ಯವನ್ನು ಸಾಂಸ್ಥೀಕರಣಗೊಳಿಸಿದವರೇ ಈಗ ಅದರ ಬಗ್ಗೆ ಮಾತನಾಡದಂತೆ ಒತ್ತಡ ಹಾಕುತ್ತಿದ್ದಾರೆ’ ಎಂದಿದ್ದಾರೆ.