ಬಿಜೆಪಿಯನ್ನು ಭವಿಷ್ಯದಲ್ಲಿ ಅಧಿಕಾರಕ್ಕೆ ತರಲು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮನವಿ ಮಾಡಿದರು.
ಬಿಜೆಪಿ ಜನಾಕ್ರೋಶ ಯಾತ್ರೆಯ ಅಂಗವಾಗಿ ಇಂದು ಉಡುಪಿಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆಯಿಂದ ರಾಜ್ಯದಲ್ಲಿ ಇವತ್ತು ಸಾಮಾನ್ಯ ಜನರು ಬದುಕಲಾರದ ಪರಿಸ್ಥಿತಿಗೆ ಬಂದುಬಿಟ್ಟಿದ್ದಾರೆ. ಒಂದು ಕಡೆ ಸರ್ಕಾರವು ಮಾತನಾಡದೆ ಮೂಕ, ಕಿವಿ ಕೇಳದಂತೆ ಹಾಗೂ ಕಿವುಡಾಗಿ ಕುಳಿತಿದೆ. ಕಣ್ಣು ಕಾಣದ ಹಾಗೆ ಕುರುಡರಂತೆ ಕುಳಿತಿದೆ. ಇವತ್ತು ಸರ್ಕಾರಕ್ಕೆ ಬುದ್ಧಿ ಕಲಿಸುವ ಉದ್ದೇಶದಿಂದ ಹಾಗೂ ದಿನನಿತ್ಯದ ಬದುಕಿನಲ್ಲಿ ಜನರಿಗೆ ಸಮಸ್ಯೆ ಉಂಟಾಗಿರುವ ಕಾರಣ ಈ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಬಿಜೆಪಿ ಶಾಸಕರನ್ನು ಮಾರ್ಷಲ್ಗಳ ಮುಖಾಂತರ ಸದನದಿಂದ ಹೊರಗಡೆ ಕಳುಹಿಸಿ ಅಮಾನತು ಮಾಡಿದ್ದನ್ನು ಅವರು ಖಂಡಿಸಿದರು. ಸಿದ್ದರಾಮಯ್ಯರವರ ಆಪ್ತರು, ಶಾಸಕರಾದ ಹಾಗೂ ಮಾಜಿ ಮಂತ್ರಿಗಳಾದ ಬಸವರಾಜ ರಾಯರೆಡ್ಡಿರವರೇ ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ಇಡೀ ದೇಶದಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾಗಿ ಹೇಳುತ್ತಿದ್ದಾರೆ ಎಂದು ಗಮನ ಸೆಳೆದರು.

ಭ್ರಷ್ಟಾಚಾರ ತೀವ್ರವಾಗಿ ತಾರಕಕ್ಕೆ ಏರುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿರುವ ಸಚಿವರ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಈ ರಾಜ್ಯದಲ್ಲಿರುವ ಎಲ್ಲಾ ಸಂಪತ್ತನ್ನು ಈ ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದೆ. ಎಲ್ಲಾ ಸಚಿವರು ಹಣ ವಸೂಲಿ ಮಾಡಿ, ಕುರ್ಚಿ ಭದ್ರಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಾಗೂ ಎಲ್ಲಾ ನಿಗಮಗಳಲ್ಲಿ ಹಣವನ್ನು ಖಾಲಿ ಮಾಡಿ ಭ್ರಷ್ಟಾಚಾರ ಮಾಡಿ ವಿಚಾರಣೆ ನೆಪದಲ್ಲಿ ಅವರದ್ದೇ ಸರ್ಕಾರದ ಬೇರೆ ಬೇರೆ ಅಧಿಕಾರಿಗಳನ್ನು ನೇಮಿಸಿ ಕ್ಲೀನ್ ಚಿಟ್ ನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಉಡುಪಿ ಜಿಲ್ಲೆಯು ನಮ್ಮ ಇಡೀ ರಾಜ್ಯಕ್ಕೆ ಮತ್ತು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಿಗೆ ಶಿಸ್ತು ಮತ್ತು ಶ್ರದ್ಧೆಯನ್ನು ಕಲಿಸಿಕೊಟ್ಟ ಸ್ಥಳ ಎಂದು ಮೆಚ್ಚುಗೆ ಸೂಚಿಸಿದರು. ಉಡುಪಿ ಜಿಲ್ಲೆಯ ವಿಚಾರ ಬಂದಾಗ ದಿವಂಗತ ಆಚಾರ್ಯರವರ ನೆನಪಾಗುತ್ತದೆ ಎಂದು ನುಡಿದರು. ಆಚಾರ್ಯ ರವರ ನೆನಪಿನ ಸಲುವಾಗಿ ಉಡುಪಿಯ ಬಸ್ ನಿಲ್ದಾಣವನ್ನು ಆಚಾರ್ಯ ಬಸ್ ನಿಲ್ದಾಣವೆಂದು ಮಾಡಬೇಕು ಎಂದು ಹೇಳಿದಾಗ ಆವತ್ತಿನ ಕ್ಯಾಬಿನೆಟ್ನಲ್ಲಿ ಯಡಿಯೂರಪ್ಪ ರವರು ತೀರ್ಮಾನ ತೆಗೆದುಕೊಂಡಿದ್ದರು. ನಾನು ಸಾರಿಗೆ ಮಂತ್ರಿಯಾಗಿ ಉಡುಪಿಯ ಬಸ್ ನಿಲ್ದಾಣವನ್ನು ಆಚಾರ್ಯ ಬಸ್ ನಿಲ್ದಾಣವೆಂದು ಹೆಸರು ಇಡುವ ಕೆಲಸ ನಾನು ಮಾಡಿಕೊಟ್ಟೆ ಎಂದು ನೆನಪಿಸಿದರು.
2028 ರಲ್ಲಿ ವಿಜಯೇಂದ್ರ ರವರು ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಪುನಃ ಅಧಿಕಾರಕ್ಕೆ ತರುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು.