ಕೊಪ್ಪಳ ನಗರಕ್ಕೆ ಹಾಗೂ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಬಲ್ಡೋಟಾ ಉಕ್ಕಿನ ಕಾರ್ಖಾನೆ ವಿಸ್ತರಿಸಲು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅನುಮತಿ ಲಭಿಸಿದ ಹಿನ್ನೆಲೆ ಸ್ಥಳೀಯ ಸಂಘಟನೆಗಳು ಹೋರಾಟ ತೀವ್ರಗೊಳಿಸಲು ನಿರ್ಧರಿಸಿವೆ.
ನಗರದ ಪ್ರವಾಸಿ ಮಂದಿರದಲ್ಲಿ ತುರ್ತು ಸಭೆ ನಡೆಸಿ ಕೊಪ್ಪಳ ಬಚಾವೊ ಆಂದೋಲನ ಸಮಿತಿ ಹಾಗೂ ಕೊಪ್ಪಳ ಪರಿಸರ ಹಿತರಕ್ಷಣಾ ಹೋರಾಟ ಪದಾಧಿಕಾರಿಗಳು ಈ ತೀರ್ಮಾನ ಕೈಗೊಂಡಿದ್ದಾರೆ.
ಸಮಿತಿ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ” ಬಲ್ಡೋಟಾ ಉಕ್ಕಿನ ಕಾರ್ಖಾನೆ ವಿಸ್ತರಣೆಗೆ ಕೇಂದ್ರ ಪರಿಸರ ಸಚಿವಾಲಯದ ಅನುಮತಿಸಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಮಾಧ್ಯಮಗಳಲ್ಲಿ ವರದಿ ಆಗಿದೆ. ಪರಿಸರ ವಿನಾಶ ಹಾಗೂ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತ ಕಾರ್ಖಾನೆಗಳ ವಿರುದ್ದ ನಮ್ಮ ಹೋರಾಟ ತೀವ್ರಗೊಳಿಸಬೇಕಿದೆ. ಉದಾರೀಕರಣದ ಹೆಸರಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೇಲಸ ಮಾಡುತ್ತಿವೆ” ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಗತಿಪರ ಚಿಂತಕ ಮಹಾಂತೇಶ ಕೊತಬಾಳ ಮಾತನಾಡಿ, “ಜನ ಪ್ರತಿನಿಧಿಗಳು ಸೋತಾಗ ಜನಪರ ಚಳುವಳಿಗಳ ಹೋರಾಟಗಳು ತೀವ್ರಗೊಳ್ಳಬೇಕು. ಜನರ ಆರೋಗ್ಯಕ್ಕೆ ಕುಂದು ತರುವಂತ ಹಾಗೂ ಕೊಪ್ಪಳ ಜಿಲ್ಲೆಯ ಪರಿಸರಕ್ಕೆ ಮಾರಕವಾಗುವಂತ ಬಲ್ಡೋಟಾ ಕಾರ್ಖಾನೆಗಳ ವಿರುದ್ಧ ನಿರಂತರ ಹೋರಾಟ ಹೆಚ್ಚುಗೊಳಿಸೋಣ ಹಾಗೂ ಗವಿಸಿದ್ದೇಶ್ವರ ಮಠದ ಅಭಿನವ ಸ್ವಾಮಿಜಿಯವರನ್ನು ಮತ್ತೊಮ್ಮೆ ಆಹ್ವಾನಿಸೊಣ” ಎಂದು ಸಲಹೆ ನೀಡಿದರು.
ಬಚಾವೋ ಆಂದೋಲನದ ಸಂಚಾಲಕ ಕೆ.ಬಿ.ಗೋನಾಳ ಮಾತನಾಡಿ, “ನಮ್ಮ ಹೋರಾಟ ಚುರುಕುಗೊಳ್ಳದಿದ್ದರೆ ಕೊಪ್ಪಳ ಸರ್ವನಾಶ ಆಗುವ ಕಾಲ ದೂರ ಇಲ್ಲ. ‘ಕಾರ್ಖಾನೆ ತೊಲಗಿಸಿ ತೊಟ್ಟಿಲ ತೂಗಿ’ ಘೋಷವಾಕ್ಯದೊಂದಿಗೆ ನಮ್ಮ ಹೋರಾಟ ಪ್ರಖರಗೊಳ್ಳಬೇಕಿದೆ. ಜನ ಪ್ರತಿನಿಧಿಗಳು ಕೊಪ್ಪಳ ಪ್ರಗತಿ ಕಡೆಗಣಿಸಿ ಬಂಡವಾಳಶಾಹಿಗಳ ಗುಲಾಮರಾಗಿದ್ದಾರೆ. ಆದ್ದರಿಂದ, ವಿನಾಶಕಾರಿ ಬಲ್ಡೋಟಾ ಕಾರ್ಖಾನೆ ತೊಲಗುವವರೆಗೂ ನಮ್ಮ ಹೋರಾಟ ಮುಂದುವರಸೋಣ” ಎಂದು ಹೇಳಿದರು.
ಕೊಪ್ಪಳ ಹಿತರಕ್ಷಣಾ ಪದಾಧಿಕಾರಿ ಡಿ.ಎಚ್.ಪೂಜಾರ ಮಾತನಾಡಿ, “ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೆಸರಲ್ಲಿ ಹೇರಳವಾಗಿ ಕಾರ್ಖಾನೆಗಳು ಸ್ಥಾಪನೆಯಾಗಿ ಕೊಪ್ಪಳ ಜಿಲ್ಲೆ, ಪರಿಸರವನ್ನು ವಿನಾಶದಂಚಿಗೆ ಕೊಂಡೊಯ್ಯುತ್ತಿವೆ. ಹಾಗಾಗಿ ಈ ಕಾರ್ಖಾನೆಗಳ ತೊಲಗಿಸಲು ಹೋರಾಟ ಹೆಚ್ಚಾಗಬೇಕು” ಎಂದರು.
ಇದನ್ನೂ ಓದಿ: ಕೊಪ್ಪಳ | ಸೌಜನ್ಯ ಕೊಲೆ ಪ್ರಕರಣ; ಉನ್ನತ ತನಿಖೆಗೆ ಆಗ್ರಹ
ಸಭೆಯಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ. ಕಣವಿ, ಸಂಘಟನೆಯ ಪ್ರಮುಖರಾದ ಕೆ.ಬಿ.ಗೋನಾಳ, ಸೋಮರಡ್ಡಿ ಅಳವಂಡಿ, ರಮೇಶ ತುಪ್ಪದ, ಶಿವಕುಮಾರ ಕುಕನೂರ, ಶರಣು ಪಾಟೀಲ, ಮುದಕಪ್ಪ ಹೊಸಮನಿ, ಶರಣು ಗಡ್ಡಿ ಹಾಗೂ ಇತರರು ಉಪಸ್ಥಿತರಿದ್ದರು.