ಉಡುಪಿ ನಗರದ ಕಲ್ಸಂಕದಿಂದ ಶ್ರೀಕೃಷ್ಣ ಮಠದ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆ ಸನಿಹದಲ್ಲಿರುವ, ಪಾಳುಬಿದ್ದಿರುವ ಬಹುಮಹಡಿ ಕಟ್ಟಡದಿಂದ ಸುಮಾರು 25 ಅಡಿ ಎತ್ತರದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಅಪರಿಚಿತ ವ್ಯಕ್ತಿಯನ್ನು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಶುಕ್ರವಾರ ನಡೆದಿದೆ.
ದುರ್ಘಟನೆ ಗಮನಿಸಿದ ಕಲ್ಸಂಕ ಆಟೋ ಸ್ಟ್ಯಾಂಡಿನ ಚಾಲಕರು, ಒಳಕಾಡುವರಿಗೆ ಮಾಹಿತಿ ನೀಡಿದ್ದರು. ಯುವಕನ ಕುತ್ತಿಗೆ, ಬೆನ್ನು ಮೂಳೆ ಮುರಿತಗೊಳಗಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ರಕ್ಷಿಸಲ್ಪಟ್ಟ ಯುವಕನ ಹೆಸರು ಸೂರತ್ ಸಿಂಗ್ ರಾವತ್ (35ವ) ತಂದೆ ಮಾಧವನ್ ಸಿಂಗ್ ಉತ್ತರಖಂಡ ಎಂದು ತಿಳಿದುಬಂದಿದೆ. ವಾರಸುದಾರರು ತುರ್ತಾಗಿ ಉಡುಪಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
ಕನಕಮಹಲ್ ಹೆಸರಿನಿಂದ ಕರೆಯಲ್ಪಡುವ ನಿರ್ಮಾಣ ಹಂತದಲ್ಲಿಯೇ ಪಾಳುಬಿದ್ದಿರುವ ಈ ಕಟ್ಟಡದಲ್ಲಿ ಅಸಹಜವಾಗಿ ಸಾವನಪ್ಪಿದ ಕೊಳೆತ ಶವಗಳು, ಪತ್ತೆಯಾಗಿರುವ ಹಲವಾರು ಘಟನೆಗಳು ನಡೆದಿವೆ. ಅಲ್ಲದೆ ಈ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳು, ವೈಶ್ಯವಾಟಿಕೆ ನಡೆಯುತ್ತಿರುವ ಬಗ್ಗೆಯೂ ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.