ವಿವಿಧ ಕೌಶಲ್ಯ ಸಹಿತ ಮತ್ತು ಕೌಶಲ್ಯ ರಹಿತ ಕಾರ್ಮಿಕರ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಇಲಾಖೆ ಪರಿಷ್ಕೃತ ಅಧಿಸೂಚನೆಗಳನ್ನು ಹೊರಡಿಸಿದ್ದು, ಶೌಚಾಲಯ, ಸ್ನಾನಗೃಹಗಳು, ಒಳಚರಂಡಿಗಳನ್ನು ಶುಚಿಮಾಡುವ ಕೆಲಸಗಳಲ್ಲಿ ತೊಡಗಿರುವ ವಲಯ–1ರಲ್ಲಿ ದಿನಕ್ಕೆ ₹989, ತಿಂಗಳಿಗೆ ₹25,714, ವಲಯ–2 ದಿನಕ್ಕೆ ₹899, ತಿಂಗಳಿಗೆ ₹23,376.43, ವಲಯ–3ರಲ್ಲಿ ದಿನಕ್ಕೆ ₹817.36ರಂತೆ, ತಿಂಗಳಿಗೆ ₹21,251.30ಕ್ಕೆ ತಲುಪಿದೆ.
ಅತಿ ಕುಶಲ ಎಲೆಕ್ಟ್ರಿಷಿಯನ್ಗಳಿಗೆ ದಿನಗೂಲಿ ದಿನಕ್ಕೆ ₹1,316 ಆಗಿದ್ದು, ತಿಂಗಳಿಗೆ ₹34,225.42 ಆಗಿದೆ. ನುರಿತ ಎಲೆಕ್ಟ್ರಿಷಿಯನ್ಗಳಿಗೆ ದಿನಗೂಲಿ 1,196.69 ಮತ್ತು ತಿಂಗಳಿಗೆ ₹31,114.02 ಆಗಿದೆ. ಅರೆ ಕುಶಲ ಕಾರ್ಮಿಕರಿಗೆ ದಿನಕ್ಕೆ ₹1,087.90 ಹೆಚ್ಚಳವಾಗಿದ್ದು, ತಿಂಗಳಿಗೆ ₹28,285ಕ್ಕೆ ತಲುಪಿದೆ.
ಇತರ ವಲಯಗಳಲ್ಲಿ, ಅತಿ ಕೌಶಲ ಕೆಲಸಗಾರರಿಗೆ ಕನಿಷ್ಠ ದೈನಂದಿನ ವೇತನ ₹1,196.69 ರಿಂದ ₹989ರವರೆಗೆ ಇರುತ್ತದೆ. ಆದರೆ ಕೌಶಲ ರಹಿತ ಕೆಲಸಗಾರರು ದಿನಕ್ಕೆ ₹743 ರಿಂದ ₹899.09ರವರೆಗಿನ ವೇತನಕ್ಕೆ ಅರ್ಹರಾಗಿರುತ್ತಾರೆ.
ಕರ್ನಾಟಕ ರಾಜ್ಯದಾದ್ಯಂತ ಕನಿಷ್ಠ ವೇತನ ಕಾಯ್ದೆ 1984ರ ಕಲಂ 5(1) (ಎ) ಹಾಗೂ 5(1) ಬಿ ಅಡಿ ಈವರೆಗೂ 81 ಅಧಿಸೂಚಿತ ಉದ್ದಿಮೆಗಳಿಗೆ ಪ್ರತ್ಯೇಕವಾದ ವೇತನ ದರಗಳನ್ನು ನಿಗದಿಪಡಿಸಿ, ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗುತಿತ್ತು. 2022-23ನೇ ಸಾಲಿನಲ್ಲಿ ವಿವಿಧ ಅನುಸೂಚಿತ ಉದ್ದಿಮೆಗಳಿಗೆ ಸಂಬಂಧಿಸಿದ ಒಟ್ಟು 34 ಅನುಸೂಚಿತ ಉದ್ದಿಮೆಗಳಿಗೆ ಸದರಿ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಕನಿಷ್ಠ ವೇತನಕ್ಕೆ ಹೆಚ್ಚುವರಿಯಾಗಿ ಶೇ.5 ರಿಂದ 10ರಷ್ಟು ಏರಿಕೆ ಮಾಡಿದ ದರಗಳನ್ನು ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಸದರಿ ಅಧಿಸೂಚನೆಗಳನ್ನು ಎಐಟಿಯುಸಿ ಕಾರ್ಮಿಕ ಸಂಘದವರು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಪ್ರಶ್ನಿಸಿದ್ದರಿಂದ ಅದನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳ ಅನ್ವಯ ಕನಿಷ್ಠ ವೇತನ ಲೆಕ್ಕಾಚಾರ ಹಾಕಿ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ನಿರ್ದೇಶಿಸಲಾಗಿತ್ತು.

ವಿವಿಧ ಅನುಸೂಚಿತ ಉದ್ದಿಮೆಗಳಲ್ಲಿ ವಲಯವಾರು ಮತ್ತು ಕುಶಲವಾರು ವೇತನ ದರದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ಎಲ್ಲ ವರ್ಗದ ಕಾರ್ಮಿಕರಿಗೂ ಸಮಾನವಾದ ಕನಿಷ್ಠ ವೇತನ ದೊರೆಯಬೇಕೆಂಬ ಸದುದ್ದೇಶದಿಂದ ಈ ಹಿಂದೆ ಅನುಸೂಚಿತ ಉದ್ದಿಮೆವಾರು ಪ್ರತ್ಯೇಕವಾಗಿ ಅಧಿಸೂಚನೆಗಳನ್ನು ಹೊರಡಿಸುತ್ತಿದ್ದ ಕ್ರಮದ ಬದಲಾಗಿ ಏಕರೂಪ ಅಧಿಸೂಚನೆ ಹೊರಡಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕರ್ನಾಟಕ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ; ಸೂಕ್ತ ಕ್ರಮಕ್ಕೆ ಮುಂದಾಗುವುದೇ ಸರ್ಕಾರ?
ಇದೇ ರೀತಿ ಅನುಸೂಚಿ–3 ಮತ್ತು ಅನುಸೂಚಿ–4 ರ ವ್ಯಾಪ್ತಿಗೆ ಬರುವ ಕಾರ್ಮಿಕರ ಕನಿಷ್ಠ ವೇತನ ಪರಿಷ್ಕರಣೆ ದರವನ್ನು ಪ್ರಕಟಿಸಲಾಗಿದೆ. ಯಾವುದೇ ಆಕ್ಷೇಪಣೆ ಇದ್ದರೆ 2 ತಿಂಗಳಲ್ಲಿ ಸರ್ಕಾರದ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ, 4 ನೇ ಮಹಡಿ, ವಿಕಾಸಸೌಧ, ಬೆಂಗಳೂರು–1 ಇಲ್ಲಿಗೆ ಸಲ್ಲಿಸಬಹುದೆಂದು ತಿಳಿಸಲಾಗಿದೆ.