ಯುವ ಸಮೂಹ ಮಾದಕದ್ರವ್ಯದ ದಾಸರಾಗದಂತೆ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದರ ಜತೆಗೆ ಡ್ರಗ್ಸ್ ಮಾಫಿಯಾದ ಮೂಲವನ್ನು ಪತ್ತೆ ಹಚ್ಚಬೇಕು. ಪೆಡ್ಲರ್ಗಳನ್ನು ಗಡಿಪಾರು ಮಾಡುವುದೂ ಸೇರಿದಂತೆ ಕಠಿಣ ಕ್ರಮಗಳ ಮೂಲಕ ಡ್ರಗ್ಸ್ ಹಾವಳಿ ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
“ಡ್ರಗ್ಸ್ ಮಾಫಿಯಾದ ಮೇಲೆ ನಿರಂತರ ನಿಗಾ ಇಡಬೇಕು. ಮಾರಾಟ ಜಾಲದ ಚಲನ ವಲನಗಳ ಮೇಲೆ ತೀವ್ರ ನಿಗಾ ಇಡಬೇಕು. ಇದಕ್ಕಾಗಿ ಪ್ರತ್ಯೇಕವಾದ ವಿಶೇಷ ತಂಡ ರಚಿಸಿ. ಪೊಲೀಸರು ಡ್ರಗ್ ಮಾಫಿಯಾದವರ ಮೇಲೆ ಕೇವಲ ಕೇಸು ದಾಖಲಿಸಿದರಷ್ಟೆ ಸಾಲದು. ನ್ಯಾಯಾಲಯಗಳಲ್ಲಿ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದೂ ಕೂಡ ಪೊಲೀಸರ ಹೊಣೆಗಾರಿಕೆ” ಎಂದು ಹೇಳಿದ್ದಾರೆ.
“ಕೇಸು ದಾಖಲಾದ ಪ್ರಮಾಣ ಮತ್ತು ಶಿಕ್ಷೆಯ ಪ್ರಮಾಣ ಎರಡನ್ನೂ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು. ಪ್ರತಿ ಠಾಣೆಗೆ ಭೇಟಿ ನೀಡಿದ ವೇಳೆಯಲ್ಲಿ ಶಿಕ್ಷೆಯ ಪ್ರಮಾಣವನ್ನೂ ಪರಿಶೀಲಿಸಿ ಠಾಣಾಧಿಕಾರಿಗಳಿಂದ ವರದಿ ಕೇಳಬೇಕು” ಎಂದು ಸಿಎಂ ಸೂಚಿಸಿದ್ದಾರೆ.