ಚಾಮರಾಜನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಸದ ಸುನಿಲ್ ಬೋಸ್ ‘ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟವರು ವಿಶ್ವಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್ ‘ ಎಂದರು.
” ಅಕ್ಷರ ಕಲಿಯುವುದು ಅಪರಾಧ, ಕಳಿಸುವುದು ಅಪರಾಧ ಎನ್ನುವ ಕಾಲದಲ್ಲಿಯೇ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಹಲವು ದೇಶಗಳಲ್ಲಿ ಉನ್ನತ ವ್ಯಾಸಾಂಗ ಮಾಡಿ ವಿಶ್ವಜ್ಞಾನಿ ಎನಿಸಿಕೊಂಡ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸರಿ ಸಮಾನರಾದವರು ಯಾರು ಇಲ್ಲ. ಬಾಲ್ಯದಲ್ಲಿಯೇ ಸಾಕಷ್ಟು ಸವಾಲುಗಳನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡಿ. ದೇಶ ವಿದೇಶಗಳಲ್ಲಿ ಶಿಕ್ಷಣ ಪಡೆದರು. ಅವರಲ್ಲಿದ್ದ ಅಪಾರ ಜ್ಞಾನದಿಂದ ಇಡೀ ವಿಶ್ವದಲ್ಲೇ ಶ್ರೇಷ್ಟವಾಗಿರುವ ಲಿಖಿತ ಸಂವಿಧಾನವನ್ನು ಭಾರತ ದೇಶಕ್ಕೆ ಕೊಟ್ಟರು. ಇಂತಹ ಮೇಧಾವಿ ವಿಶ್ವಜ್ಞಾನಿಯ ಜನ್ಮದಿನವನ್ನು ‘ ವಿಶ್ವಜ್ಞಾನ ‘ ದಿನವನ್ನಾಗಿ ಎಲ್ಲಾ ದೇಶಗಳಲ್ಲಿಯೂ ಆಚರಿಸಲಾಗುತ್ತಿದೆ ” ಎಂದರು.
” ಅಂಬೇಡ್ಕರ್ ಅವರು ಎಲ್ಲಾ ಶೋಷಿತ ಸಮುದಾಯವು ಸ್ವಾಭಿಮಾನದ ಬದುಕು ಕಟ್ಟಿಕೊಡಲು ಅಪಾರವಾಗಿ ಶ್ರಮಿಸಿದ್ದಾರೆ. ಆದರೆ, ಅಂಬೇಡ್ಕರ್ ಅವರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಲಾಗುತ್ತಿದೆ. ಇದು ಸರಿಯಲ್ಲ. ಕಾರ್ಮಿಕರಿಗಾಗಿಯೇ ಮಸೂದೆ ತಂದು 8 ಗಂಟೆಗಳ ಕಾಲ ಕೆಲಸದ ಅವಧಿಯನ್ನು ನಿಗದಿ ಮಾಡಿದರು. ಎಲ್ಲಾ ಮಹಿಳೆಯರಿಗೂ ಮತದಾನದ ಹಕ್ಕು ನೀಡಿ ಮುಖ್ಯವಾಹಿನಿಗೆ ಬರಲು ಅನುಕೂಲ ಮಾಡಿಕೊಟ್ಟರು. ಈ ಮೂಲಕ ಎಲ್ಲಾ ವರ್ಗದ ಜನರಿಗೆ ಅವಕಾಶಗಳನ್ನು ಅಂಬೇಡ್ಕರ್ ಕಲ್ಪಿಸಿಕೊಟ್ಟಿದ್ದಾರೆ. ಎಂಬುದನ್ನು ಮನಗಾಣಬೇಕಿದೆ ” ಎಂದು ಹೇಳಿದರು.

ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ ” ಸಮ ಸಮಾಜ ನಿರ್ಮಾಣ ಮಾಡಿ ಶೋಷಿತ ವರ್ಗ ಏಳಿಗೆಯಾಗಲು ತಮ್ಮ ಜೀವನದುದ್ದಕ್ಕೂ ಅವಿರತವಾಗಿ ಹೋರಾಟ ಮಾಡಿದ ಮಹಾನ್ ಮೇರು ನಾಯಕರುಡಾ.ಬಿ.ಆರ್. ಅಂಬೇಡ್ಕರ್. ಶಾಂತಿ, ಸಹನೆ, ತಾಳ್ಮೆಯಿಂದ ಸಮಾಜದ ಶ್ರೇಯೋಭಿವೃದ್ದಿಗಾಗಿ ತಿದ್ದಿ ಜನರ ಬದುಕು ಹಸನು ಮಾಡಲು ನಿರಂತರವಾಗಿ ಶ್ರಮಿಸಿದರು. ಉನ್ನತ ಶಿಕ್ಷಣ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ಕರೆಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟ, ಮಹತ್ವವನ್ನು ಅರಿಯಬೇಕು. ಅವರ ಆದರ್ಶ, ತ್ಯಾಗ, ಹೋರಾಟದ ಗುಣಗಳನ್ನು ಬದುಕಿನಲ್ಲಿ ಸ್ವಲ್ಪವಾದರೂ ಅಳವಡಿಸಿಕೊಳ್ಳಬೇಕು. ಇದರಿಂದ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ” ಎಂದು ಹೇಳಿದರು
ಟಿ.ನರಸೀಪುರದ ನಳಂದ ಬುದ್ದ ವಿಹಾರದ ಬೋಧಿರತ್ನ ಬಂತೇಜಿಯವರು ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಶಿಸ್ತು, ಸಂಯಮಕ್ಕೆ ಹೆಸರಾದವರು. ತುಳಿತಕ್ಕೆ ಒಳಗಾದ ಸರ್ವಜನರ ಉದ್ದಾರಕ್ಕಾಗಿ ಸರ್ವವನ್ನು ತ್ಯಾಗ ಮಾಡಿದರು. ಅವರ ವಿಚಾರ, ಆದರ್ಶಗಳನ್ನು ತಿಳಿದು. ಅದರ, ಪರಿಪಾಲನೆ ಮಾಡುವುದು ಮುಖ್ಯವಾಗಿದೆ. ನೈತಿಕ ಭಯ, ನೈತಿಕ ನಾಚಿಕೆ ಇದ್ದಾಗ ಒಳ್ಳೆಯದನ್ನು ಮಾಡುವ ಗುಣಗಳು ಮೈಗೂಡಿ ಸುಧಾರಣೆ ಸಾಧ್ಯವಾಗಲಿದೆ ” ಎಂದರು.
ಅಧ್ಯಯನ ಪ್ರವಾಸಕ್ಕಾಗಿ ವಿದೇಶಕ್ಕೆ ತೆರಳಿರುವ ಪಶು ಸಂಗೋಪನೆ ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ಅವರು ಕಳುಹಿಸಿದ್ದ ಸಂದೇಶವನ್ನು ವಾಚಿಸಿದ ಜಿಲ್ಲಾಧಿಕಾರಿ ಶಿಲ್ಪನಾಗ್ ” ಶ್ರೇಷ್ಠ ನಾಯಕರು ಸಂವಿಧಾನದ ದೊಡ್ಡ ಶಕ್ತಿಯಾಗಿದ್ದ ಅಂಬೇಡ್ಕರ್ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. 30 ವರ್ಷಗಳ ಕಾಲ ಅಧ್ಯಯನ ಮಾಡಿ ಅಪಾರ ಪಾಂಡಿತ್ಯಗಳಿಸಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯಬೇಕು. ಅವರ ಹೋರಾಟ, ಬದುಕು ನಮ್ಮೆಲ್ಲರಿಗೆ ಮಾದರಿ ” ಎಂದರು.

ಭೋಗಾಪುರದ ಸರ್ಕಾರಿ ಪ್ರಥಮ ದರ್ಜೆ ವಸತಿ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ ” ಅಂಬೇಡ್ಕರ್ ಅವರು ಕೇವಲ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಹಿಂದುಳಿದ ಜನಾಂಗದವರಿಗಾಗಿ ಮಾತ್ರ ಹೋರಾಡಲಿಲ್ಲ. ಎಲ್ಲಾ ಜಾತಿ ಧರ್ಮಗಳ ಮಹಿಳೆಯರ ವಿಮೋಚನೆ ಹಕ್ಕುಗಳಿಗಾಗಿ ಹೋರಾಟ ಮಾಡಿದರು. ನಡೆ-ನುಡಿಯಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಅಂಬೇಡ್ಕರ್ ಅವರು ಶಿಕ್ಷಣ, ಸ್ವಾಭಿಮಾನ, ವೈಯಕ್ತಿತ ಗುಣ ಲಕ್ಷಣಗಳಿಗೆ ಆದರ್ಶಪ್ರಾಯರಾಗಿದ್ದಾರೆ ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ‘ ಅರಿವೇ ಅಂಬೇಡ್ಕರ್ ‘ ಸಂಚಿಕೆ ಬಿಡುಗಡೆ; ಓದಿನಲ್ಲಿ ಜೀವವಿದೆ, ಜೀವನವಿದೆ : ಲೇಖಕ ನಾ. ದಿವಾಕರ್
ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ಚಂದ್ರು, ನಗರಸಭೆ ಸದಸ್ಯಸ್ಯೆ ಎಂ.ಕಲಾವತಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ಧೇಶಕ ಎನ್.ಮುನಿರಾಜು, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ದೀಪಾ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.