ಕನ್ನಡದ ಸಂವೇದನಾಶೀಲ ಬರಹಗಾರ, ಚಿಂತಕರಾದ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರ ನೆನಪಿಗಾಗಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆಯಲ್ಲಿರುವ ‘ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರ’ದ ಆವರಣದಲ್ಲಿ ‘ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ’ವನ್ನು ಸ್ಥಾಪಿಸಲಾಗಿದೆ ಎಂದು ನಿರ್ದೇಶಕ ಡಾ. ಕೆ ಸಿ ಶಿವಾರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆ ಪ್ರಕಟಣೆ ಹೊರಡಿಸಿದ್ದು, “ಸಾಹಿತ್ಯ, ವಿಮರ್ಶೆ, ಅನುವಾದ, ವಿಜ್ಞಾನ, ತಂತ್ರಜ್ಞಾನ, ಪರಿಸರ, ಫೋಟೋಗ್ರಫಿ, ಕ್ಯಾಲಿಗ್ರಫಿ ಇವು ತೇಜಸ್ವಿಯವರ ಆಸಕ್ತಿಯ ಕ್ಷೇತ್ರಗಳಾಗಿದ್ದವು. ಈ ಹಿನ್ನಲೆಯಲ್ಲಿ ಚರ್ಚೆ, ಸಂವಾದ, ಸಂಶೋಧನೆ, ಕಮ್ಮಟ, ವಿಚಾರ ಸಂಕಿರಣಗಳನ್ನು ಈ ಕೇಂದ್ರದಲ್ಲಿ ವರ್ಷಪೂರ್ತಿ ಹಮ್ಮಿಕೊಳ್ಳಲಾಗುತ್ತದೆ. ಹಾಗೆಯೇ ಉನ್ನತ ಸಂಶೋಧನೆಗಳಿಗೂ ಇಲ್ಲಿ ಅವಕಾಶವಿದೆ” ಎಂದು ಹೇಳಿದ್ದಾರೆ.
“ಎಲ್ಲ ಚಟುವಟಿಕೆಗಳಿಗೆ ಅಧಿಕೃತ ಚಾಲನೆ ನೀಡಲು ಏಪ್ರಿಲ್ 27, 28ರಂದು ಸಂಧ್ಯಾಸ್ಪತಿ ಮಂದಿರದಲ್ಲಿ ‘ಪೂರ್ಣಚಂದ್ರ ಕನ್ನಡ ಸಾಂಸ್ಕೃತಿಕ ಅಧ್ಯಯನ ಕೇಂದ್ರ’ದ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಹಾಗೆಯೇ ತೇಜಸ್ವಿಯವರ ಫೋಟೋ ಗ್ಯಾಲರಿಯನ್ನು ಉದ್ಘಾಟಿಸಲಾಗುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದೊಂದಿಗೆ ಈ ಕೇಂದ್ರದ ಉದ್ಘಾಟನೆಯ ಪ್ರಯುಕ್ತ ನಡೆಯಲಿರುವ ಅಧ್ಯಯನ ಶಿಬಿರವನ್ನು ಆಯೋಜಿಸಲಾಗಿದೆ. ಅಂದು ಎರಡು ದಿನಗಳ ಕಾಲ ಉದ್ಘಾಟನಾ ಸಮಾರಂಭದ ಜತೆಗೆ ತೇಜಸ್ವಿಯವರ ಆಸಕ್ತಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಚರ್ಚೆ, ಸಂವಾದಗಳನ್ನೊಳಗೊಂಡ ಅಧ್ಯಯನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದರ ಜತೆಗೆ ಕವಿಗೋಷ್ಠಿ, ನಾಟಕ ಪ್ರದರ್ಶನ ಮತ್ತು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಕೂಡ ನಡೆಯಲಿವೆ” ಎಂದರು.
“ಈ ಸಮಾರಂಭದಲ್ಲಿ ನಾಡಿನ ಸಾಂಸ್ಕೃತಿಕ ಲೋಕದ ಚಿಂತಕರು, ಸಂವೇದನಾಶೀಲ ಯುವ ಬರಹಗಾರರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾಡಿನ ಸಾಹಿತ್ಯಾಸಕ್ತರು ಭಾಗವಹಿಸಲು ಅವಕಾಶವಿದೆ. ತೇಜಸ್ವಿಯವರ ಆಸಕ್ತಿಯ ಕ್ಷೇತ್ರಗಳನ್ನು ಕುರಿತು ಆ ಎರಡೂ ದಿನ ಪ್ರಬಂಧ ಮಂಡಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಬಂಧ ಮಂಡಿಸಲು ಆಸಕ್ತಿ ಇರುವವರು 9448900999 ಈ ವಾಟ್ಸ್ಯಾಪ್ ಸಂಖ್ಯೆಗೆ ತಮ್ಮ ವಿಷಯಕ್ಕೆ ಸಂಬಂಧಿಸಿದ ಸಾರಲೇಖವನ್ನು 10 ದಿನಗಳ ಒಳಗೆ ಕಳುಹಿಸಿಕೊಡಬೇಕು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಕ್ಷಣೆ ನೀಡುವ ಗೃಹರಕ್ಷಕ ಸಿಬ್ಬಂದಿಗಳಿಗೆ ಉತ್ತಮ ಕಚೇರಿಯ ರಕ್ಷಣೆಯಿಲ್ಲ; ಗಮನಿಸುವರೇ ಅಧಿಕಾರಿಗಳು?
“ನೋಂದಣಿ ಮಾಡಿಸಿದವರಿಗೆ ಮಾತ್ರ ಸ್ಮರಣಿಕೆ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. ಅಗತ್ಯವಿದ್ದವರಿಗೆ OOD ಸೌಲಭ್ಯ ಒದಗಿಸಲಾಗುವುದು. ಸಾಹಿತ್ಯಾಸಕ್ತರು ಸಾರ್ವಜನಿಕರು ಭಾಗವಹಿಸಲು ಮುಕ್ತವಾದ ಅವಕಾಶವಿದೆ” ಎಂದು ಹೇಳಿದ್ದಾರೆ.