ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿನಿಲಯ(ಬಿಸಿಎಂ ಹಾಸ್ಟೆಲ್)ದ ಆಯುಕ್ತರ ಆದೇಶದಂತೆ ನೀಡಬೇಕಿದ್ದ ಆಹಾರ ಪಟ್ಟಿಯನ್ನು ಬದಲಿಸಿ ಸ್ಥಳೀಯ ಅಧಿಕಾರಿಗಳು ತಮ್ಮ ಇಚ್ಛೆಯಂತೆ ಆಹಾರ ಒದಗಿಸುತ್ತಿದ್ದು, ಆಯುಕ್ತರ ಆಹಾರ ಪಟ್ಟಿ ಆದೇಶ ಉಲ್ಲಂಘನೆ ಮಾಡಿತ್ತಿದ್ದಾರೆಂದು ಆರೋಪಿಸಿ ವಸತಿ ನಿಲಯಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಗಂಗಾವತಿ ತಾಲೂಕು ಪಂಚಾಯತ್ ಎದುರು ಎಸ್ಎಫ್ಐ ಸಂಘಟನೆಯ ನೇತೃತ್ವದಲ್ಲಿ ಬಿಸಿಎಂ ಇಲಾಖೆಯ ವಿವಿಧ ವಸತಿ ನಿಲಯ ವಿದ್ಯಾರ್ಥಿಗಳು ಪ್ರತಿಭಟಿಸಿ ತಾಲೂಕು ಪಂಚಾಯತಿ ಇಒ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರು ಮಾತನಾಡಿ, “ಗಂಗಾವತಿ ತಾಲೂಕಿನಾದ್ಯಂತ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಆಹಾರಪಟ್ಟಿ ಹಾಗೂ ಗ್ರಂಥಾಲಯ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದ್ದು, ಹಲವಾರು ಬಾರಿ ಪ್ರತಿಭಟನೆ ಮೂಲಕ ಮನವಿ ಮಾಡಿದರು ಪ್ರಯೋಜನವಾಗಿಲ್ಲ” ಎಂದು ದೂರಿದರು.
“ತಾಲೂಕಿನಾದ್ಯಾಂತ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಗ್ರಂಥಾಲಯ ಹಾಗೂ ಗಣಕಯಂತ್ರ, ಶೌಚಾಲಯ, ಕುಡಿಯುವ ನೀರು ಮತ್ತು ಸ್ವಚ್ಛತೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ವಸತಿ ನಿಲಯದಲ್ಲಿ ಸ್ವಚ್ಛತೆ ಇಲ್ಲದ ಕಾರಣ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗುತ್ತಿದೆ” ಎಂದರು.

“ರಾಜ್ಯ ಸರ್ಕಾರ ಮತ್ತು ಆಯುಕ್ತರ ಕಚೇರಿ, ʼವಿದ್ಯಾರ್ಥಿಗಳು ಅಪೌಷ್ಠಿಕತೆಯಿಂದ ಬಳಲಬಾರದುʼ ಎಂದು ಸರ್ಕಾರ ಪೌಷ್ಠಿಕ ಆಹಾರವನ್ನು ನೀಡಬೇಕಾಗಿ ಆಹಾರ ಪಟ್ಟಿ ತಯಾರಿಸಿದೆ. ಆದರೆ ಸ್ಥಳಿಯ ಬಿಸಿಎಂ ಕಲ್ಯಾಣಾಧಿಕಾರಿಗಳು ಆಯುಕ್ತರ ಆದೇಶವನ್ನು ಸಂಫೂರ್ಣ ಉಲ್ಲಂಘನೆ ಮಾಡಿ ಬೆಲೆ ಏರಿಕೆಯ ನೆಪ ಒಡ್ಡಿ ವಿದ್ಯಾರ್ಥಿಗಳ ಅನ್ನಕ್ಕೆ ಕನ್ನ ಹಾಕಿದ್ದಾರೆ” ಎಂದು ಆರೋಪಿಸಿದರು.
“ಜಾರಿಯಲ್ಲಿರುವ ಆಹಾರ ಪಟ್ಟಿ ಹಿಂಪಡೆಯಬೇಕು. ಆಯುಕ್ತರ ಆದೇಶದಂತೆ ಹಳೆಯ ಪಟ್ಟಿಯಂತೆ ಆಹಾರ ನೀಡಬೇಕು. ವಸತಿ ನಿಲಯಗಳಲ್ಲಿ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಒದಗಿಸಬೇಕು. ಎಲ್ಲ ವಸತಿ ನಿಲಯಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು” ಎಂದು ಬೇಡಿಕೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಕುಡಿಯುವ ನೀರಿಗೆ ಹಾಹಾಕಾರ; ನದಿಗಳಲ್ಲಿ ಕೊಳವೆ ಬಾವಿ ಕೊರೆತ
ಅಮರೇಶ್ ಕಡಗದ, ಜಿಲ್ಲಾ ಅಧ್ಯಕ್ಷ ಗ್ಯಾನೇಶ್ ಕಡಗದ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಈಚನಾಳ್, ತಾಲೂಕು ಅಧ್ಯಕ್ಷ ನಾಗರಾಜ್ ಯು, ತಾಲೂಕು ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಮುಖಂಡರಾದ ರಮೇಶ್, ಮಲ್ಲೇಶ್, ಮಂಜುನಾಥ್, ಅಕ್ಬರ್, ವಿದ್ಯಾರ್ಥಿಗಳಾದ ಸಹನಾ, ಶ್ರೀದೇವಿ, ಜ್ಯೋತಿ, ಅನನ್ಯ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.