‘ಗೃಹಜ್ಯೋತಿ’ ಮತ್ತು ‘ಅನ್ನಭಾಗ್ಯ’ ಯೋಜನೆ ಇಂದಿನಿಂದ ಪ್ರಾರಂಭವಾಗುತ್ತಿದೆ. ಗೃಹಜ್ಯೋತಿ ಯೋಜನೆಯ ಬಿಲ್ಲು ಆಗಸ್ಟ್ ತಿಂಗಳಲ್ಲಿ ನೀಡಲಾಗುವುದು. ಅನ್ನಭಾಗ್ಯದ ಹಣವನ್ನು ಈ ತಿಂಗಳು 10ರ ನಂತರ ಕೊಡಲು ಪ್ರಾರಂಭ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಜುಲೈ ತಿಂಗಳಲ್ಲಿ ಅಕ್ಕಿ ಬದಲಿಗೆ ದುಡ್ಡನ್ನು ಒಂದನೇ ತಾರೀಖಿನಿಂದ ಕೊಡುತ್ತೇವೆ ಎಂದು ಹೇಳಿಲ್ಲ. ಈ ತಿಂಗಳ ಹಣವನ್ನು ಈ ತಿಂಗಳಲ್ಲಿಯೇ ನೀಡಲಾಗುವುದು” ಎಂದರು.
ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಸಭೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, “ವಿರೋಧ ಪಕ್ಷ ಅವರ ಒಳಜಗಳವನ್ನು ಮೊದಲು ಸರಿಪಡಿಸಿಕೊಳ್ಳಲಿ” ಎಂದರು.