ಮೆಟ್ರೋ ಆವರಣ ಹಾಗೂ ರೈಲುಗಳ ಒಳಗೆ ಪಾನ್, ಗುಟ್ಕಾದಂತಹ ತಂಬಾಕು ಆಧಾರಿತ ಉತ್ಪನ್ನಗಳನ್ನು ಜಗಿದು ಎಲ್ಲೆಂದರಲ್ಲಿ ಉಗುಳುವವರಿಗೆ ಬಿಎಂಆರ್ಸಿಎಲ್ ದಂಡದ ಎಚ್ಚರಿಕೆ ನೀಡಿದೆ.
ಮೆಟ್ರೋ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಪ್ರಯಾಣಿಕರು ಗುಟ್ಕಾ ಮತ್ತು ಪಾನ್ ಮಸಾಲಾದಂತಹ ಉತ್ಪನ್ನಗಳನ್ನು ಜಗಿದು ಉಗುಳುವ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮತ್ತು ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸ ಹಾಕುವುದನ್ನು ತಪ್ಪಿಸುವುದಕ್ಕಾಗಿ ತಪ್ಪಿತಸ್ಥರ ವಿರುದ್ಧ ದಂಡದಂತಹ ಕಠಿಣ ಕ್ರಮ ಜರುಗಿಸಲಿದೆ.
ಈಗ ಎಲ್ಲಾ ರೈಲುಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಕಣ್ಗಾವಲು ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ತಪ್ಪಿತಸ್ಥ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ನಿಯಮಗಳ ಪ್ರಕಾರ ದಂಡ ವಿಧಿಸಲಾಗುವುದು. ಅಂತಹ ವಸ್ತುಗಳನ್ನು ಲೋಹ ಶೋಧಕಗಳ ಮೂಲಕ ಪತ್ತೆಹಚ್ಚಲು ಸಾಧ್ಯವಾಗದ ಕಾರಣ, ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಅನುಮಾನ ಬಂದ ಜಾಗಗಳಲ್ಲಿ ಆಗಾಗ್ಗೆ, ತಪಾಸಣೆಗಳನ್ನು ಜಾರಿಗೆ ತರಲು ಬಿಎಂಆರ್ಸಿಎಲ್ ನಿರ್ಧರಿಸಿದೆ.

ಅಂತಹ ಪ್ರಯಾಣಿಕರನ್ನು ಸೂಕ್ತ ರೀತಿಯಲ್ಲಿ ಗಮನಿಸಲು ಜೊತೆಗೆ ಜನರೊಂದಿಗೆ ಈ ಕುರಿತು ಸಂವೇದನಾಶೀಲ ನಡವಳಿಕೆ ಹೊಂದಿರುವುದರ ಬಗ್ಗೆ, ಪ್ಲಾಟ್ಫಾರ್ಮ್ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಪ್ರಯಾಣಿಕರ ನಡವಳಿಕೆಯನ್ನು ಗಮನಿಸುವುದರ ಜೊತೆಗೆ ಯಾವುದೇ ಉಲ್ಲಂಘನೆಗಳನ್ನು ಗಮನಿಸಿದ ಕೂಡಲೇ ಸಂಬಧಿಸಿದ ಪ್ಲಾಟ್ಫಾರ್ಮ್ ಭದ್ರತಾ ಸಿಬ್ಬಂದಿಗೆ ಎಚ್ಚರಿಕೆ ನೀಡಲು ಕೇಂದ್ರ ಭದ್ರತಾ ಕಣಾವಲು ಕೊಠಡಿಗೆ ಈಗಾಗಲೇ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರು | ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಕಿರುಕುಳ; ಪೊಲೀಸರಿಬ್ಬರು ತಪ್ಪಿತಸ್ಥರೆಂದು ಘೋಷಣೆ
ಹೆಚ್ಚುವರಿಯಾಗಿ, ಎಲ್ಲ ಮೆಟ್ರೋ ಪ್ರಯಾಣಿಕರಿಗೆ ಸ್ವಚ್ಚ ಮತ್ತು ಹೆಚ್ಚು ಆಹ್ಲಾದಪೂರ್ಣ ಪ್ರಯಾಣಾನುಭವದ ಖಾತ್ರಿ ಮಾಡಿಕೊಳ್ಳಲು, ಮೆಟ್ರೋ ಆವರಣದಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸದಂತೆ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ವ್ಯಾಪಕ ಜಾಗೃತಿ ಅಭಿಯಾನಗಳನ್ನು ಪ್ರಾರಂಭಿಸುವುದರ ಬಗ್ಗೆ ಯೋಜನೆ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.