- ‘ಮೋಸಗಾರರಾದ ಕಾಂಗ್ರೆಸ್ನವರನ್ನು ಜನರು ತಿರಸ್ಕರಿಸಲಿದ್ದಾರೆ’
- ಗೋಹತ್ಯಾ ನಿಷೇಧ ಕಾಯ್ದೆ ರದ್ದು ಮಾಡುವುದನ್ನು ಕೈಬಿಡಿ: ಎಚ್ಚರಿಕೆ
ಕೇಂದ್ರದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವವರೆಗೂ ನಾನು ವಿಶ್ರಮಿಸುವುದಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ವಾಗ್ದಾನ ಮಾಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಜನರು ಬೆಂಬಲಿಸಲಿದ್ದಾರೆ. ಮೋಸಗಾರರಾದ ಕಾಂಗ್ರೆಸ್ನವರನ್ನು ಜನರು ತಿರಸ್ಕರಿಸಲಿದ್ದಾರೆ” ಎಂದರು.
“ಅಲ್ಲೊಬ್ಬರು, ಇಲ್ಲೊಬ್ಬರು ಪಕ್ಷದ ನಾಯಕರ ವಿರುದ್ಧ ಮಾತನಾಡುವುದು ಮತ್ತು ಆಪಾದನೆ ಮಾಡುವುದು ಸೂಕ್ತವಲ್ಲ ಎಂದು ಮುಖಂಡರು ಸೂಚಿಸಿದ್ದಾರೆ. ಬಿಜೆಪಿಯಲ್ಲಿ ಬಹಿರಂಗ ಹೇಳಿಕೆ ಕೊಡುವ ಪ್ರಶ್ನೆ ಇಲ್ಲ. ನಮ್ಮ ಪಕ್ಷದಲ್ಲಿ ಇನ್ನು ಮುಂದೆ ಅಶಿಸ್ತು ಇರುವುದಿಲ್ಲ ಎಂಬ ವಿಶ್ವಾಸ ನಮಗೆಲ್ಲರಿಗೂ ಇದೆ” ಎಂದರು.
“ಗ್ಯಾರಂಟಿಗಳನ್ನು ಕೊಟ್ಟು ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅವರು ಇದೀಗ ವಿದ್ಯುತ್ ದರ ಏರಿಸಿ ಜನರ ಮೇಲೆ ಬರೆ ಎಳೆದಿದ್ದಾರೆ. 200 ಯೂನಿಟ್ ವಿದ್ಯುತ್ ಉಚಿತ ಎಂದಿದ್ದರು. ವಿದ್ಯುತ್ ದರ ಏರಿಕೆ, ದಿನ ಬಳಕೆ ವಸ್ತುಗಳ ದರ ಏರಿಕೆಯಿಂದ ಜನಜೀವನ ಕಷ್ಟವಾಗಿದೆ. ನಿರುದ್ಯೋಗ ಭತ್ಯೆ, ಗೃಹಿಣಿಗೆ 2 ಸಾವಿರ ಕೊಡುವುದಾಗಿ ಹೇಳಿದ್ದು, ಅದು ಜಾರಿ ಆಗಿಲ್ಲ” ಎಂದು ಕಿಡಿಕಾರಿದರು.
“ಅಕ್ಕಿ ವಿಚಾರದಲ್ಲಿ ಕೇಂದ್ರವನ್ನು ಎಳೆದು ತಂದದ್ದು ಸರಿಯಲ್ಲ. 10 ಕೆಜಿ ಅಕ್ಕಿ ಕೊಡಲಾಗದುದಕ್ಕೆ ಹಣ ಕೊಡಲು ಕೇಳಿದ್ದೆವು. ಈಗ 5 ಕೆಜಿಗೆ 170 ರೂ. ಕೊಡುವುದಾಗಿ ಹೇಳಿದ್ದಾರೆ. ಕೇಂದ್ರದ 5 ಕೆಜಿಗೂ ನಿಮಗೂ ಸಂಬಂಧ ಇಲ್ಲ. ಆದ್ದರಿಂದ ಮಾರುಕಟ್ಟೆ ದರದಂತೆ ಪ್ರತಿ ಮನೆಯ ಪ್ರತಿ ವ್ಯಕ್ತಿಗೂ 10 ಕೆಜಿ ಅಕ್ಕಿಗೆ ಹಣ ಕೊಡಿ ಎಂದು ಆಗ್ರಹಿಸಿದರು. ಈ ವಿಚಾರದಲ್ಲೂ ಕಾಂಗ್ರೆಸ್ ಟೋಪಿ ಹಾಕಿದೆ” ಎಂದು ದೂರಿದರು.
“ಮನೆಯೊಡತಿಗೆ 2 ಸಾವಿರ ಕೊಡುವ ವಿಚಾರದಲ್ಲೂ ಮೋಸ ಆಗಿದೆ. ಇದರ ದಿನಾಂಕ ಪ್ರಕಟಿಸಿ ಎಂದು ಒತ್ತಾಯಿಸಿದರು. ಉಚಿತ ಬಸ್ ವಿಚಾರದಲ್ಲೂ ಮೋಸವಾಗಿದೆ; ಖಾಸಗಿ ಬಸ್ಸಿನಲ್ಲಿ ಓಡಾಡುವವರು ನಿಮ್ಮ ಮತದಾರರಲ್ಲವೇ? ಆಟೋ ರಿಕ್ಷಾದವರ ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕುವಂತಾಗಿದೆ. ಖಾಸಗಿ ಬಸ್ ಸಿಬ್ಬಂದಿ ಪರಿಸ್ಥಿತಿ ಸುಧಾರಣೆ ಹೇಗೆ” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಭಿನ್ನಮತ ಶಮನ ಸಭೆಯಲ್ಲಿಯೇ ಬೊಮ್ಮಾಯಿ-ಪ್ರತಾಪ್ ಸಿಂಹ ನಡುವೆ ಜಟಾಪಟಿ!
ಗೋಹತ್ಯಾ ನಿಷೇಧ ಕಾಯ್ದೆ ರದ್ದು ಕೈಬಿಡಿ
“ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುವ ಪ್ರಸ್ತಾಪ ವಿರೋಧಿಸಿ, ಸಾಧು ಸಂತರ ಆಶಯದಂತೆ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಬಾರದು. ಗೋಹತ್ಯಾ ನಿಷೇಧ ಕಾಯ್ದೆ ರದ್ದು ಮಾಡುವುದನ್ನು ಕೈಬಿಡಿ. ದ್ವೇಷದ ರಾಜಕಾರಣ ಮಾಡಬೇಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳ ಸ್ಟೋರಿ ನೋಡಲಿ” ಎಂದು ಆಗ್ರಹಿಸಿದರು.
“ಬಾಂಬೆ ಬಾಯ್ಸ್ ವಿಚಾರ ನಾನು ಪ್ರಸ್ತಾಪ ಮಾಡಿಲ್ಲ. ಬಿಜೆಪಿಯಲ್ಲಿ ತುಂಬ ಅಶಿಸ್ತಿದೆ; ಇದಕ್ಕೇನು ಕಾರಣ ಎಂದು ಪತ್ರಕರ್ತರು ಈಚೆಗೆ ಪ್ರಶ್ನಿಸಿದ್ದರು. ಕಾಂಗ್ರೆಸ್ ಅಶಿಸ್ತು ನಮ್ಮ ಪಕ್ಷದ ಮೇಲೂ ಬೀಸುತ್ತಿದೆ ಎಂದು ಹೇಳಿದ್ದೆ. ಅದನ್ನು ಬಿಜೆಪಿ ಸೇರಿದ 17 ಜನ ಶಾಸಕರ ಜೊತೆ ಸೇರಿಸುವ ಪ್ರಯತ್ನ ನಡೆಯಿತು. ಒಂದು ಟಿವಿಯಿಂದ ಈ ಸಮಸ್ಯೆ ಆಗಿದೆ. ಸಂಬಂಧಿತ ಟಿವಿ ಮುಖ್ಯಸ್ಥರ ಜೊತೆ ಮಾತನಾಡಿ ವಿಷಯ ತಿಳಿಸಿದ್ದೇನೆ” ಎಂದರು.
ಜು.4ರಂದು ಹೋರಾಟ: ಎನ್.ರವಿಕುಮಾರ್
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ರಾಜ್ಯಾಧ್ಯಕ್ಷರಾದ ನಳಿನ್ಕುಮಾರ್ ಅವರ ನೇತೃತ್ವದಲ್ಲಿ ಇದೇ 3ರಂದು ಸಂಜೆ ರಾಜ್ಯದ ಪದಾಧಿಕಾರಿಗಳು, ಶಾಸಕರು ಸೇರಿದಂತೆ ಮುಖಂಡರ ಸಭೆ ಕರೆಯಲಾಗಿದೆ. ಹೋರಾಟದ ಬಗ್ಗೆ ಸಭೆ ಚರ್ಚಿಸಲಿದೆ. ಕಂಡಿಷನ್ ಕೈಬಿಟ್ಟು ಗ್ಯಾರಂಟಿ ಅನುಷ್ಠಾನಕ್ಕೆ ತರಲು ಆಗ್ರಹಿಸಿ ಜು. 4ರಂದು ಹೋರಾಟ ನಡೆಯಲಿದೆ” ಎಂದು ತಿಳಿಸಿದರು.
“ಕೇಂದ್ರದ ಬಿಜೆಪಿ ಸರ್ಕಾರಕ್ಕೆ 9 ವರ್ಷ ತುಂಬುವ ಹಿನ್ನೆಲೆಯಲ್ಲಿ ನಮ್ಮ ಕಾರ್ಯವೈಖರಿ, ಬಿಬಿಎಂಪಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆ ಚುನಾವಣೆಯಲ್ಲಿ ನಮ್ಮ ಕಾರ್ಯತಂತ್ರದ ಕುರಿತು 3ರ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಪಕ್ಷದೊಳಗಿನ ವಿಚಾರಗಳನ್ನು ಪಕ್ಷದಲ್ಲೇ ಚರ್ಚಿಸಲು ಸೂಚಿಸಿದ್ದು, ಅದನ್ನು ಮುಖಂಡರು ಒಪ್ಪಿಕೊಂಡಿದ್ದಾರೆ” ಎಂದರು.
ಮುಂದಿನ ಚುನಾವಣೆ ನಂತರ ನಿಮಗೆ ಪೂರ್ಣ ವಿಶ್ರಾಂತಿ ಖಚಿತ.
ಈಶಣ್ಣ ನೀವು ಆರಿಸಿ ಬರುವುದೇ ಕಥೆ ಇದೆ,,, ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸುವರಂತೆ,,, ಜನರಿಗೆ ಒಳ್ಳೆಯ ಮನರಂಜನೆ ನೀಡುವಿರಿ