“ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನುಗಳನ್ನು ರೂಪಿಸುವ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸಂಕುಚಿತಗೊಳಿಸುವ ನಿಟ್ಟಿನಲ್ಲಿ ರಾಜ್ಯಪಾಲರಾಗಲಿ, ರಾಷ್ಟ್ರಪತಿಗಳಾಗಲಿ ನಡೆದುಕೊಳ್ಳಬಾರದು. ರಾಜಕೀಯ ಕಾರಣಗಳಿಗಾಗಿ ಚುನಾಯಿತ ಸರ್ಕಾರದ ಕಾನೂನುಗಳಿಗೆ ಅನುಮೋದನೆ ಕೊಡಲು ನಿರಾಕರಿಸಬಾರದು ಅಥವಾ ತಡೆಹಿಡಿಯಬಾರದು” ಎಂದು AILU ಬೆಂಗಳೂರು ಜಿಲ್ಲಾಧ್ಯಕ್ಷರಾದ ವೆಂಕಟೇಶ್ ಗೌಡ ಹೇಳಿದ್ದಾರೆ.
ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೇಳಿಕೆ, ಸುಪ್ರಿಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಹಾಗೂ ಇನ್ನಿತರ ನ್ಯಾಯಮೂರ್ತಿಗಳ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆಯವರ ಬೆದರಿಕೆ ಮತ್ತು ಹಾಸ್ಯಾಸ್ಪದ ಹೇಳಿಕೆ,
ಹಾಗೂ ಕೇಂದ್ರ ಸರ್ಕಾರದ ಭದ್ರತಾ ಲೋಪದಿಂದ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯನ್ನ ಖಂಡಿಸಿ
ಶುಕ್ರವಾರ ಅಖಿಲ ಭಾರತ ವಕೀಲರ ಒಕ್ಕೂಟ(AILU) ನೇತೃತ್ವದಲ್ಲಿ ಸಿಟಿ ಸಿವಿಲ್ ಕೋರ್ಟ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
“ನಮಗೆ ಸ್ವಾತಂತ್ರ್ಯ ಬಂದು 75 ವರ್ಷ ಆಯಿತು. ಈ 75 ವರ್ಷದ ಹಿಂದೆಯೂ ಕೂಡ ವಕೀಲರು ಪ್ರತಿಭಟನೆ ಮಾಡಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ವಕೀಲರು ನ್ಯಾಯಾಂಗ ಮತ್ತು ಸಂವಿಧಾನದ ರಕ್ಷಣೆಗೆ ಪ್ರತಿಭಟನೆ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ 142 ಆರ್ಟಿಕಲ್ನಿಂದ ಬಂದಿರುವ ತೀರ್ಪನ್ನು ಧನಕರ್ ವಿರೋಧಿಸಿದ್ದಾರೆ. ಇದು ‘ನ್ಯೂಕ್ಲಿಯರ್ ಮಿಸೈಲ್’ ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ಪ್ರಜಾಪ್ರಭುತ್ವದ ವಿರುದ್ಧವಾಗಿದೆ. ಸುಪ್ರೀಂ ಕೋರ್ಟ್ಗೆ ಧನಕರ್ ಗೌರವ ಕೊಡದೇ ಇದ್ದಾಗ ಪ್ರಜಾಪ್ರಭುತ್ವಕ್ಕೆ ಹೇಗೆ ಗೌರವ ಕೊಡುತ್ತಾರೆ? ಧನಕರ್ ಅವರು ಪ್ರಜಾಪ್ರಭುತ್ವಕ್ಕೆ ಗೌರವ ಕೊಡಬೇಕು. ನ್ಯಾಯಾಂಗಕ್ಕೆ ಗೌರವ ಕೊಡಬೇಕು. ಈಗಾಗಲೇ ಶಾಸಕಾಂಗ, ಕಾರ್ಯಾಂಗ ಕೆಟ್ಟು ಹೋಗಿದೆ. ಈಗ ಉಳಿದಿರುವುದು ಒಂದೇ ನ್ಯಾಯಂಗ ಅದು ಕೂಡ ಕೆಟ್ಟು ಹೋಗುವ ದಾರಿಯಲ್ಲಿದೆ. ರಾಜ್ಯಾಪಾಲರು ರಾಷ್ಟ್ರಪತಿಗಳು ಒಂದು ಸೈಡ್ ಆಗಿದ್ದಾರೆ. ಇದು ಕಾನೂನು ವಿರುದ್ಧವಾಗಿದೆ” ಎಂದು ತಿಳಿಸಿದ್ದಾರೆ.
“ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಉಪರಾಷ್ಟಪತಿಗಳಾದ ಜಗದೀಪ್ ಧನಕರ್ ಹಾಗೂ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ನೀಡಿದ ಹೇಳಿಕೆಯು ಸುಪ್ರೀಂಕೋರ್ಟ್ ಗೆ ಬೆದರಿಕೆ ಹಾಕುವಂತಿದೆ, ಇದು ತೀವ್ರ ಖಂಡನೀಯ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾಶ್ಮೀರದ ಬಂಡಿಪೋರಾದಲ್ಲಿ ಸೇನಾ ಕಾರ್ಯಾಚರಣೆ: ಎಲ್ಇಟಿಯ ಮುಖ್ಯ ಕಮಾಂಡರ್ ಹತ್ಯೆ
“ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಗೆ ಬೆದರಿಕೆ ಹಾಕಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮತೆಗೆದುಕೊಳ್ಳಬೇಕು. ಸಂವಿಧಾನದ ಉಲ್ಲಂಘನೆಯಾದಾಗ ಅದರ ರಕ್ಷಣೆಗೆ ಸುಪ್ರೀಂ ಕೋರ್ಟ್ ನಿಂತಿರುವುದನ್ನು ಸಹಿಸಲಾಗದೇ ಸುಪ್ರೀಂ ಕೋರ್ಟ್ನ ತೀರ್ಪಿನ ಬಗ್ಗೆ ಅನಗತ್ಯ ಹೇಳಿಕೆ ನೀಡಿರುವುದು ಖಂಡನೀಯ” ಎಂದು ಎ ಐ ಎಲ್ಯು ಜಿಲ್ಲಾ ಉಪಾಧ್ಯಕ್ಷರಾದ ಶರಣ ಬಸವಮರದ್ ಕುಟುಕಿದ್ದಾರೆ.
“ಕೇಂದ್ರ ಸರ್ಕಾರದ ಭದ್ರತಾ ಲೋಪದಿಂದ ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರ ಕೃತ್ಯ ಖಂಡನೀಯ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ 28 ಜನ ಅಮಾಯಕ ಜನರು ಮಡಿದಿದ್ದಾರೆ. ಬಿಹಾರದಲ್ಲಿ ಚುನಾವಣೆ ನಡೆಯುತ್ತಿದೆ. ಇದಕ್ಕೂ ಮುನ್ನ ಈ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಿಜೆಪಿ ಮತ್ತು ಕೆಲ ಮಾಧ್ಯಮಗಳು ಭಯೋತ್ಪಾದನಾ ಕೃತ್ಯವನ್ನು ಒಂದು ಸಮುದಾಯದ ವಿರುದ್ಧ ದ್ವೇಷ ಬಿತ್ತಲು ಬಳಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಇಂಥವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು” ಎಂದು ಎಐಎಲ್ಯು ಜಿಲ್ಲಾ ಸಹಕಾರ್ಯದರ್ಶಿ ಹುಳ್ಳಿ ಉಮೇಶ್ ಆಗ್ರಹಿಸಿದ್ದಾರ.
ಪ್ರತಿಭಟನೆಯಲ್ಲಿ ಎಐಎಲ್ಯು ಜಿಲ್ಲಾ ಕಾರ್ಯದರ್ಶಿಗಳಾದ ಶಿವಾರೆಡ್ಡಿ, ಖಜಾಂಚಿಗಳಾದ ಶಿವಶಂಕರಪ್ಪ, ರಾಜ್ಯ ಮುಖಂಡರಾದ ರಾಮಚಂದ್ರ ರೆಡ್ಡಿ, ಮುರಳೀಧರ ಪೇಶ್ವ, ಎಐಎಲ್ಯು ಮುಖಂಡರಾದ ಎ.ಎಸ್.ಶಿವಾರೆಡ್ಡಿ, ರಂಗಸ್ವಾಮಿ, ರಾಮಲಿಂಗಾರೆಡ್ಡಿ, ರೂಪ.ಬಿ.ಎಂ, ಮುಂತಾದವರು ಭಾಗವಹಿಸಿದ್ದರು.