ಒಳಮೀಸಲಾತಿ ಜಾರಿಗಾಗಿ ಮೇ 5ರಿಂದ 17ರವರೆಗೆ ನಡೆಯುವ ಪರಿಶಿಷ್ಟ ಜಾತಿಗಳ ಸಮೀಕ್ಷೆಯಲ್ಲಿ ಮಾದಿಗ ಸಮುದಾಯದವರು ಕೀಳರಿಮೆಯನ್ನು ಬಿಟ್ಟು ತಮ್ಮ ಜಾತಿ ಹೆಸರನ್ನು ಗಣತಿದಾರರಲ್ಲಿ ಬರೆಸಬೇಕು ಎಂದು ಸಮುದಾಯದ ಮುಖಂಡರು ಕರೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸಭೆ ನಡೆಸಿದ ಸಮುದಾಯದ ಮುಖಂಡರು, ಬೆಂಗಳೂರು ನಗರದಲ್ಲಿ ಗಣತಿಯನ್ನು ಹೇಗೆ ಯಶಸ್ವಿಯಾಗಿ ನೆರವೇರಿಸುವುದು ಮತ್ತು ಮಾದಿಗ ಸಮುದಾಯದ ಲೆಕ್ಕ ತಪ್ಪಿ ಹೋಗದಂತೆ ಹೇಗೆ ಜಾಗೃತಿ ವಹಿಸುವುದು ಎಂಬುದರ ಕುರಿತು ಚರ್ಚಿಸಿದರು.
ಮುಖಂಡರಾದ ಬಸವರಾಜ ಕೌತಾಳ್ ಅವರು ಮಾತನಾಡಿ, “ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಸಮುದಾಯದ ಜನರನ್ನು ಗಣತಿಗೆ ಒಳಪಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇದು ನಮಗೆ ಬಂದಿರುವ ಸದಾವಕಾಶ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರದ ಸಮಸ್ಯೆಗೆ ಅಂತ್ಯ ಹಾಡಬೇಕಿದೆ” ಎಂದರು.
“ನಮ್ಮ ಸಮುದಾಯಗಳು ಇರುವ ವಾರ್ಡ್ಗಳಿಗೆ ಹೋಗಿ ಜಾಗೃತಿ ಮೂಡಿಸಬೇಕಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಇತರೆ ಸಮುದಾಯಗಳು ಈಗಾಗಲೇ ಜಾಗೃತಿ ಮೂಡಿಸುತ್ತಿವೆ. ಮಾದಿಗ ಸಮುದಾಯವು ಇದೇ ನಿಟ್ಟಿನಲ್ಲಿ ಹೆಚ್ಚಿನ ಕೆಲಸಗಳನ್ನು ಮಾಡಬೇಕಿದೆ. ಎ.ಕೆ., ಎ.ಡಿ. ಬೇಡ ಎಂದು ಹೇಳಬೇಕಿದೆ. ಸಮೀಕ್ಷೆಯ ಪಟ್ಟಿಯಲ್ಲಿನ ನಮ್ಮ ಕ್ರಮ ಸಂಖ್ಯೆ 61ರಲ್ಲಿ ಜಾತಿಯನ್ನು ತಪ್ಪದೇ ದಾಖಲಿಸಬೇಕಿದೆ” ಎಂದು ಮನವಿ ಮಾಡಿದರು.
ಹೋರಾಟಗಾರ ಆನಂದ್ ಮಾತನಾಡಿ, “ವಾರ್ಡ್ಗಳಲ್ಲಿನ ವಿದ್ಯಾವಂತ ಹುಡುಗರನ್ನು ಆಯ್ಕೆ ಮಾಡಿಕೊಂಡು, ಇಬ್ಬಿಬ್ಬರನ್ನು ಅಧಿಕಾರಿಗಳ ಜೊತೆ ಬಿಡಬೇಕು. ಅಧಿಕಾರಗಳು ಒಂದು ಕಡೆ ದಾಖಲೆ ಮಾಡಿಕೊಳ್ಳುತ್ತಿದ್ದರೆ, ಸಮುದಾಯದ ಹುಡುಗರೂ ಇನ್ನೊಂದು ಕಡೆ ಬರೆದುಕೊಳ್ಳಬೇಕು. 198 ವಾರ್ಡ್ಗಳಿವೆ. ಒಂದೊಂದು ವಾರ್ಡ್ಗೆ 200 ಯುವಕರು ಎಂದರೆ 2000 ಯುವಕರು ನಮಗಾಗಿ ಕೆಲಸ ಮಾಡುತ್ತಾರೆ” ಎಂದು ವಿವರಿಸಿದರು.
“ಅಕ್ಷರ ಕಲಿತವರು ಕೇರಿಯನ್ನು ಬಿಟ್ಟು ಬೇರೆ ಏರಿಯಾಗಳಿಗೆ ಹೋಗಿದ್ದಾರೆ. ಅವರು ತಮ್ಮ ಜಾತಿಯನ್ನು ಹೇಳಿಕೊಳ್ಳಲು ನಾಚಿಕೆ ಪಡುತ್ತಿದ್ದಾರೆ. ಅಂಥವರಿಗೆ ಆನ್ಲೈನ್ ವ್ಯವಸ್ಥೆ ಇದೆ. ಜಾತಿಯನ್ನು ಯಾರಿಗೂ ಹೇಳದಂತೆಯೇ ನೋಂದಣಿ ಮಾಡಿಕೊಳ್ಳಬಹುದು. ಆಟೋ ಮತ್ತು ಕರಪತ್ರದ ಮೂಲಕ ಪ್ರಚಾರ ಮಾಡಬೇಕಿದೆ” ಎಂದು ಸಲಹೆ ನೀಡಿದರು.
“ನಮ್ಮವರು ನಾಚಿಕೆಯನ್ನು ಬಿಡಬೇಕು. ಪೌರಕಾರ್ಮಿಕರು ಹೆಚ್ಚಿರುವಂತಹ ಜಗಜೀವನ್ ರಾಮ್ ನಗರ, ಸಬರ್ಲೈನ್, ಶ್ರೀರಾಂಪುರ, ಚಂದ್ರಪ್ಪನಗರ, ಮುರಡ್ಡಿಪಾಳ್ಯ ಮೊದಲಾದ ಕಡೆ ಪೌರಕಾರ್ಮಿಕರು ಹೆಚ್ಚಿದ್ದಾರೆ. ಅವರಿಗೆ ತಮ್ಮ ಜಾತಿಯನ್ನು ಹೇಳಿಕೊಳ್ಳಲು ತೊಂದರೆ ಇಲ್ಲ. ಆದರೆ ಆರ್ಥಿಕವಾಗಿ ಒಂದಿಷ್ಟು ಮುಂದುವರಿದವರು ಜಾತಿ ಹೇಳಿಕೊಳ್ಳುವುದಿಲ್ಲ. ಅವರಿಗೆ ಗೊಂದಲಗಳಿವೆ. ಇಂಥವರಿಗೆ ತಿಳಿ ಹೇಳಬೇಕಾಗಿದೆ” ಎಂದು ತಿಳಿಸಿದರು.
ಮುಖಂಡರ ನರಸಿಂಹಮೂರ್ತಿ ಮಾತನಾಡಿ, “ಜಾತಿಯನ್ನು ಹೇಳಿಕೊಳ್ಳದಿದ್ದರೆ ಸಮುದಾಯಕ್ಕೆ ದೊಡ್ಡ ದ್ರೋಹ ಬಗೆಯುತ್ತಿರೀ ಎಂಬುದನ್ನು ಜಾಗೃತಿ ಮೂಡಿಸಬೇಕು. ಕೀಳರಿಮೆ ಪಕ್ಕಕ್ಕಿಡಲು ಹೇಳಬೇಕಾಗಿದೆ. ಅಪಾರ್ಟ್ಮೆಂಟ್ನಲ್ಲಿ ಇರುವವರದ್ದೇ ಸಮಸ್ಯೆ. ಬಾಡಿಗೆ ಕೊಟ್ಟವರು ತಲೆಕೆಡಿಸಿಕೊಳ್ಳದಿದ್ದರೂ ಕೀಳರಿಮೆಯಿಂದ ಇವರೇ ನರಳುತ್ತಾರೆ” ಎಂದು ವಿಷಾದಿಸಿದರು.
ಇದನ್ನೂ ಓದಿರಿ: ಶಿವಮೊಗ್ಗ | ರಾಬರ್ಟ್ ವಾದ್ರಾರನ್ನು ಗುಂಡಿಕ್ಕಿ ಕೊಲ್ಲಿ: ಬಿಜೆಪಿ ಶಾಸಕ ಚನ್ನಬಸಪ್ಪ ಪ್ರಚೋದನಾಕಾರಿ ಹೇಳಿಕೆ
ನಾಗಮಣಿ ಮಾತನಾಡಿ, “ಮೂವತ್ತು ವರ್ಷಗಳ ಪ್ರತಿಫಲ ಇಂದು ಸಿಗುತ್ತಿದೆ. ಮುಂದಿನ ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಗುಡಿಸಲುಗಳಲ್ಲಿ ಅನಕ್ಷರಸ್ಥರಿರುತ್ತಾರೆ. ಅಂಥವರಿಗೆ ಮಾರ್ಗದರ್ಶನ ನೀಡಬೇಕು” ಎಂದರು.
ಮುಖಂಡರಾದ ವೈ.ನಾರಾಯಣಸ್ವಾಮಿ, ಸೋಮಶೇಖರ್ ಎಣ್ಣೂರು, ವೇಣು ಮೌರ್ಯ, ಎಣ್ಣೂರು ಮುನಿಯಪ್ಪ ಮೊದಲಾದವರು ಸಭೆಯಲ್ಲಿ ಹಾಜರಿದ್ದರು.
