ಮೇಲ್ದಂಡೆ ನಾಲೆ ದುರಸ್ತಿ ಮಾಡಿ, ನಾಲೆಗಳ ಹೂಳು ತೆಗೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ)ದಿಂದ ದಾವಣಗೆರೆಯ ಹದಡಿ ರಸ್ತೆಯಲ್ಲಿರುವ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, “ದಾವಣಗೆರೆ ತಾಲೂಕಿನ ಕುರ್ಕಿ ಭಾಗದ ಭದ್ರಾನಾಲಾ 7ನೇ ವಿಭಾಗದಲ್ಲಿ ಕಾಲುವೆಗಳಲ್ಲಿ ಸಾಕಷ್ಟು ತೊಂದರೆಗಳಿದ್ದು, ಇವುಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಬೇಕು” ಎಂದು ಆಗ್ರಹಿಸಿದರು.
“ಚಿಕ್ಕತೊಗಲೇರಿಯಿಂದ ಕುಕ್ಕವಾಡ ಗ್ರಾಮದವರೆಗೆ ಕೋಲ್ ಕುಂಟೆ, ಯರವನಾಗತಿಹಳ್ಳಿ, ಕಲ್ಕೆರೆ, ಕುಕ್ಕವಾಡ, ಗೋಪನಾಳು ಗ್ರಾಮದ ನಡುವೆ ಹರಿಯುವ 7ನೇ ವಿಭಾಗದ ಕಾಲುವೆಗಳಲ್ಲಿ ಬರುವ ಲೋಕಿಕೆರೆ, ಯರವನಾಗತಿಹಳ್ಳಿ, ಕೋಲ್ಕುಂಟೆ ಸಣ್ಣ ಗೇಟುಗಳು ಶಿಥಿಲಗೊಂಡಿದ್ದು, ನೀರು ಸಾಕಷ್ಟು ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ. ಇದರಿಂದ ಅಣೆಕಟ್ಟು ಭಾಗದ ರೈತರಿಗೆ ನೀರು ತಲುಪದೇ ಸಾಕಷ್ಟು ಸಮಸ್ಯೆಗಳಾಗಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಕುರ್ಕಿ ಎಡದಂಡೆ ಮತ್ತು ಬಲದಂಡೆ ದೊಡ್ಡ ಕಾಲುವೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹೋಗುತ್ತಿಲ್ಲ. ಮುಂದೆ ಇದರಿಂದ ಮೇಲ್ಭಾಗದ ರೈತರಿಗೆ ತೊಂದರೆ ಉಂಟಾಗಿದೆ. ಪೈಪುಗಳನ್ನು ಅಳವಡಿಸಿ ಈ ನಾಲೆ ದುರಸ್ತಿಗೊಳಿಸಬೇಕು” ಎಂದು ಆಗ್ರಹಿಸಿದರು.
“ಮುಂದಿನ ದಿನಗಳಲ್ಲಿ ಬೇಡಿಕೆಗಳು ಈಡೇರದೇ ಹೋದಲ್ಲಿ ಕೈದಾಳೆ ರಸ್ತೆಯಲ್ಲಿ ಬೃಹತ್ ರಸ್ತೆ ತಡೆ ಚಳುವಳಿ ಮತ್ತು ಲೋಕಿಕೆರೆ ರಸ್ತೆಯಲ್ಲಿ ಯರನಾಗತಿಹಳ್ಳಿ ರಸ್ತೆ ಬಂದ್, ಕುರ್ಕಿ ಗ್ರಾಮದಲ್ಲಿ ಬೀರೂರು – ಬಾಡ ರಸ್ತೆಯನ್ನು ಬಂದ್ ಮಾಡಿ ಏಕಕಾಲಕ್ಕೆ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಇಲಾಖೆಯ ಎಂಜಿನಿಯರ್ ಮಂಜುನಾಥ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮನೋಜ್ ಮಾತನಾಡಿ, “ಕಳೆದ ವರ್ಷ ನಾಲಾ ದುರಸ್ತಿಗೆ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಈ ಸಮಸ್ಯೆಗಳು ಎದುರಾಗಿವೆ. ಕಳೆದ ಅನೇಕ ವರ್ಷಗಳಿಂದ ನಾಲೆ ದುರಸ್ತಿಗೆ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಅನುದಾನ ಬಿಡುಗಡೆಯಾಗಿಲ್ಲ. ಇದೀಗ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಎಸ್ ಬಸವಂತಪ್ಪ ಅವರಿಗೂ ಮನವಿ ಮಾಡಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬರಗೂರು ಪ್ರಶಸ್ತಿಗೆ ಕೋಟಿಗಾನಹಳ್ಳಿ ರಾಮಯ್ಯ, ಸುಂದರರಾಜ್ ಆಯ್ಕೆ
“ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಈ ಸಂಬಂಧ ಸಭೆ ಕರೆದಿದ್ದಾರೆ. ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದು ಅನುದಾನ ಬಿಡುಗಡೆಗೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ಇಲಾಖೆಯ ಎಂಜಿನಿಯರ್ ಮಂಜುನಾಥ್ ಹೇಳಿದರು.
ಈ ಸಂದರ್ಭದಲ್ಲಿ ಕೈದಾಳೆ ವಸಂತಕುಮಾರ್, ಯರವನಾಗತಿಹಳ್ಳಿ ಬಾಲಾಜಿ,ಮಂಜುನಾಥ್, ಕುರ್ಕಿ ಹನುಮಂತ, ಹಿರೇ ಮಲ್ಲನಹೊಳೆಚಿರಂಜೀವಿ, ಕುಕವಾಡ ಬಸವರಾಜ್ ಸೇರಿದಂತೆ ಅನೇಕ ರೈತರು ಇದ್ದರು.