ಮಹಿಳಾ ಪತ್ರಕರ್ತೆಯ ವಿರುದ್ಧವಾಗಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ ತಮಿಳು ನಟ, ಮಾಜಿ ಬಿಜೆಪಿ ಮುಖಂಡ, ಪಕ್ಷಾಂತರಗೊಳ್ಳುವುದರಲ್ಲೇ ಖ್ಯಾತಿ ಪಡೆದಿರುವ ರಾಜಕಾರಣಿ ಎಸ್ವಿ ಶೇಖರ್ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಶೇಖರ್ ಅವರನ್ನು ತೀವ್ರವಾಗಿ ಟೀಕಿಸಿರುವ ಸರ್ವೋಚ್ಛ ನ್ಯಾಯಾಲಯ, ಪೋಸ್ಟ್ ಅನ್ನು ಪತ್ರಕರ್ತೆಯ ಘನತೆಗೆ ನೇರವಾಗಿ ದಾಳಿ ಮಾಡುವ ‘ಅಸಹ್ಯ ಅಭಿಯಾನ’ ಎಂದು ಕರೆದಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ್ ಸಿಂಗ್ ಅವರ ಪೀಠವು ಮುಂದಿನ ವಿಚಾರಣೆಯವರೆಗೆ ಶೇಖರ್ ಅವರಿಗೆ ಬಂಧನದಿಂದ ಮುಕ್ತಿ ನೀಡಿದೆ. ಆದರೆ ಅವರ ಉದ್ದೇಶಗಳನ್ನು ಪ್ರಶ್ನಿಸಿದೆ. ಶೇಖರ್ ಅವರು ಪೂರ್ಣ ಮನಸ್ಸಿನಿಂದ ಕ್ಷಮೆಯಾಚಿಸಿಲ್ಲ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
“ಮೊದಲನೆಯದಾಗಿ ನೀವು ಈ ರೀತಿ ಪೋಸ್ಟ್ ಮಾಡಿರುವುದು ನಮಗೆ ಆಶ್ಚರ್ಯ ತಂದಿದೆ. ಇದು ಮಹಿಳೆಯ ವಿರುದ್ಧ ನೀವು ನಡೆಸಿದ ಅಸಹ್ಯ ಅಭಿಯಾನವಾಗಿತ್ತು. ನೀವು ಅವರ ಘನತೆಗೆ ನೇರವಾಗಿ ಮತ್ತು ತುಂಬಾ ಲಜ್ಜೆಗೆಟ್ಟ ದಾಳಿಯನ್ನು ಮಾಡಿದ್ದೀರಿ” ಎಂದು ಸುಪ್ರೀಂ ಕೋರ್ಟ್ ಶೇಖರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
“ಶೇಖರ್ ಇತರ ಮಹಿಳೆಯರಿಗೂ ಕಿರುಕುಳ ನೀಡಿರಬಹುದು” ಎಂದು ಕಳವಳ ವ್ಯಕ್ತಪಡಿಸಿರುವ ಕೋರ್ಟ್, ಆದರೆ ಈ ಬಾರಿ ಪತ್ರಕರ್ತರ ಸಂಘದ ಎದುರು ಸಿಲುಕಿದ್ದಾರೆ ಎಂದಿದೆ. ಇನ್ನು ನಟನ ಪರವಾಗಿ ಹಾಜರಾದ ವಕೀಲ ಬಾಲಾಜಿ ಶ್ರೀನಿವಾಸನ್, ಶೇಖರ್ ಅವರು ಸಂದೇಶವನ್ನು ಓದದೆ ಫಾರ್ವರ್ಡ್ ಮಾಡಿ ಒಂದು ಗಂಟೆಯೊಳಗೆ ಅದನ್ನು ಡಿಲೀಟ್ ಮಾಡಿದ್ದಾರೆ ಎಂದು ವಾದಿಸಿದ್ದಾರೆ.
ದೂರುದಾರರನ್ನು ಸಂಪರ್ಕಿಸಿ ಬೇಷರತ್ತಾದ ಕ್ಷಮೆಯಾಚಿಸಲು ಶೇಖರ್ ಅವರ ವಕೀಲರು ನಾಲ್ಕು ವಾರಗಳ ಕಾಲಾವಕಾಶವನ್ನು ಕೋರಿದರು.
2018ರಲ್ಲಿ ಪತ್ರಕರ್ತೆಯೊಬ್ಬರ ವಿರುದ್ಧ ಶೇಖರ್ ಅವರು ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಪೋಸ್ಟ್ ವ್ಯಾಪಕ ಖಂಡನೆಗೆ ಗುರಿಯಾಯಿತು. ಪತ್ರಕರ್ತರ ಸಂಘವು ಶೇಖರ್ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ಪಕ್ಷದಿಂದ ಪಕ್ಷಕ್ಕೆ ಜಿಗಿಯುವ ಮೂಲಕವೇ ಹೆಚ್ಚು ಸುದ್ದಿಯಾಗಿರುವ ತಮಿಳು ನಟ ಈ ಪೋಸ್ಟ್ ಮಾಡುವಾಗ ಬಿಜೆಪಿಯಲ್ಲಿದ್ದರು.
2006ರಲ್ಲಿ ಎಐಎಡಿಎಂಕೆ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ ಶೇಖರ್ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮೈಲಾಪುರ ಶಾಸಕರಾಗಿದ್ದರು. 2009ರಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದರು. ಅದಾದ ಬಳಿಕ ಕಾಂಗ್ರೆಸ್ ಸೇರಿದ್ದರು. ಅಲ್ಲಿಯೂ ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಉಚ್ಛಾಟನೆಗೊಂಡು ಬಿಜೆಪಿಗೆ ಸೇರಿದರು. 2009ರಲ್ಲಿ ಶೇಖರ್ ದಕ್ಷಿಣ ಭಾರತದ ಬ್ರಾಹ್ಮಣರ ಸಂಘಟನೆಯನ್ನೂ (Federation of Brahmin Associations of South India) ಸ್ಥಾಪಿಸಿದ್ದಾರೆ.
