ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ಕಚವಿ ಗ್ರಾಮ ಪಂಚಾಯತಿ ಪಿಡಿಓ ಪರಮೇಶ್ವರಪ್ಪ ಗಿರಿಯಣ್ಣನವರ ವಿರುದ್ಧ ಜಾತಿ ನಿಂದನೆ ಹಾಗೂ ಕರ್ತವ್ಯಲೋಪ ಆರೋಪ ಕೇಳಿಬಂದಿದ್ದು, ಕೂಡಲೇ ವರ್ಗಾವಣೆ ಮಾಡುವಂತೆ ಮಾಜಿ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಚಂದ್ರಪ್ಪ ಹರಿಜನ ಆಗ್ರಹ ಮಾಡಿದ್ದಾರೆ.
ಜಿಲ್ಲಾ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಅವರ ನೇತೃತ್ವದಲ್ಲಿ ಹಾವೇರಿ ಜಿಲ್ಲಾ ಪಂಚಾಯತ್ ಸಿಇಒ ರುಚಿ ಬಿಂದಾಲ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿಲಾಯಿತು. ನಂತರ ಮಾತನಾಡಿದ ಕಚವಿ ಗ್ರಾಪಂನ ಹಾಲಿ ಸದಸ್ಯೆಯೂ ಆಗಿರುವ ಗಿರಿಜಮ್ಮ, “ಪಿಡಿಒ ಪರಮೇಶ್ವರಪ್ಪ, ಪಂಚಾಯತಿ ಅಭಿವೃದ್ಧಿ ಕೆಲಸಗಳ ಕಡೆ ಕಿಂಚಿತ್ತೂ ಗಮನ ಹರಿಸುವುದಿಲ್ಲ. ಪಂಚಾಯತಿಗೆ ಬರೋದಿಲ್ಲ. ಬಂದರೂ ಕೆಲಸ ಮಾಡಲ್ಲ. ಯಮ್ಮಿಗನೂರು ಮತ್ತು ಪುರಪುಂಡಿಕೊಪ್ಪ ಕಚವಿ ತಾಂಡಾಗಳಿಗೆ 2021ರಲ್ಲಿ 14-15 ನೇ ಹಣಕಾಸು ಯೋಜನೆಯಡಿ ಮನರೇಗಾ ಅನುದಾನದಲ್ಲಿ ಅಕ್ರಮ ಎಸಗಿದ್ದಾರೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ಗ್ರಾಮಗಳ ಅಭಿವೃದ್ಧಿಗೆ ಬಂದ ಸರ್ಕಾರದ ಅನುದಾನಗಳ ಬಗ್ಗೆ ಯಾವುದೇ ಮಾಹಿತಿ ನೀಡದೇ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಅವರ ವಿರುದ್ಧ ಸೂಕ್ತ ಕ್ರಮ ಆಗಬೇಕು” ಎಂದರು.
“ಉದ್ದೇಶ ಪೂರ್ವಕವಾಗಿ ಅಭಿವೃದ್ಧಿ ಕಾರ್ಯಗಳ ವಿಳಂಬ ಮಾಡುತ್ತಾರೆ. ಜಾತಿ ಮತ್ತು ಹಣದ ಆಮಿಷಕ್ಕೆ ಒಳಗಾಗಿದ್ದಾರೆ. ನಾವೇನಾದರೂ ಕೆಲಸದ ಬಗ್ಗೆ ಕೇಳಿದರೆ ಏಕ ವಚನದಿಂದ ಮಾತನಾಡಿ ಜಾತಿ ನಿಂದನೆ ಮಾಡುತ್ತಾರೆ. ಅಲ್ಲದೇ ಅನೇಕ ಬಾರಿ ಅಪಮಾನ ಮಾಡಿದ್ದಾರೆ. ಸರ್ಕಾರದಿಂದ ಬರುವ ಮಾಹಿತಿ ಕೇಳಿದಾಗ ನಮಗೆ ಸ್ಪಂದಿನೆ ನೀಡುವುದಿಲ್ಲ. ಮನರೇಗಾ ಯೋಜನೆಯ ಕೆಲಸದಲ್ಲಿ ಕೂಲಿ ಕಾರ್ಮಿಕರಿಗೆ ಇದು ವರೆಗೂ ಕೆಲಸ ಕೊಟ್ಟಿಲ್ಲ. ಯಮ್ಮಿಗನೂರು ಗ್ರಾಮದ ಎಸ್ಸಿ ಮತ್ತು ಎಸ್ಟಿ ಸೋಲಾರ ಕೂಡಾ ನೀಡಿಲ್ಲ. 2021 ರಲ್ಲಿ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡವರಿಗೆ ಬಿಲ್ ಪೆಂಡಿಂಗ್ ಇಟ್ಟುಕೊಂಡಿದ್ದಾರೆ. ಪಂಚಾಯತಿಗೆ ಬರುವ ಸಾರ್ವಜನಿಕರೊಂದಿಗೆ ಉದ್ದಟತನದಿಂದ ನಡೆದುಕೊಳ್ಳುತ್ತಾರೆ. ಗ್ರಾಪಂ ಸದಸ್ಯರಲ್ಲಿ ತಾರತಮ್ಯವನ್ನು ಮಾಡಿಕೊಂಡು ಬಂದಿದ್ದಾರೆ. ನಾನು ಹೇಳಿದ ಒಂದು ಕೆಲಸವನ್ನು ಇದು ವರಗೂ ಸರಿಯಾಗಿ ಮಾಡುತ್ತಿಲ್ಲ. ಕೀಳು ಜಾತಿಯವರನ್ನು ನಾವೇಕೆ ಭೇಟಿ ಮಾಡಬೇಕು ಅವರು ಹೇಳಿದಂತೆ ನಾವು ಕೆಲಸ ಮಾಡಬೇಕಾ ಅನ್ನುವ ಮನಸ್ಥಿತಿ ಇವರಿಗಿದೆ. ತಕ್ಷಣ ಇವರನ್ನು ಇಲ್ಲಿಂದ ವರ್ಗಾವಣೆ ಮಾಡಲೇಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ:ಹಾವೇರಿ | ಅಸಮಾನತೆ ವಿರುದ್ಧ ಧ್ವನಿ ಎತ್ತಲು ಶಿಕ್ಷಣ ಬೇಕು: ಭವ್ಯ ನರಸಿಂಹಮೂರ್ತಿ
ಈ ಸಂದರ್ಭದಲ್ಲಿ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಮುಖಂಡರಾದ ಚಂದ್ರಪ್ಪ ಹರಿಜನ, ಜಗದೀಶ್ ಹರಿಜನ ಉಪಸ್ಥಿತರಿದ್ದರು.