ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವತಿಯಿಂದ ರವಿವಾರ ಕಲಬುರಗಿ ನಗರದಲ್ಲಿ ರವಿವಾರ ಬೃಹತ್ ಪ್ರತಿಭಟನೆ ನಡೆಯಿತು.
ನಗರದ ನಗರೇಶ್ವರ್ ಶಾಲೆಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ನೆಹರು ಗಂಜ, ಕಿರಾಣಾ ಬಜಾರ್, ಸೂಪರ್ ಮಾರ್ಕೆಟ್ ಮಾರ್ಗವಾಗಿ ಜಗತ್ ವೃತ್ತದವರೆಗೆ ಜರುಗಿತು.
ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಜನರು ವಕ್ಫ್ ತಿದ್ದುಪಡಿ ಕಾಯಿದೆ 2025ರ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೇ ಈ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿದರು..
ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ, ಕೆಎಸ್ಐಸಿ ಅಧ್ಯಕ್ಷೆ ಕನೀಜಾ ಫಾತೀಮಾ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೊಳಿಸಿದ ವಕ್ಫ್ ಕಾಯ್ದೆ 2025 ಅನ್ನು ಕೂಡಲೇ ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಸಿಎಎ – ಎನ್ಆರ್ಸಿ ರೀತಿಯಲ್ಲಿ ನಿರಂತರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

‘ದೇಶದಲ್ಲಿ ಜಾರಿಯಾಗುತ್ತಿರುವ ವಕ್ಫ್ ಕಾಯ್ದೆ ಅಸಂವಿಧಾನಿಕವಾಗಿದೆ. ಇದು ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ವಿರೋಧಿ ಕಾಯ್ದೆಯಾಗಿದೆ. ಒಂದು ವೇಳೆ ಕೇಂದ್ರ ಸರಕಾರ ಇದನ್ನು ಹಿಂಪಡೆಯದಿದ್ದರೆ ದೇಶದಾದ್ಯಂತ ದಿಲ್ಲಿಯ ಶಾಹೀನ್ ಭಾಗ್ ರೀತಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ’ ಎಂದರು.
ಖ್ವಾಜಾ ಬಂದಾ ನವಾಜ್ ದರ್ಗಾದ ಸಜ್ಜಾದಾನಶೀನ್ ಮತ್ತು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಹಾಫಿಜ್ ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಸಾಬ್ ಮಾತನಾಡಿ, ‘ವಿವಾದಿತ ವಕ್ಫ್ ಕಾಯ್ದೆಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ವಾಪಸ್ ಪಡೆಯಬೇಕು. ಹಿಂಪಡೆಯುವ ಮಾತುಗಳು ಕೇಳದಿದ್ದರೆ ಈ ರೀತಿಯ ಬೃಹತ್ ಪ್ರಮಾಣದಲ್ಲಿ ಹೋರಾಟಗಳು ನಿತ್ಯವೂ ನಡೆಯಲಿವೆ. ಕಾಯ್ದೆ ರದ್ದತಿ ಆಗುವವರೆಗೂ ಹೋರಾಟ ನಿಲ್ಲುವುದಿಲ್ಲʼ’ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬಸವ ಜಯಂತಿ ದಿನ ರೇಣುಕಾಚಾರ್ಯ ಜಯಂತಿ ಆಚರಣೆ; ಸುತ್ತೋಲೆ ಹಿಂಪಡೆದ ಅಖಿಲ ಭಾರತ ವೀರಶೈವ ಮಹಸಭಾ
ಪ್ರತಿಭಟನೆಯಲ್ಲಿ ಶೈಖ್ ಶಾ ಮುಹಮ್ಮದ್ ಅಫ್ಜಲುದ್ದೀನ್ ಜುನೈದಿ ಸಾಬ್, ಫರಾಜ್ ಉಲ್ ಇಸ್ಲಾಂ, ಡಾ. ಸಯ್ಯದ್ ಮುಸ್ತಫಾ ಅಲ್ ಹುಸೈನಿ ಸಾಬ್, ಸಯ್ಯದ್ ಅಖೀಬ್ ಹುಸೈನಿ ಸಾಬ್, ನಜಾರ್ ಮೊಹಮ್ಮದ್ ಬಾಬಾ ಖಾನ್, ಮಾಜಿ ಕೆಯುಡಿಎ ಅಧ್ಯಕ್ಷರಾದ ಮೊಹಮ್ಮದ್ ಅಸ್ಗರ್ ಚುಲ್ಬುಲ್, ಶರೀಫ್ ಮಝ್ಹರಿ ಸಾಬ್, ಅಹ್ಮರ್ ಉಲ್ ಇಸ್ಲಾಂ, ಅಡ್ವೊಕೇಟ್ ವಹಾಜ್ ಬಾಬಾ, ಪ್ರಸ್ತುತ ಕೆಯುಡಿಎ ಅಧ್ಯಕ್ಷರಾದ ಮಝ್ಹರ್ ಆಲಂ ಖಾನ್, ಆರಿಫ್ ಖಾನ್, ಕೆ.ನೀಲಾ, ಮೀನಾಕ್ಷಿ ಬಾಳಿ, ಮೌಲಾ ಮುಲ್ಲಾ, ಮುಬೀನ ಅಹ್ಮದ್ ಸೇರಿದಂತೆ ಧಾರ್ಮಿಕ ಪಂಡಿತರು, ಸೂಫಿ ಮಹಾನುಭಾವರು, ಉದ್ಯಮಿಗಳು ಮತ್ತು ಸಾವಿರಾರು ಸಾಮಾನ್ಯ ನಾಗರಿಕರು ಭಾಗವಹಿಸಿದ್ದರು.