ಗುಂಡು ಹಾರಿಸಿಕೊಂಡು ಉದ್ಯಮಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ದೂಪದಕಟ್ಟೆ ಬಳಿ ಸಂಭವಿಸಿದ್ದು ಅನಾರೋಗ್ಯ-ಉದ್ಯಮದಲ್ಲಿ ನಷ್ಟದಿಂದ ಈ ಕೃತ್ಯ ಎಸಗಿದ್ದಾರೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ.ಹೇಳಿದ್ದಾರೆ.
ಮೃತರನ್ನು ಮಂಗಳೂರು ನಿವಾಸಿ,ಕಾರ್ಕಳದ ಉದ್ಯಮಿ, ದಿಲೀಪ್ ಎನ್. ಆರ್. ಎಂದು ಗುರುತಿಸಲಾಗಿದೆ. ದಿಲೀಪ್ ಅವರು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದರು. ಹೋಟೆಲ್ ಉದ್ಯಮ ನಡೆಸುತ್ತಿದ್ದ ಇವರು ಉದ್ಯಮದಲ್ಲಿ ನಷ್ಟವನ್ನು ಕೂಡ ಅನುಭವಿಸಿದ್ದು ಕಾಯಿಲೆ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾನಸಿಕವಾಗಿ ತುಂಬಾ ನೊಂದಿದ್ದರು.
ಸೋಮವಾರ ರಾತ್ರಿ ತನ್ನ ಸ್ನೇಹಿತರಿಗೆ ಹಾಗೂ ಆಪ್ತರಿಗೆ ವಾಟ್ಸಪ್ನಲ್ಲಿ ನಾನು ನಿಮ್ಮನ್ನು ಬಿಟ್ಟು ದೂರ ಹೋಗುತ್ತಿದ್ದೇನೆ ಎಂದು ಮೆಸೇಜ್ ಕಳುಹಿಸಿದ್ದರು. ದಿಲೀಪ್ ರನ್ನು ಸಂಪರ್ಕಿಸಲು ಪ್ರಯತ್ನಪಟ್ಟಾಗ ಯಾವುದೇ ಸುಳಿವು ಸಿಗದೆ, ಪೋಲೀಸರ ಸಹಾಯದಿಂದ ಹುಡುಕಾಟ ಪ್ರಾರಂಭಿಸಿ ಮೊಬೈಲ್ ನಂಬರ್ ಲೊಕೇಶನ್ ಆಧಾರದಲ್ಲಿ ಹುಡುಕಾಡಿದಾಗ ಕಾರ್ಕಳದ ದೂಪದಕಟ್ಟೆ ಎಂಬಲ್ಲಿ ಕಾರು ಪತ್ತೆಯಾಗಿದೆ. ಕಾರನ್ನು ಪರಿಶೀಲಿಸಿದಾಗ ದಿಲೀಪ್ ವಿಷ ಸೇವಿಸಿ ತನ್ನ ಸರ್ವಿಸ್ ರಿವಾಲ್ವರ್ ನಿಂದ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ ಎಂದು ಎಸ್ಪಿ ತಿಳಿಸಿದ್ದಾರೆ.