ಮೇ 5 ರಿಂದ ಉಡುಪಿ ಜಿಲ್ಲೆಯಲ್ಲಿ ನಡೆಯುವ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದ್ದು ದಲಿತರು ಸರಿಯಾದ ಮಾಹಿತಿ ನೀಡುವಂತೆ ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮನವಿಮಾಡಿದ್ದಾರೆ.
ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳ ಸಮೀಕ್ಷೆಗೆ ಬರುವ ಸಂದರ್ಭದಲ್ಲಿ ಮನೆಯಲ್ಲಿ ವಿದ್ಯಾವಂತರು ಇಲ್ಲದಿದ್ದರೆ ಸಮೀಕ್ಷೆಗಾರರಿಗೆ ಮರುದಿನ ಬರುವಂತೆ ಸೂಚಿಸಬೇಕು. ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿಯ ಉಪಜಾತಿ ಕೇಳಿದರೆ ಆದಿದ್ರಾವಿಡ ಎಂದು ನಮೂದಿಸಬೇಕು. ಒಂದು ವೇಳೆ ಆದಿದ್ರಾವಿಡದಲ್ಲಿ ಉಪಜಾತಿ ಕೇಳಿದರೆ ಇಲ್ಲ ಎನ್ನಬೇಕು. ಯಾವುದೇ ಕಾರಣಕ್ಕೆ ಗೊತ್ತಿಲ್ಲ ಎನ್ನಬಾರದು.
ಯಾವುದೇ ಕಾರಣಕ್ಕೆ ವೃತ್ತಿ ಆಧಾರದಿಂದ ಬರುವ ಹೆಸರುಗಳನ್ನು ಉಪಜಾತಿಯೆಂದು ನಮೂದಿಸಬಾರದು ಮತ್ತು ಪರಿಶಿಷ್ಟಜಾತಿಯಲ್ಲಿ ಆದಿದ್ರಾವಿಡ ಹೊರತುಪಡಿಸಿ, ಉಪಜಾತಿಗಳು ಹುಟ್ಟಿಕೊಂಡಿರುವುದಿಲ್ಲ ಮತ್ತು ಹುಟ್ಟಿಕೊಂಡಿದ್ದರೂ ಯಾವುದೇ ಆಧಾರವಿರುವುದಿಲ್ಲ ಎಂದು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಸ್ಪಷ್ಟಪಡಿಸಿದ್ದಾರೆ.