ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆ ಮಾಡಲು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮುಂದಾಗಿರುವುದನ್ನು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಾಮೂಹಿಕವಾಗಿ ಸ್ವಾಗತಿಸಲಿದೆ. ನಾವು ಭೂಮಿ ಕೊಡಲು ಸಿದ್ಧ. ಯಾವುದೇ ಕಾರಣಕ್ಕೂ ಕೈಗಾರಿಕೆ ಸ್ಥಾಪನೆ ಮಾಡುವ ಸಂಕಲ್ಪದಿಂದ ಹಿಂದೆ ಸರಿಯಬಾರದು ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಾಮೂಹಿಕ ನಾಯಕತ್ವ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಸರಕಾರಕ್ಕೆ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು, ರೈತರನ್ನು ದಿಕ್ಕು ತಪ್ಪಿಸುತ್ತಿರುವ ಕೆಲವು ಮುಖಂಡರ ನಡೆಯನ್ನಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಅವರು ಖಂಡಿಸಿದ್ದಾರೆ. ನಮ್ಮ ಮುಂದೆ ಒಂದು ಹೇಳುತ್ತೀರಿ? ರೈತರ ಮುಂದೆ ಹೋಗಿ ಮತ್ತೊಂದು ಹೇಳುತ್ತೀರಿ? ನಿಮ್ಮ ಮಾತಿಗೆ ಬೆಲೆ ನೀಡಿಯೇ ರೈತರೊಂದಿಗೆ ಸಮಾಲೋಚನಾ ಸಭೆ ಏರ್ಪಡಿಸಿ ಪಾರದರ್ಶಕತೆ ಮೆರೆಯಲಾಗಿದೆ. ಹೀಗಿದ್ದೂ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ. ಹಸಿರು ಶಾಲು ಹಾಕಿಕೊಂಡವರು ಮಾತ್ರ ರೈತರಲ್ಲ. ಶಾಲು ಹಾಕಿಕೊಳ್ಳದೇ ಇರುವ ರೈತರೂ ಸಾಕಷ್ಟು ಇದ್ದಾರೆ ಎಂದು ಹೇಳಿದ್ದಾರೆ. ಇದರಲ್ಲಿ ಏನೂ ತಪ್ಪಿಲ್ಲ ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕೈಗಾರಿಕಾಭಿವೃದ್ಧಿಯಾಗಿ ಸ್ಥಳೀಯರಿಗೆ ಇದ್ದಲ್ಲಿಯೇ ಉದ್ಯೋಗ ನೀಡುತ್ತಿದ್ದಾರೆ. ಶಿಡ್ಲಘಟ್ಟ ತಾಲೂಕಿನಲ್ಲಿ ಮಾತ್ರ ಕೊರತೆಯಿತ್ತು. ಇದನ್ನು ಮನಗಂಡ ಶಾಸಕ ಬಿ.ಎನ್.ರವಿಕುಮಾರ್,ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆ ತರಲು ಶ್ರಮಿಸಿದ್ದಾರೆ. ಇದಾದಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆತು, ಹೊಸಕೋಟೆ, ಕೋಲಾರ, ದೊಡ್ಡಬಳ್ಳಾಪುರದತ್ತ ಕೆಲಸ ಹುಡುಕಿಕೊಂಡು ಹೋಗುವುದು ತಪ್ಪಲಿದೆ.ಮೇಲಾಗಿ ಭೂಮಿಕೊಡುವ ರೈತರಿಗೆ ಒಳ್ಳೆಯ ಬೆಲೆ ದೊರೆಯಲಿದೆ. ಇದನ್ನು ಅರ್ಥಮಾಡಿಕೊಳ್ಳದ ಕೆಲವರು ರಿಯಲ್ ಎಸ್ಟೇಟ್ನವರಿಗೆ, ಲೇಔಟ್ ಮಾಡುವವರಿಗೆ
ಭೂಮಿ ಕೊಡಲು ತಕರಾರು ಮಾಡದೆ, ಸರಕಾರಕ್ಕೆ ತಕರಾರು ಮಾಡುತ್ತಿರುವುದು ಸರಿಯಲ್ಲ ಎಂದು ಬೇಸರಿಸಿದರು.
ಜಿಲ್ಲಾಧ್ಯಕ್ಷ ಮುನಿಕೆಂಪಣ್ಣ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರಲ್ಲಿ ಎಳ್ಳಷ್ಟೂ ಸುಳ್ಳಿಲ್ಲ. ಯಾವ ರೈತರೂ ಕೆಲಸ ಮಾಡುವಾಗ ಹಸಿರು ಶಾಲು ಹಾಕಿಕೊಂಡು ಮಾಡುವುದಿಲ್ಲ.ಹೋದಲ್ಲಿ ಬಂದಲ್ಲಿ ಶಾಲು ಹಾಕಿಕೊಂಡೇ ಇರುವುದಿಲ್ಲ.ಕೆಲಸ ಮಾಡದವರು ಹೀಗೆ ಮಾಡಬಹುದು ಅಷ್ಟೇ ಎಂದು ಹೇಳಿದ ಅವರು, ಕೈಗಾರಿಕೆ ಸ್ಥಾಪನೆ ಮಾಡುವ ವಿಚಾರದಲ್ಲಿ ಇವರಷ್ಟು ಪಾರದರ್ಶಕವಾಗಿ ನಡೆದುಕೊಂಡ ಮತ್ತೊಬ್ಬ ಜನನಾಯಕರನ್ನು ನಾವು ಕಂಡಿಲ್ಲ ಎಂದು ಸಚಿವರನ್ನು ಪ್ರಶಂಶಿಸಿದರು.
ಜಂಗಮಕೋಟೆಯಲ್ಲಿ ಮೊನ್ನೆ ನಡೆದ ರೈತರ ಅಭಿಪ್ರಾಯ ಸಂಗ್ರಹದಲ್ಲಿ ಭಾಗಿಯಾಗಿದ್ದ ಶೇ.80ರಷ್ಟು ಮಂದಿ ಭೂಮಿ ಕೊಡಲು ಒಪ್ಪಿದ್ದಾರೆ. ಇದನ್ನು ಮನಗಂಡ ಕೆಲವರು ಗ್ರಾಮೀಣ ಪ್ರದೇಶಗಳಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿದ್ದಾರೆ. ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಭೂಮಿಕೊಡಲು ಒಪ್ಪಿರುವ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸಬಾರದು. ಕಾನೂನು ಕೈಗೆತ್ತಿಕೊಂಡು ರೈತರಿಗೆ ತೊಂದರೆ ಕೊಡುವ ಯಾರೇ ಆಗಿರಲಿ ಅವರಿಗೆ ಕಾನೂನು ಪ್ರಕಾರವೇ ಬುದ್ಧಿ ಕಲಿಸಿ ಎಂದು ಸಚಿವರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಜಾತಿ ಜನಗಣತಿ: ಹೊಲೆಯ ಅಥವಾ ಹೊಲೆಯರು ಎಂದು ನಮೂದಿಸಿ; ಕೈವಾರ ಮಂಜುನಾಥ್
ವೇದಿಕೆಯಲ್ಲಿ ರೈತಸಂಘದ ಮುಖಂಡರಾದ ಆಂಜಿನಪ್ಪ, ಕದಿರಪ್ಪ, ಬಾಬೂಸಾಬ್, ನಾರಾಯಣಸ್ವಾಮಿ, ಚಿನ್ನಕೃಷ್ಣಪ್ಪ ಮತ್ತತರರು ಇದ್ದರು.